ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಭವನ ನಿರ್ಮಾಣ: ಬೊಮ್ಮಾಯಿ
ಬೆಂಗಳೂರು ಮಾರ್ಚ್ 08: ಬೆಂಗಳೂರು ನಗರಕ್ಕೆ ಆಗಮಿಸುವ ಉತ್ತರ ಕರ್ನಾಟಕದ ಜನರ ಅನುಕೂಲಕ್ಕಾಗಿ ನಗರದಲ್ಲಿ ಉತ್ತರ ಕರ್ನಾಟಕ ಭವನ ನಿರ್ಮಾಣಕ್ಕೆ ರಾಜ್ಯ ಸರಕಾರದ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಉತ್ತರ ಕರ್ನಾಟಕದ ಜನರ ಮನಸ್ಸು ಹಾಗೂ ಹೃದಯ ವಿಶಾಲವಾದದ್ದು. ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪನವರು ಉತ್ತರ ಕರ್ನಾಟಕದ ಬಗ್ಗೆ ಮೊದಲಿನಿಂದಲೂ ವಿಶೇಷ ಕಾಳಜಿಯನ್ನು ಹೊಂದಿದ್ದಾರೆ. ಅವರ ಆಡಳಿತಾವಧಿಯಲ್ಲಿಯೇ ಉತ್ತರ ಕರ್ನಾಟಕದದಲ್ಲಿ ಹಲವಾರು ನೀರಾವರಿ ಯೋಜನೆಗಳಿಗೆ ವಿಶೇಷ ಅನುದಾನ ದೊರೆತಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಉತ್ತರ ಕರ್ನಾಟಕದ ಮಹಿಳೆಯಿರಿಗೆ ಉಡಿ ತುಂಬುವ ಕಾರ್ಯವೂ ನಡೆಯಿತು. ಕಾರ್ಯಕ್ರಮದಲ್ಲಿ 45 ಹೆಚ್ಚು ಸಂಘಟನೆಗಳ ಸದಸ್ಯರುಗಳು ಪಾಲ್ಗೊಂಡಿದ್ದರು.
ನೀರಾವರಿ ಯೋಜನೆಗಳಿಗೆ ಅನುದಾನ
ಮಹದಾಯಿ, ಕೃಷ್ಣಾ ಮೇಲ್ಡಂಡೆ, ಸಿಂಗಟಾಲೂರು, ಬಸವೇಶ್ವರ ಏತ ನೀರಾವರಿ ಯೋಜನೆ ಹೀಗೆ ಹಲವಾರು ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಆಗಿರುವುದು ಬಿಎಸ್ ಯಡಿಯೂರಪ್ಪನವರ ಅಧಿಕಾರವಧಿಯಲ್ಲಿ ಮಾತ್ರಾ. ಉತ್ತರ ಕರ್ನಾಟಕದ ಲಕ್ಷಾಂತರ ಏಕರೆಗೆ ನೀರಾವರಿ ಅನುಕೂಲ ಮಾಡಿಕೊಡುವ ಕೃಷ್ಣಾ ಮೇಲ್ಡಂಡೆಯ ಮೂರನೇ ಹಂತದ ಯೋಜನೆಗೆ ಹಣ ಬಿಡುಗಡೆ ಮಾಡುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ 10 ಸಾವಿರ ಕೋಟಿ ರೂಪಾಯಿಗಳ ಅನುದಾನ ನೀಡಿದ್ದಾರೆ ಎಂದರು.
ಮಹದಾಯಿ ಯೋಜನೆಗೂ ಅನುದಾನ
ಉತ್ತರ ಕರ್ನಾಟಕ ಜನರ ಬಹು ದಶಕಗಳ ಕನಸಾಗಿರುವ ಮಹದಾಯಿ ಯೋಜನೆಗೂ ಅನುದಾನ ನೀಡುವ ಮೂಲಕ ತಾವು ಉತ್ತರ ಕರ್ನಾಟಕದ ಜನರ ಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲಕ್ಕಾಗಿ ಬೆಂಗಳೂರು ನಗರದಲ್ಲಿ ಉತ್ತರ ಕರ್ನಾಟಕ ಭವನ ನಿರ್ಮಾಣಕ್ಕೆ ಅಗತ್ಯವಿರುವ ಸಹಾಯವನ್ನು ರಾಜ್ಯ ಸರಕಾರದ ವತಿಯಿಂದ ಒದಗಿಸಿಕೊಡುವ ಭರವಸೆಯನ್ನು ಬಸವರಾಜ ಬೊಮ್ಮಾಯಿ ಅವರು ಇದೇ ಸಂಧರ್ಭದಲ್ಲಿ ನೀಡಿದರು.
ಜಯಮೃತ್ಯಂಜಯ ಸ್ವಾಮೀಜಿ ಮಾತನಾಡಿ
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೂಡಲ ಸಂಗಮದ ಬಸವ ಜಯಮೃತ್ಯಂಜಯ ಸ್ವಾಮೀಜಿ ಮಾತನಾಡಿ, ಬೆಂಗಳೂರು ನಗರದಲ್ಲಿ 20 ಲಕ್ಷಕ್ಕೂ ಹೆಚ್ಚು ಉತ್ತರ ಕರ್ನಾಟಕದ ಜನರು ವಾಸಿಸುತ್ತಿದ್ದಾರೆ. ಈ ಜನರು ಹಲವಾರು ಸಂಘ ಸಂಸ್ಥೆಗಳ ಅಡಿಯಲ್ಲಿ ಆಗಾಗ್ಗೆ ಒಗ್ಗೂಡುತ್ತಾರೆ. ಎಲ್ಲಾ ಸಂಘಸಂಸ್ಥೇಗಳನ್ನು ಒಂದೇ ವೇದಿಕೆಗೆ ತರುವ ಈ ಪ್ರಯತ್ನ ಬಹಳ ಒಳ್ಳೆಯದು. ಈ ಪ್ರಯತ್ನದಿಂದಾಗಿ ಬೆಂಗಳೂರು ನಗರದಲ್ಲಿನ ಉತ್ತರ ಕರ್ನಾಟಕದ ಜನರು ಒಂದೇ ವೇದಿಕೆಯಲ್ಲಿ ಒಗ್ಗೂಡುವ ಅವಕಾಶ ಇದಾಗಲಿದೆ. ಉತ್ತರ ಕರ್ನಾಟಕದಿಂದ ರಾಜಧಾನಿಗೆ ಆಗಮಿಸುವ ಜನರ ಅನುಕೂಲಕ್ಕಾಗಿ ನಗರದಲ್ಲಿ ಒಂದು ಸಭಾಭವನ ನಿರ್ಮಾಣದ ಅವಶ್ಯತೆಯಿದೆ ಎಂದು ಗೃಹ ಮಂತ್ರಿಗಳ ಗಮನ ಸೇಳೆದ ಅವರು, ರಾಜ್ಯ ಸರಕಾರ ಇದಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ ಆರ್ ಮೇಟಿ, ಡಿ ಎಸ್ ಮ್ಯಾಕ್ಸ್ ನಿರ್ದೇಶಕ ದಯಾನಂದ ಪಿ, ವಾಸ್ತು ಸ್ಟ್ರಕ್ಚರ್ ನ ನಿರ್ದೇಶಕ ಶಿವನಗೌಡ ಪಾಟೀಲ್, DRDO ನ ಕಿರಿಯ ವಿಜ್ಞಾನಿ ಡಾ ಗೋವಿಂದರಾವ್ ದೊಡಮನಿ, ಕೃಷ್ಣಭಾಗ್ಯ ಜಲನಿಗಮದ ಬಿ ಎನ್ ಬಿರಾದರ, ಚಂದ್ರಶೇಖರ ಬೂದಿಹಾಳಮಠ ಅವರನ್ನು ಸನ್ಮಾನಿಸಲಾಯಿತು.