ಬೆಂಗಳೂರಿನಲ್ಲಿ ಶಾಲಾ ಮಕ್ಕಳನ್ನು ಕಟ್ಟಿ ಹಾಕಿ ಬೀಡಿ ಸೇದುವಂತೆ ಮಾಡಿ ಪುಂಡರ ಕ್ರೌರ್ಯ
ಬೆಂಗಳೂರು, ಅ. 25: ಸಿಲಿಕಾನ್ ಸಿಟಿಯಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದೆ. ಗಾಂಜಾ ಮತ್ತಲ್ಲಿ ಪುಂಡರ ಗುಂಪೊಂದು ಆಟವಾಡಲು ತೆರಳಿದ ಪುಟಾಣಿಗಳನ್ನು ಮರಕ್ಕೆ ಕಟ್ಟಿಹಾಕಿ ಬೀಡಿ ಸೇದಿಸಿ ವಿಕೃತ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ದೇವಸಂದ್ರ ವಾರ್ಡ್ನ ಬಿ ನಾರಾಯಣಪುರದಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ವಿಡಿಯೋ ವೈರಲ್ ಆಗಿದೆ. ಪುಂಡರ ವಿರುದ್ಧ ಮಹದೇವಪುರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಎರಡು ದಿನದ ಹಿಂದೆ ಬಾಲಕರು ಆಟವಡಲೆಂದು ದೇವಸಂದ್ರ ವಾರ್ಡ್ ನ ಬಿ. ನಾರಾಯಣಪುರ ಮೈದಾನಕ್ಕೆ ತೆರಳಿದ್ದಾರೆ. ಅಲ್ಲಿ ಮತ್ತಲ್ಲಿ ತೇಲಾಡುತ್ತಿದ್ದ ಪುಂಡರ ಗಂಪು ಮಕ್ಕಳನ್ನು ಕೂಡಿ ಹಾಕಿ ಒಂದು ಗಂಟೆ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಮಕ್ಕಳನ್ನು ಸುತ್ತುವರೆದಿರುವ ಪುಂಡರ ಗುಂಪು ಒಂದಡೆ ಕೂರಿಸಿ ಹಲ್ಲೆ ಮಾಡಿದ್ದಾರೆ. ಮಕ್ಕಳು ಕಣ್ಣೀರು ಹಾಕಿದರೂ ಪುಂಡರ ವಿಕೃತ ಕ್ರೌರ್ಯ ನಿಲ್ಲಿಸದೇ ಮೊಬೈಲ್ ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡುವ ದೃಶ್ಯಗಳು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತಾಗಿದೆ. ಏಳಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನಿಲ್ಲಿಸಿ ಹಿಂಸೆ ಕೊಟ್ಟಿದ್ದಾರೆ.
ಆ ನಂತರ ಇಬ್ಬರು ಮಕ್ಕಳನ್ನು ಮರಕ್ಕೆ ಕಟ್ಟಿ ಹಾಕಿ ಬೀಡಿ ಸೇದುವಂತೆ ಹೆದರಿಸಿ ಹಲ್ಲೆ ಮಾಡಿದ್ದಾರೆ. ಪುಂಡರ ಭಯಕ್ಕೆ ಇಬ್ಬರು ಮಕ್ಕಳು ಕಣ್ಣೀರು ಹಾಕುತ್ತಲೇ ಭಯದಿಂದ ಬೀಡಿ ಸೇದಿದ್ದು, ಇದು ಕೂಡ ವಿಡಿಯೋ ಮಾಡಿಕೊಂಡಿದ್ದಾರೆ. ಮಕ್ಕಳು ಪರಿಪರಿಯಾಗಿ ಬೇಡಿಕೊಂಡರು ಪುಂಡರು ಬಿಟ್ಟಿಲ್ಲ. ಈ ಕುರಿತ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಅಗಿದ್ದು, ಕೃತ್ಯದ ಬಗ್ಗೆ ಮಕ್ಕಳು ಪೋಷಕರಿಗೆ ತಿಳಿಸಿದ್ದಾರೆ. ಸ್ಥಳೀಯ ಮುಖಂಡ ಶ್ರೀಕಾಂತ್ ಅವರು ಈ ಕುರಿತು ಮಹದೇವಪುರ ಪೊಲೀಸರಿಗೆ ದೂರು ನೀಡಿದ್ದು, ಪುಂಡರಿಗಾಗಿ ಶೊಧ ನಡೆಸಲಾಗುತ್ತಿದೆ.
ಹೆಚ್ಚಿದ ಪುಂಡರ ಹಾವಳಿ
ರಾಜಧಾನಿ ಬೆಂಗಳೂರಿನಲ್ಲಿ ಪದೇ ಪದೇ ಪುಂಡರ ಹಾವಳಿ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಕುರುಬರಹಳ್ಳಿಯಲ್ಲಿ ಸರಣಿ ಕಾರುಗಳ ಗ್ಲಾಸು ಹೊಡೆದು ಪುಂಡತನ ಮೆರೆದಿದ್ದರು. ಇತ್ತೀಚೆಗೆ ಮೈಸೂರು ರಸ್ತೆಯಲ್ಲಿ ಪುಂಡರು ನಿಂತಿದ್ದ ಕಾರುಗಳ ಮೇಲೆ ಬ್ಯಾಟ್ ಬೀಸಿ ಹಲ್ಲೆ ಮಾಡಿದ್ದರು. ಇದೇ ರೀತಿ ಹಲವು ಕೃತ್ಯಗಳು ಪದೇ ಪದೇ ಮರುಕಳಿಸುತ್ತಿವೆ.
ಮಕ್ಕಳ ಹಕ್ಕುಗಳ ಉಲ್ಲಂಘನೆ
ಮಕ್ಕಳ ಮೇಲೆ ಕ್ರೌರ್ಯ ಮೆರೆಯುವುದು ಗಂಭೀರ ಸ್ವರೂಪದ ಅಪರಾಧ. ಮಕ್ಕಳ ಹಕ್ಕುಗಳ ಆಯೋಗ ಕೂಡ ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲು ಮುಂದಾಗಿದೆ. ಮಕ್ಕಳ ಮೇಲೆ ಈ ರೀತಿಯ ಕ್ರೌರ್ಯ ಎಸಗಿರುವುದನ್ನು ನೋಡಿದರೆ ನಾವು ಯಾವ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬ ಭಯ ಮೂಡುತ್ತದೆ. ಈ ಪರಿಯ ವಿಕೃತ ಮೆರೆದಿರುವ ಪುಂಡರನ್ನು ಪತ್ತೆ ಮಾಡಿ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ಸದಸ್ಯರು ವಿವರ ನೀಡಿದ್ದಾರೆ.
ಚೈಲ್ಡ್ ರೈಟ್ಸ್ ಟ್ರಸ್ಟ್ನ ಸಂಸ್ಥಾಪಕ ನಾಗಸಿಂಹ
"ಮಕ್ಕಳಿಗೆ ಚಿತ್ರಹಿಂಸೆ ಕೊಟ್ಟು ದುರುಪಯೋಗ ಪಡಿಸಿಕೊಳ್ಳುವುದು ಅಪರಾಧ. ಮಕ್ಕಳನ್ನು ದುರುಪಯೋಗ ಪಡಿಸಿಕೊಂಡು, ಮಕ್ಕಳಿಗೆ ಬೀಡಿ ಸೇವನೆ ಮಾಡುವಂತೆ ಮನಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳ ಕೈಯಲ್ಲಿ ಮಾದಕ ವಸ್ತು ತರಿಸುವುದು, ಸೇದುವಂತೆ ಪುಸಲಾಯಿಸುವುದು ಕಾನೂನು ಅಪರಾಧ. ಈ ಕುರಿತು ಪೊಲೀಸರು ಕಠಿಣ ಕ್ರಮ ಜರುಗಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣಾ ಘಟಕ ಕ್ರಮ ಜರುಗಿಸಬೇಕು. ಮಕ್ಕಳಿಗೆ ಕೌನ್ಸಲಿಂಗ್ ಮಾಡಬೇಕು. ಪುಂಡರಿಗೂ ತಿಳುವಳಿಕೆ ನೀಡಿ ಶಿಕ್ಷೆ ಕೊಡಿಸಬೇಕು" ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ನ ಸಂಸ್ಥಾಪಕ ನಾಗಸಿಂಹ ಅವರು ಅಭಿಪ್ರಾಯಪಟ್ಟಿದ್ದಾರೆ.
Recommended Video
ಮಕ್ಕಳೇ ಟಾರ್ಗೆಟ್
ಇನ್ನು ಪಾತಕ ಲೋಕದ ಕ್ರಿಮಿಗಳು ಕ್ರಿಕೆಟ್ ನೆಪದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಸೆಳೆಯುವುದು ಅವರನ್ನು ಕೆಟ್ಟ ದಾರಿಗೆ ಎಳೆಯುವುದು, ಅವರಿಗೆ ಮಾದಕ ವಸ್ತುಗಳನ್ನು ಪರಿಚಯಿಸುವ ಕೃತ್ಯಗಳು ಮೊದಲಿನಿಂದಲೂ ಬೆಂಗಳೂರಿನಲ್ಲಿ ನಡೆಯುತ್ತಿವೆ. ಹೀಗಾಗಿಯೇ ಅನೇಕ ವಿದ್ಯಾರ್ಥಿಗಳು ಬಾಲಾಪರಾಧಿಗಳಾಗಿ ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಪ್ರಕರಣಗಳು ಈ ಹಿಂದೆ ವರದಿಯಾಗಿವೆ. ಆದರೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳಿಗೆ ಚಿತ್ರ ಹಿಂಸೆ ನೀಡಿರುವ ಘೋರ ಕೃತ್ಯ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.