Bengaluru Traffic: ರಸ್ತೆ ಗುಂಡಿಯಿಂದ ಪಲ್ಟಿಯಾದ ಲಗೇಜ್ ಆಟೋ; ಇದೇನಾ ಬ್ರ್ಯಾಂಡ್ ಬೆಂಗಳೂರು?
"ಬ್ರ್ಯಾಂಡ್ ಬೆಂಗಳೂರು" ಹೆಸರಿನಲ್ಲಿ ಬೆಂಗಳೂರನ್ನು ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಿರುವ ಸರ್ಕಾರಕ್ಕೆ ಕನಿಷ್ಠ ರಸ್ತೆ ಗುಂಡಿಯನ್ನು ಮುಚ್ಚಲು ಸಮಯ ಇಲ್ಲದೇ ಇರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಗುಂಡಿಗಳಿಂದ ನಗರದಲ್ಲಿ ಹಲವು ಕಡೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡುವಂತ ಪರಿಸ್ಥಿತಿ ಬಂದಿದೆ. ರಸ್ತೆ ಗುಂಡಿಗೆ ಇಳಿದ ಲಗೇಜ್ ಆಟೋ ಪಲ್ಟಿಯಾಗಿದ್ದು ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗವಾರದಲ್ಲಿ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ದೊಡ್ಡದಾದ ರಸ್ತೆ ಗುಂಡಿಯ ಕಾರಣದಿಂದ ಲಗೇಜ್ ಆಟೋ ಪಲ್ಟಿಯಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಎಕ್ಸ್ನಲ್ಲಿ 'ಕರ್ನಾಟಕ ಫೋರ್ಟ್ಫೋಲಿಯೋ' ಎನ್ನುವ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, "ಬ್ರ್ಯಾಂಡ್ ಬೆಂಗಳೂರು" ಪದದ ಅರ್ಥ ಇದೇನಾ ಎಂದು ಪ್ರಶ್ನೆ ಮಾಡಲಾಗಿದೆ.

ಜನರಿಗೆ ಈಗ ಅರಿವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಎಂದರೆ ಏನೆಂದು ಜನರಿಗೆ ಈಗ ಅರ್ಥವಾಗುತ್ತಿದೆ. ಮಳೆಯಿಂದಾಗಿ ರಸ್ತೆಯಲ್ಲಿರುವ ಗುಂಡಿಗಳು ತುಂಬಿಕೊಂಡಿದ್ದು, ವಾಹನ ಸವಾರರಿಗೆ ಗುಂಡಿಗಳು ಎಲ್ಲಿವೆ ಎನ್ನುವುದು ಕೂಡ ತಿಳಿಯುತ್ತಿಲ್ಲ. ಕೆಲವು ಗುಂಡಿಗಳು ದೊಡ್ಡದಾಗಿದ್ದು, ಕೆಲವು ಸಂದರ್ಭದಲ್ಲಿ ಅಪಘಾತಕ್ಕೆ ಕಾರಣವಾಗುತ್ತವೆ. ಹಲವು ಸಂದರ್ಭದಲ್ಲಿ ದ್ವಿಚಕ್ರ ವಾಹನ ಸಾವರರು ಬಿದ್ದು ಗಾಯಗೊಂಡಿರುವುದು ಕೂಡ ಆಗುತ್ತದೆ.
People now have a clearer understanding of what the term "Brand Bengaluru" truly signifies. Unfortunately, it seems to have become synonymous with roads riddled with craters and potholes, many of which pose significant safety hazards. These poorly maintained roads not only… pic.twitter.com/nwS9ntNbcX
— Karnataka Portfolio (@karnatakaportf) November 15, 2024
ಪ್ರತಿನಿತ್ಯ ಇಂತಹ ಘಟನೆಗಳು ನಡೆಯುತ್ತಿದ್ದು ಬೆಂಗಳೂರು ನಗರದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿವೆ. ಉತ್ತಮ ಮೂಲಸೌಕರ್ಯ ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ಸುಧಾರಿಸುವ ಅಗತ್ಯವಿದೆ. ಬಿಬಿಎಂಪಿ ದೀರ್ಘಕಾಲದಿಂದ ನಿದ್ದೆ ಮಾಡುತ್ತಿದ್ದು ಎಚ್ಚೆತ್ತು ಕೆಲಸ ಮಾಡುವವರೆಗೆ ಇದು ಸರಿಹೋಗುವುದಿಲ್ಲ ಎಂದು ಪೋಸ್ಟ್ನಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಬೆಂಗಳೂರಿನಲ್ಲಿ ಬಗೆಹರಿಯದ ಸಮಸ್ಯೆ
ಯಾವ ಸರ್ಕಾರ ಬಂದರೂ, ಯಾರು ಅಧಿಕಾರದಲ್ಲಿದ್ದರೂ ಬೆಂಗಳೂರಿನ ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಗುತ್ತಿಲ್ಲ. ಪ್ರತಿ ಬಾರಿ ಮಳೆ ಬಂದಾಗಲೂ ಬೆಂಗಳೂರಿನ ರಸ್ತೆಗಳ ಅಧ್ವಾನ ಜಗಜ್ಜಾಹೀರಾಗುತ್ತದೆ. ಎಲ್ಲಿ ಏನಾದರೆ ನಮಗೇನು ಎನ್ನುವ ಧೋರಣೆ ಬಿಬಿಎಂಪಿ ಅಧಿಕಾರಿಗಳದ್ದಾಗಿದೆ. ಮಳೆ ಬಂದು ಸಮಸ್ಯೆಯಾದಾಗ ಬಂದು ಜನರ ಕಣ್ಣೋರೆಸುವ ತಂತ್ರ ಮಾಡುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಮತ್ತೆ ಮಾಯವಾಗುತ್ತಾರೆ. ಮತ್ತೆ ಮಳೆ ಬರುವವರೆಗೂ ಈ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ.
ಬಿಬಿಎಂಪಿ ಚುನಾವಣೆ ನಡೆಸದ ಕಾರಣ ಸಮಸ್ಯೆ ಕೇಳಲು ಕಾರ್ಪೊರೇಟರ್ ಗಳು ಇಲ್ಲ, ಅಧಿಕಾರಿಗಳು ಕೂಡ ಜನರ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬ್ರಾಂಡ್ ಬೆಂಗಳೂರು ಮಾಡಲು ಹೊರಟ ಕಾಂಗ್ರೆಸ್ ಸರ್ಕಾರ ಗುಂಡಿ ಮುಚ್ಚಲು ಆದೇಶ ಕೊಟ್ಟರೂ, ನಗರದಲ್ಲಿ ಇನ್ನೂ ರಸ್ತೆಗುಂಡಿಗಳ ಸಮಸ್ಯೆ ಸರಿಹೋಗಿಲ್ಲ.












Click it and Unblock the Notifications