ರೋಹಿಣಿ ಸಿಂಧೂರಿ ವರ್ಗಾವಣೆ: ದೇವೇಗೌಡ ಗರಂ
ಬೆಂಗಳೂರು, ಜನವರಿ 23: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿರುವುದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗರಂ ಆಗಿದ್ದಾರೆ. ಸರ್ಕಾರದ ಕ್ರಮವನ್ನು ಖಂಡಿಸಿರುವ ಅವರು ಸರ್ಕಾರದ ವಿರುದ್ಧ ಹಾಸನದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಥೂ.., ಅಸಹ್ಯ' ಎಂದು ಕೋಪದಿಂದ ಸರ್ಕಾರದ ಕ್ರಮವನ್ನು ಬೈದರು, ವೈಯಕ್ತಿಕ ಲಾಭಕ್ಕಾಗಿ ಉತ್ಸಾಹಿ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದ್ದಾರೆ, ಬಗ್ಗೆ ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದರು.
ಮಾಜಿ ಪ್ರಧಾನಿಯ ತವರು ಜಿಲ್ಲೆಯಲ್ಲೇ ಹೀಗೆ ಮಾಡುತ್ತಾರೆ ಎಂದರೆ ರಾಜ್ಯದಲ್ಲಿ ಇನ್ನೆಷ್ಟು ಅಧೋಗತಿಗೆ ಸರ್ಕಾರ ಬಂದಿರಬಹುದು ಎಂದು ಅವರು ಬೇಸರ ವ್ಯಕ್ತಪಡಿಸಿದರು. ನಿಷ್ಠಾವಂತ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಸರ್ಕಾರ ದುರಾಡಳಿತದ ಪರಮಾವಧಿ ಇದು ಎಂದು ಅಬ್ಬರಿಸಿದರು.

ರೋಹಿಣಿ ಅವರು ಮಹಾಮಜ್ಜನ ಕಾರ್ಯಕ್ರಮಕ್ಕೆ ಉತ್ತಮವಾಗಿ ಜಿಲ್ಲೆಯನ್ನು ಅಣಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರಿಗೆ ಮಹಾಮಸ್ತಾಭಿಷೇಕದ ಟೆಂಡರ್ಗಳಲ್ಲಿ ಹಣ ನೀಡಲಿಲ್ಲ ಎಂದು ಸಿಂಧೂರಿ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ. ಹಣ ಗಳಿಸಿಕೊಳ್ಳಲು ಬಿಡಲಿಲ್ಲವೆಂದು ಅಧಿಕಾರಿಯನ್ನು ಎತ್ತಂಗಡಿ ಮಾಡಿಸಿದ್ದಾರೆ ಎಂದು ಅವರು ಹೇಳಿದರು.
ನಿಷ್ಠಾವಂತ ಅಧಿಕಾರಿಗಳನ್ನು ಹೀಗೆ ವೈಯಕ್ತಿಕ ಲಾಭಕ್ಕೆ ವರ್ಗಾವಣೆ ಮಾಡುತ್ತಿದ್ದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ, ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಿಗಳ ವಿಷಯದಲ್ಲಿ ಬಹಳ ದುರ್ನಡತೆ ತೋರುತ್ತಿದೆ ಎಂದು ಅವರು ಬೇಸರಿಸಿದರು.
ಜೆಡಿಎಸ್ ಯುವ ಘಟಕದ ಕಾರ್ಯಕರ್ತರು ಇಂದೇ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದು, ದೇವೇಗೌಡರು ಹಾಸನದಲ್ಲಿ ಜನವರಿ 25ರಂದು ಪ್ರತಿಭಟನೆ ಮಾಡಲಿದ್ದಾರೆ. ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ನಾಯಕರುಗಳು ಭಾಗವಹಿಸಲಿದ್ದಾರೆ.












Click it and Unblock the Notifications