ಮೆಚ್ಚಿನ ನಿವಾಸ ತೊರೆಯಲೇಬೇಕಾದ ಅನಿವಾರ್ಯತೆಯಲ್ಲಿ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 17: ಕಳೆದ ಆರಕ್ಕೂ ಹೆಚ್ಚು ವರ್ಷಗಳಿಂದ 'ಕಾವೇರಿ' ನಿವಾಸದಲ್ಲಿ ವಾಸವಿದ್ದ ಸಿದ್ದರಾಮಯ್ಯ ಈಗ ಕಾವೇರಿ ತೊರೆಯಲೇ ಬೇಕಾಗಿದೆ.
ಸಿದ್ದರಾಮಯ್ಯ ವಾಸವಿದ್ದ ಕಾವೇರಿ ನಿವಾಸವನ್ನು ನಿಯಮದಂತೆ ಸಿಎಂ ಅವರಿಗೇ ನೀಡಲು ನಿಶ್ಚಯಿಸಲಾಗಿದ್ದು, ವಿಪಕ್ಷ ನಾಯಕರಿಗೆ ಸಾಮಾನ್ಯವಾಗಿ ನೀಡಲಾಗುವ ಬೇರೆಯ ನಿವಾಸವನ್ನು ನೀಡಲು ಸರ್ಕಾರ ನಿಶ್ಚಯಿಸಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 'ಕಾವೇರಿ' ನಿವಾಸ ಪ್ರವೇಶಿಸಿದರು. ನಂತರ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದು ಯಾವುದೇ ಶಾಸನಬದ್ಧ ಹುದ್ದೆ ಇಲ್ಲದೇ ಇದ್ದರೂ ಸಹ ಅವರು ಕಾವೇರಿ ನಿವಾಸದಲ್ಲಿಯೇ ವಾಸ್ತವ್ಯ ಮುಂದುವರೆಸಿದ್ದರು.

ಕಾವೇರಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಸಿದ್ದರಾಮಯ್ಯ
ಇದೀಗ ಬಿಜೆಪಿ ಸರ್ಕಾರ ಬಂದ ನಂತರ ಕಾವೇರಿ ನಿವಾಸದಲ್ಲಿಯೇ ಉಳಿಯಲು ವ್ಯವಸ್ಥೆ ಮಾಡಿಕೊಡಿ ಎಂದು ಸರ್ಕಾರಕ್ಕೆ ಇತ್ತೀಚೆಗಷ್ಟೆ ಪತ್ರ ಬರೆಯಲಾಗಿತ್ತು. ಅದರಂತೆ ಸಿದ್ದರಾಮಯ್ಯ ಅವರು ಕಾವೇರಿಯಲ್ಲಿಯೇ ಉಳಿಯಲು ವ್ಯವಸ್ಥೆ ಸಹ ಮಾಡಲಾಗಿತ್ತು. ಆದರೆ ಈಗ ಸರ್ಕಾರ ತನ್ನ ನಿರ್ಧಾರ ಬದಲಿಸಿದೆ.

ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಆದೇಶ
ಇಂದು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶದಂತೆ, ಮುಖ್ಯಮಂತ್ರಿಗಳಿಗೆ ಹಂಚಿಕೆ ಮಾಡಲಾಗಿದ್ದ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್ ಅನ್ನು ಸಿದ್ದರಾಮಯ್ಯ ಅವರಿಗೆ ನೀಡಲಾಗುತ್ತಿದೆ.

ರೇಸ್ ವ್ಯೂ ಕಾಟೇಜ್ ಸಿಎಂ ಗೆ ನೀಡಲಾಗಿತ್ತು
ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಇದ್ದ ಕಾರಣ ಸಿಎಂ ಅವರಿಗೆ ರೇಸ್ ವ್ಯೂ ಕಾಟೇಜ್ ನೀಡಲಾಗಿತ್ತು. ಆದರೀಗ ಮೊದಲಿನ ಸಂಪ್ರದಾಯದಂತೆ ವಿಪಕ್ಷ ನಾಯಕರಿಗೆ ರೇಸ್ ವ್ಯೂ ಕಾಟೇಜ್ ನೀಡಿ, ಮುಖ್ಯಮಂತ್ರಿಗಳಿಗೆ 'ಕಾವೇರಿ' ನೀಡಲಾಗುತ್ತಿದೆ.

ರೇಸ್ ವ್ಯೂ ಕಾಟೇಜ್ ಸ್ವೀಕರಿಸುತ್ತಾರೆಯೋ ಇಲ್ಲವೋ?
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿಯೇ ಹಲವು ವರ್ಷಗಳಿಂದ ವಾಸವಿದ್ದಾರೆ. ಅವರಿಗೆ ರೇಸ್ ವ್ಯೂ ಕಾಟೇಜ್ಗೆ ಹೋಗಲು ಇಷ್ಟವಿಲ್ಲದ ಕಾರಣವೇ ಕಾವೇರಿ ನಿವಾಸಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಈಗ ರೇಸ್ ವ್ಯೂ ಕಾಟೇಜ್ ನೀಡಲಾಗಿದ್ದು, ಇದನ್ನು ಅವರು ಸ್ವೀಕರಿಸುತ್ತಾರೆಯೋ ಅಥವಾ ಖಾಸಗಿ ನಿವಾಸದಲ್ಲಿ ವಾಸವಿರುತ್ತಾರೆಯೋ ನೋಡಬೇಕಿದೆ.












Click it and Unblock the Notifications