ಟೋಲ್ ಸಮಸ್ಯೆ : ಕೇಂದ್ರದತ್ತ ಕೈ ತೋರಿದ ಸರ್ಕಾರ
ಬೆಂಗಳೂರು, ಮೇ 6 : ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 7ರ ಟೋಲ್ ದರ ಹೆಚ್ಚಳದ ಕುರಿತು ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ನಡೆಸಿದ ಮಾತುಕತೆ ವಿಫಲವಾಗಿದೆ. ಟೋಲ್ ದರ ಕಡಿಮೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಕೇಂದ್ರದತ್ತ ಕೈ ತೋರಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಟೋಲ್ ದರ ಹೆಚ್ಚಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು, ಟೋಲ್ ದರ ಇಳಿಕೆ ಮತ್ತು ಏರಿಕೆ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ, ಆದ್ದರಿಂದ ಅವರು ತೀರ್ಮಾನಕೈಗೊಳ್ಳಬೇಕು ಎಂದರು. [ಟೋಲ್ ದರ ಹೆಚ್ಚಾಗಿದೆ?]

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಟ್ಯಾಕ್ಸಿ, ಟೋಲ್ ಸುತ್ತ-ಮುತ್ತಲಿನ ಹಳ್ಳಿಗಳ ಜನರಿಗೆ ಸಹಾಯಕವಾಗಲು ಮಾಸಿಕ ಪಾಸ್ ಅನ್ನು ವಿತರಣೆ ಮಾಡಲಾಗುವುದು. ಆದರೆ, ಟೋಲ್ ದರ ಇಳಿಕೆ ಕುರಿತು ಕೇಂದ್ರ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು. [ಟೋಲ್ ಹೆಚ್ಚಳ-ತೀವ್ರಗೊಂಡ ಪ್ರತಿಭಟನೆ]
ಟ್ಯಾಕ್ಸಿಗಳಿಗೆ ಪ್ರತಿ ತಿಂಗಳಿಗೆ 2,560 ರೂ.ಮೌಲ್ಯದ ಪಾಸು ವಿತರಣೆ ಮಾಡಲು ನಿರ್ಧರಿಸಲಾಗಿದೆ ಇದರಿಂದ ಅವರು 50 ಬಾರಿ ಸಂಚರಿಸಬಹುದಾಗಿದೆ. ಪ್ರತಿದಿನ ಸಂಚರಿಸುವ ಟ್ಯಾಕ್ಸಿಗಳಿಗೆ ಮಾತ್ರ ಪಾಸು ನೀಡಲಾಗುವುದು ಎಂದು ಹೇಳಿದರು. ಅದರಂತೆ ಟೋಲ್ ವ್ಯಾಪ್ತಿಯ 20 ಕಿ.ಮೀ ಹಳ್ಳಿಗಳ ಜನರಿಗೆ 225 ರೂ ಪಾಸು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಆದರೆ, ಸಭೆಯಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಬಿಎಂಟಿಸಿ ಬಸ್ಸು, ಲಾರಿ, ಖಾಸಗಿ ವಾನಹನಗಳಿಗೆ ಟೋಲ್ ದರ ಇಳಿಕೆ ಮಾಡುವ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಆದ್ದರಿಂದ ವಾಹನ ಸವಾರರ ಪ್ರತಿಭಟನೆ ಬುಧವಾರವೂ ಮುಂದುವರೆಯುವ ಸಾಧ್ಯತೆ ಇದೆ.












Click it and Unblock the Notifications