ಗೌರಿ ಲಂಕೇಶ್ ಕುಟುಂಬ ಕಲಹದ ಬಗ್ಗೆ ಸ್ವಾಮಿ ಹೇಳಿದ್ದೇನು?
ನವದೆಹಲಿ, ಸೆ. 06: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಬಗ್ಗೆ ಎಲ್ಲರೂ ಸಂತಾಪ ಸೂಚಿಸುವ ಸಂದರ್ಭದಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಕುಟುಂಬದ ಕಲಹದ ಬಗ್ಗೆ ಮಾತನಾಡಿದ್ದಾರೆ.
ವಿವಾದಿತ ಹೇಳಿಕೆ ನೀಡುವುದನ್ನು ಚಟವಾಗಿಸಿಕೊಂಡಿರುವ ಜನನಾಯಕರ ಪೈಕಿ ಅಗ್ರಗಣ್ಯರೆನಿಸಿರುವ ಸ್ವಾಮಿ ಅವರು, ಗೌರಿ ಹಾಗೂ ಇಂದ್ರಜಿತ್ ನಡುವೆ ಈ ಹಿಂದೆ ನಡೆದಿದ್ದ ಕುಟುಂಬ ಕಲಹ, ವೃತ್ತಿ ವೈಷಮ್ಯದ ಬಗ್ಗೆ ಮಾತನಾಡಿ, ಹಲವರ ಹುಬ್ಬೇರುವಂತೆ ಮಾಡಿದ್ದಾರೆ.

2005ರಲ್ಲಿ ಇಂದ್ರಜಿತ್ ಲಂಕೇಶ್ ಹಾಗೂ ಗೌರಿ ಲಂಕೇಶ್ ನಡುವೆ ಲಂಕೇಶ್ ಪತ್ರಿಕೆ(ಇಬ್ಭಾಗವಾಗುವುದಕ್ಕೂ ಮುನ್ನ)ಯ ವರದಿಯ ಕುರಿತಂತೆ ನಡೆದ ಮಾತಿನ ಚಕಮಕಿ, ಪರಸ್ಪರ ಇಬ್ಬರು ಪೊಲೀಸರಿಗೆ ದೂರು ನೀಡಿದ್ದರ ಬಗ್ಗೆ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ 15,2005ರಲ್ಲಿ ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಬಂದಿದ್ದ ವರದಿಯನ್ನು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಗೌರಿ ಅವರು ನಕ್ಸಲ್ ಪರ ನಿಲುವು ತಳೆದಿದ್ದು, ಹಲವಾರು ಪೊಲೀಸರನ್ನು ಕೊಂದಿದ್ದ ನಕ್ಸಲ್ ಬಗ್ಗೆ ಸಹಾನೂಭೂತಿ ವ್ಯಕ್ತಪಡಿಸಿ ವರದಿ ಮಾಡಿದ್ದಕ್ಕೆ ಇಂದ್ರಜಿತ್ ಆಕ್ಷೇಪ ವ್ಯಕ್ತಪಡಿಸಿದ್ದರು.
ನಂತರ ಲಂಕೇಶ್ ಪತ್ರಿಕೆ ಕಚೇರಿ ಯಾರಿಗೆ ಸೇರಬೇಕು ಎಂಬ ಪ್ರಶ್ನೆ ಎದ್ದಿತ್ತು. ಇಂದ್ರಜಿತ್ ಅವರು ನನಗೆ ರಿವಾಲ್ವರ್ ತೋರಿಸಿ ಬೆದರಿಸಿದ್ದಾರೆ ಎಂದು ಗೌರಿ ಅವರು ದೂರು ನೀಡಿದ್ದರು.
Is it getting murkier? pic.twitter.com/G7gHXSwZD8
— Subramanian Swamy (@Swamy39) September 6, 2017
ಈ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸ್ವಾಮಿ, ಗೌರಿ ಹತ್ಯೆ ಪ್ರಕರಣ ಮತ್ತಷ್ಟು ನಿಗೂಢವಾಗುತ್ತಿದೆ ಎಂದಿದ್ದಾರೆ. ಈ ಮೂಲಕ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರಲು ಗೌರಿ ಯತ್ನಿಸಿದ್ದು, ಈ ಬಗ್ಗೆ ಅವರ ಕುಟುಂಬದಲ್ಲೇ ಸಹಮತವಿರಲಿಲ್ಲ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.
ಈ ನಡುವೆ ಕರ್ನಾಟಕ ಸರ್ಕಾರವು ವಿಶೇಷ ತನಿಖಾ ದಳ ರಚಿಸಿ ತನಿಖೆಗೆ ಆದೇಶಿಸಿದೆ. ಸಿಐಡಿ, ಎಸ್ ಐಟಿ ಬದಲಿಗೆ ಸಿಬಿಐನಿಂದ ತನಿಖೆ ನಡೆಯಲಿ ಎಂದು ಸೋದರ ಇಂದ್ರಜಿತ್ ಲಂಕೇಶ್ ಬಯಸಿದ್ದಾರೆ.












Click it and Unblock the Notifications