ಶರತ್ ಬಚ್ಚೇಗೌಡಗೆ ವೋಟ್ ಹಾಕಬೇಡಿ ಎಂದು ಹಿಂದೆ ನಾನೇ ಹೇಳಿದ್ದೆ
ಬೆಂಗಳೂರು, ಫೆ 25: ನಿರೀಕ್ಷೆಯಂತೆ ಹೊಸಕೋಟೆ ಕ್ಷೇತ್ರದ ಯುವ ಶಾಸಕ ಶರತ್ ಬಚ್ಚೇಗೌಡ, ಕಾಂಗ್ರೆಸ್ಸಿನ ಹಿರಿಯ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ, ಗುರುವಾರ ಬಾಹ್ಯ ಬೆಂಬಲವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ಭೈರತಿ ಸುರೇಶ್, ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, "ಕ್ಷೇತ್ರದಲ್ಲಿನ ಅಭಿವೃದ್ದಿಗೆ ನಮ್ಮ ಸಹಕಾರ ಬೇಕೆಂದು ಶರತ್ ಅವರು ಬಂದಿದ್ದಾರೆ. ಅವರಿಗೆ ಕಾಂಗ್ರೆಸ್ಸಿನ ಎಲ್ಲಾ ಬೆಂಬಲವೂ ಸಿಗಲಿದೆ"ಎಂದು ಹೇಳಿದರು.

"ಈ ಹಿಂದೆ ನಾನೇ ಶರತ್ ಅವರಿಗೆ ವೋಟ್ ಹಾಕಬೇಡಿ, ಭೈರತಿ ಅವರ ಪತ್ನಿಗೆ ಮತ ಹಾಕಿ ಎಂದು ಹೇಳಿದ್ದೆ. ಆದರೂ, ಕ್ಷೇತ್ರದ ಜನರು ಶರತ್ ಅವರನ್ನೇ ಆಶೀರ್ವದಿಸಿದರು. ನಮ್ಮ ಸಂಪೂರ್ಣ ಬೆಂಬಲ ಅವರಿಗಿರಲಿದೆ"ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
"ಶರತ್ ಬಚ್ಚೇಗೌಡ ಅವರನ್ನು ಮೂಲೆಗುಂಪು ಮಾಡುವ ಬಿಜೆಪಿ ಸರ್ಕಾರದ ಹುನ್ನಾರವನ್ನು ಖಂಡಿಸುವ ಜೊತೆಗೆ, ಹೊಸಕೋಟೆಯಲ್ಲಿ ನಡೆಯುತ್ತಿರುವ ಅಧಿಕಾರದ ದುರ್ಬಳಕೆ ಮತ್ತು ಅಕ್ರಮಗಳ ವಿರುದ್ಧದ ಹೋರಾಟಕ್ಕೆ ಶರತ್ ಬಚ್ಚೇಗೌಡ ಅವರ ಜೊತೆ ನಾವು ಕೈಜೋಡಿಸಲಿದ್ದೇವೆ"ಎಂದು ಸಿದ್ದರಾಮಯ್ಯ ಹೇಳಿದರು.
"ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕರಾದ ಶರತ್ ಬಚ್ಚೇಗೌಡ ಅವರು ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧದ ತಮ್ಮ ಹೋರಾಟಗಳಿಗೆ ಕಾಂಗ್ರೆಸ್ನ ಬೆಂಬಲ ಕೋರಿದ್ದಾರೆ. ಮುಂದಿನ ದಿನಗಳಲ್ಲಿ ಶರತ್ ಬಚ್ಚೇಗೌಡ ಅವರು ಮತ್ತು ನಾವು ಒಟ್ಟಾಗಿ ಬಿಜೆಪಿ ಸರ್ಕಾರದ ವಿರುದ್ಧ ಜನಜಾಗ್ರತಿ ಮೂಡಿಸುವ ಕೆಲಸ ಮಾಡಲಿದ್ದೇವೆ"ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications