ರಾಜಕೀಯ ಪ್ರವೇಶಕ್ಕೆ ಜೈ ಎಂದ 'ವರ್ಷ ವ್ಯಕ್ತಿ' ಪ್ರಕಾಶ್ ರೈ!
ಬೆಂಗಳೂರು, ಡಿಸೆಂಬರ್ 31 : ಗೌರಿ ಲಂಕೇಶ್ ಹತ್ಯೆಯ ನಂತರ ಬಿಜೆಪಿಯನ್ನು ಮತ್ತು ಮೋದಿಯವರ ನೀತಿಗಳನ್ನು ಪ್ರಶ್ನಿಸುತ್ತಲೇ ಬಂದಿರುವ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಅವರು, ಯಾರಾದರೂ ಬಲವಂತ ಮಾಡಿದರೆ ತಾವು ರಾಜಕೀಯಕ್ಕೆ ಬರಲು ಸಿದ್ಧ ಎಂದು ಘೋಷಣೆ ಮಾಡಿದ್ದಾರೆ.
ಭಾನುವಾರ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ 'ವರ್ಷದ ವ್ಯಕ್ತಿ' ಪ್ರಶಸ್ತಿಯನ್ನು ಸ್ವೀಕರಿಸಿ, ಗೌರಿ ಹತ್ಯೆಯ ನಂತರ ನಾನು ಸಾಕಷ್ಟು ವಿಚಲಿತನಾದೆ. ಹೀಗಾಗಿ #JustAsking ಹ್ಯಾಶ್ ಟ್ಯಾಗ್ ನೊಂದಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದೇನೆ. ನನಗೆ ಯಾವುದೇ ಜಾತಿಯಿಲ್ಲ, ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಧರ್ಮ ವಿನಯವಂತಿಕೆಯನ್ನು ಬೆಳೆಸಬೇಕೇ ಹೊರತು ಸರ್ವಾಧಿಕಾರವನ್ನು ಬೆಳೆಸಬಾರದು. ಈ ಸರ್ವಾಧಿಕಾರವನ್ನು ಪ್ರಶ್ನಿಸಿ ಗಟ್ಟಿಯಾಗಿ ಮಾತನಾಡಲು ಆರಂಭಿಸಿದ್ದೇನೆ. ಈ ಧೈರ್ಯ ನನ್ನಲ್ಲಿ ತುಂಬಿದವರು ಮಾಧ್ಯಮದವರು. ಈ ಪ್ರಶಸ್ತಿ ನನಗೆ ಇನ್ನಷ್ಟು ಗಟ್ಟಿಯಾಗಲು ಮಾತನಾಡಲು, ನನಗೆ ಸರಿಯಲ್ಲ ಅಂತ ಅನ್ನಿಸಿದ್ದನ್ನು ಪ್ರಶ್ನಿಸಲು ಧೈರ್ಯ ತಂದುಕೊಟ್ಟಿದೆ ಎಂದು ಅವರು ನುಡಿದರು.

ತಮಿಳುನಾಡಿನಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿರುವ ಪ್ರಕಾಶ್ ರೈ ಅವರು, ತಮಿಳುನಾಡಿನ ಮತ್ತೊಬ್ಬ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸಿರುವ ಸಂದರ್ಭದಲ್ಲಿಯೇ, ತಾವು ಕೂಡ ರಾಜಕೀಯಕ್ಕೆ ಬರಲು ಸಿದ್ಧ ಎಂದು ಪ್ರಕಾಶ್ ರೈ ಸಾರಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಪ್ರಕಾಶ್ ಅವರು ತಮಿಳುನಾಡಿನಲ್ಲಿ ರಾಜಕೀಯಕ್ಕೆ ಧುಮುಕುತ್ತಾರೋ, ಕರ್ನಾಟಕದಲ್ಲಿಯೇ ರಾಜಕೀಯರಂಗಕ್ಕೆ ಇಳಿಯುತ್ತಾರೋ ತಿಳಿದುಬಂದಿಲ್ಲ.
ಪ್ರಕಾಶ್ ರೈ ಅವರು ತಾವು ಯಾವುದೇ ರಾಜಕೀಯ ಪಕ್ಷದ ಪರವಾಗಿಯೂ ಇಲ್ಲ ಎಂದು ಹೇಳಿದ್ದರೂ, ಅವರು ನೀಡುತ್ತಿರುವ ಹೇಳಿಕೆಗಳು ಪಕ್ಕಾ ರಾಜಕಾರಣಿಯಂತೆ ಇವೆಯಾ, ಯಾವುದೋ ರಾಜಕೀಯ ಪಕ್ಷವನ್ನು ಬೆಂಬಲಿಸುವಂತೆ ಹೇಳಿಕೆ ನೀಡುತ್ತಿದ್ದಾರಾ ಎಂದು ಸಂದೇಹ ಬರುವಂತೆ ಅವರ ಹೇಳಿಕೆಗಳೂ ಪೂರಕವಾಗಿವೆ. ಯಾವುದೇ ವ್ಯಕ್ತಿ ಯಾವುದೇ ರಾಜಕೀಯ ಪಕ್ಷದ ಪರವಾಗಿ ನಿಲುವು ಹೊಂದುವುದು ತಪ್ಪೇನೂ ಅಲ್ಲ, ಅಲ್ವೆ?
ಪ್ರಕಾಶ್ ರೈ ಅವರ ರಾಜಕೀಯ ಪ್ರವೇಶದ ಬಗ್ಗೆ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು, ಪ್ರಶ್ನೆಸದೆ ಯಾವುದನ್ನೂ ಒಪ್ಪದ ಪ್ರಕಾಶ್ ಅಂಥವರು ರಾಜಕೀಯಕ್ಕೆ ಬರಬೇಕು ಎಂದು ಹೇಳಿದ್ದರೆ, ಇವರು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ ಯಾರಾದರೂ ಯಾಕೆ ಒತ್ತಾಯ ಮಾಡಬೇಕು ಎಂದು ವ್ಯಂಗ್ಯಭರಿತ ಚಾಟಿ ಬೀಸಿದ್ದಾರೆ.












Click it and Unblock the Notifications