ಮೋದಿ ಆದರ್ಶಗಳಿಗೆ ಮರುಳಾಗಿ ಬಿಜೆಪಿ ಸೇರಿದೆ: ಎಸ್ಸೆಂ ಕೃಷ್ಣ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರಿಗಾಗಿ ಸ್ವಾಗತ ಸಮಾರಂಭದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ.
ಬೆಂಗಳೂರು, ಮಾರ್ಚ್ 24: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆದರ್ಶಗಳಿಗೆ ಹಾಗೂ ರಾಜಕೀಯ ನಡೆಗಳಿಗೆ ಮರುಳಾಗಿ ತಾವು ಬಿಜೆಪಿ ಸೇರಿರುವುದಾಗಿ ಮಾಜಿ ಮುುಖ್ಯಮಂತ್ರಿ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.
ಇದಲ್ಲದೆ, ಕಾಂಗ್ರೆಸ್ ನಲ್ಲಿ ಹಲವಾರು ಅಪಮಾನಗಳನ್ನು ಸಹಿಸಿದ್ದೂ ಬಿಜೆಪಿಯತ್ತ ಮುಖ ಮಾಡಲು ಮತ್ತೊಂದು ಕಾರಣ ಎಂದು ಅವರು ತಿಳಿಸಿದರು.[ಪ್ರಧಾನಿ ಮೋದಿ ಭೇಟಿ ಮಾಡಿದ ಎಸ್ಸೆಂ ಕೃಷ್ಣ]

ಅವರ ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ, ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರಿಗಾಗಿ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.[ಮಾ. 27 ರಂದು ಗುಂಡ್ಲುಪೇಟೆಗೆ ಕೃಷ್ಣಾಗಮನ]
ಪ್ರಧಾನಿ ನರೇಂದ್ರ ಮೋದಿ ಒಬ್ಬ ಚತುರ ಹಾಗೂ ದಿಟ್ಟ ನಡೆಯ ರಾಜಕಾರಣಿ. ನೋಟು ಅಮಾನ್ಯೀಕರಣದಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಎಂಟೆದೆ ಬೇಕು. ಅಂಥ ವ್ಯಕ್ತಿ ಮೋದಿ ಎಂದು ಕಳೆದ ವರ್ಷಾಂತ್ಯದ ಹೊತ್ತಿಗೆ ಮೋದಿ ಸರ್ಕಾರ ಕೈಗೊಂಡಿದ್ದ ಅಪನಗದೀಕರಣ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆನಂತರ ತಮ್ಮ ಮಾತುಗಳನ್ನು ಮುಂದುವರಿಸಿದ ಅವರು, ''ನಾನು ವಿದೇಶಾಂಗ ಸಚಿವನಾಗಿದ್ದಾಗ ಪಾಕಿಸ್ತಾನದ ಜತೆ ಹಲವಾರು ಸಂಧಾನದ ಮಾತುಗಳನ್ನು ಆಡಿದ್ದೆವು. ಆ ಯಾವ ಮಾತುಕತೆಗಳೂ ಪಾಕಿಸ್ತಾನಕ್ಕೆ ಅರ್ಥವಾಗಿರಲಿಲ್ಲ. ಆದರೆ, ಮೋದಿಯವರು ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದರು. ಹೀಗೆ, ನೆರೆ ರಾಷ್ಟ್ರಗಳಿಗೆ ಬಿಸಿ ಮುಟ್ಟಿಸಲು ಮೋದಿಯಂಥ ನಾಯಕರಿಗೆ ಮಾತ್ರ ಸಾಧ್ಯ'' ಎಂದರು.
ರಾಜ್ಯದಲ್ಲಿ ಶಿಸ್ತುಬದ್ಧ ಪಕ್ಷವೆಂದರೆ ಅದು ಬಿಜೆಪಿ ಮಾತ್ರ ಎಂದು ಕೃಷ್ಣ ಕೊಂಡಾಡಿದರು. ಅಲ್ಲದೆ, ಉತ್ತರ ಪ್ರದೇಶದಲ್ಲಿ ಸಿಎಂ ಸ್ಥಾನಕ್ಕೆ ಯೋಗಿ ಆದಿತ್ಯಾನಂದ ಅವರನ್ನು ಆಯ್ಕೆ ಮಾಡಲಾಯಿತು. ಇದೂ ಕೂಡಾ ಒಂದು ದಿಟ್ಟ ನಿರ್ಧಾರವೇ ಎಂದು ಅವರು ಶ್ಲಾಘಿಸಿದರು.
ರಾಹುಲ್ ಬಗ್ಗೆ ಮತ್ತೆ ವ್ಯಂಗ್ಯ: ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ರಾಹುಲ್ ಗಾಂಧಿಯವರನ್ನು ಅರೆಕಾಲಿಕ (ಪಾರ್ಟ್ ಟೈಂ) ರಾಜಕಾರಣಿ ಎಂದು ಟೀಕಿಸಿದ್ದ ಕೃಷ್ಣ, ಶುಕ್ರವಾರದ ಸುದ್ದಿಗೋಷ್ಠಿಯಲ್ಲೂ ಅದೇ ಧಾಟಿಯಲ್ಲೇ ಮಾತನಾಡಿದರು.
ಕಾಂಗ್ರೆಸ್ ನಲ್ಲಿ ವಂಶ ಪಾರಂಪರ್ಯ ಅಧಿಕಾರ ಶಾಹಿ ಇದೆ. ಇರಲಿ, ತಪ್ಪೇನಲ್ಲ. ಆದರೆ, ಅರ್ಹತೆ ಇಲ್ಲದವರಿಗೆ ಅಧಿಕಾರ ಸಿಗುವುದನ್ನು ಒಪ್ಪಲಿಕ್ಕೆ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಅವರು ರಾಹುಲ್ ಗಾಂಧಿಯವರ ನಾಯಕತ್ವದ ಬಗ್ಗೆ ಟೀಕೆ ಮಾಡಿದರು.
ಖರ್ಗೆಗೆ ತಿರುಗೇಟು: ಹಿರಿಯ ಮುತ್ಸದ್ದಿಯಾದ ಎಸ್.ಎಂ. ಕೃಷ್ಣ ಅವರು ತಮ್ಮ ಅನುಭವದಷ್ಟು ವಯಸ್ಸಾಗಿರುವ, ತಮಗಿಂತಲೂ ಕಿರಿಯ ರಾಜಕಾರಣಿಯಾದ ಅಮಿತ್ ಶಾ ಮುಂದೆ ಕೈ ಕಟ್ಟಿ ನಿಲ್ಲುವಂತಾಯಿತಲ್ಲ ಎಂದು ವ್ಯಂಗ್ಯವಾಡಿದ್ದರು. ಅವರ ಆ ವ್ಯಂಗ್ಯಕ್ಕೆ ಕೃಷ್ಣ ತಿರುಗೇಟು ನೀಡಿದರು.
''ಮಲ್ಲಿಕಾರ್ಜುನ ಖರ್ಗೆಯವರೇ, ನಿಮ್ಮ ವಯಸ್ಸೆಷ್ಟು? ನಿಮ್ಮ ಪಕ್ಷದ (ಕಾಂಗ್ರೆಸ್) ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಯಸ್ಸೆಷ್ಟು? ನೀವು ರಾಹುಲ್ ಗಾಂಧಿ ಮುಂದೆ ಕೈ ಕಟ್ಟಿ ನಿಂತರೆ ಅದು ಸರಿ, ಅದೇ ನಾನು ಅಮಿತ್ ಶಾ ಮುಂದೆ ನಿಂತರೆ ತಪ್ಪು ಎನ್ನುತ್ತೀರಾ?'' ಎಂದು ಕುಟುಕಿದರು. ಅಲ್ಲದೆ, ಇಂಥ ಹಳೇ ಆಲೋಚನೆಗಳಿಂದಲೇ ಕಾಂಗ್ರೆಸ್ ಪಕ್ಷ ಹಳಿ ತಪ್ಪುತ್ತಿದೆ ಎಂದೂ ಅವರು ವ್ಯಾಖ್ಯಾನಿಸಿದರು.
ಹಿಂದೆಯೇ ಅಮಿತ್ ಶಾ ಭೇಟಿ: ಕಾಂಗ್ರೆಸ್ ನಲ್ಲಿ ಅನೇಕ ಮಾನಸಿಕ ಹಿಂಸೆ ಅನುಭವಿಸಿದ ನಂತರ, ಬಿಜೆಪಿ ಸೇರಲು ನಿರ್ಧರಿಸಿ ನಾನು ಸುಮಾರು 9 ತಿಂಗಳ ಹಿಂದೆಯೇ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಅದರ ಫಲವಾಗಿಯೇ ನಾನು ಇಂದು ಬಿಜೆಪಿಗೆ ಸೇರಿರುವುದು ಎಂದು ಅವರು ತಿಳಿಸಿದರು.












Click it and Unblock the Notifications