ಬೆಂಗಳೂರಿನ ಸಮಸ್ಯೆ ಪರಿಹಾರವಾಗಬೇಕು ಉದ್ಯಮಿ ಕಿರಣ್ ಮಜುಂದಾರ್ ಶಾ: ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು ?
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಅವರು ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ. ಉದ್ಯಮಿ ಹಾಗೂ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರ ಟ್ವೀಟ್ಗೆ ಡಿ.ಕೆ ಶಿವಕುಮಾರ್ ಅವರು ರಿಯಾಕ್ಟ್ ಮಾಡಿದ್ದಾರೆ.
ಕಿರಣ್ ಮಜುಂದರ್ ಶಾ ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ನಮ್ಮ ಬೆಂಗಳೂರಿನಲ್ಲಿ ಅತ್ಯುತ್ತಮ ಪ್ರತಿಭೆ ಇರುವವರು ಮತ್ತು ಉತ್ತಮ ವೆದರ್ ಇದೆ. ಆದರೆ ಕೆಟ್ಟ ಮೂಲಸೌಕರ್ಯವಿದೆ - ನಾವು ಕಸದ ಸಮಸ್ಯೆ ಮತ್ತು ರಸ್ತೆಗಳನ್ನು ಸರಿಪಡಿಸಿದರೆ, ನಾವು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದಾಗಬಹುದು. ಇದನ್ನು ಮಾಡಲು ಜಿಬಿಎಗೆ ಉತ್ತಮ ಅವಕಾಶವಿದೆ. ಇದನ್ನು ಮಾಡಲು ಸಾಮೂಹಿಕ ಇಚ್ಛಾಶಕ್ತಿಯನ್ನು ಬಳಸೋಣ ಎಂದು ಡಿ.ಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ ಶಿವಕುಮಾರ್ ಅವರು, ನಿಮ್ಮ ಮಾತುಗಳನ್ನು ಒಪ್ಪುತ್ತೇನೆ ಕಿರಣ್ ಮಜುಂದರ್ ಶಾ ಅವರೇ, ಬೆಂಗಳೂರಿನಲ್ಲಿ ಯಾವಾಗಲೂ ಪ್ರತಿಭಾನ್ವಿತರು, ಉತ್ತಮ ವೆದರ್ ಮತ್ತು ಉತ್ಸಾಹವಿದೆ. ಅದರಲ್ಲಿ ಕೊರತೆಯಿರುವುದು ರಾಜಕೀಯ ಇಚ್ಛಾಶಕ್ತಿ. ಅದನ್ನೇ ನಾವು ಈಗ ಸರಿಪಡಿಸುತ್ತಿದ್ದೇವೆ.
ಕಸದ ಸಮಸ್ಯೆಯಿಂದ ಬೆಂಗಳೂರಿನ ರಸ್ತೆಗಳ ಸಮಸ್ಯೆಯ ವರೆಗೆ ಪ್ರತಿಯೊಂದು ಸವಾಲನ್ನು ತುರ್ತಾಗಿ ಪರಿಹರಿಸಲು ಮುಂದಾಗಿದ್ದೇವೆ. ನಮ್ಮ ಬೆಂಗಳೂರು ಯಾವಾಗಲೂ ಹೊಸ ಮಾದರಿ ಹಾಗೂ ಯಾರಿಗೂ ಸಾಟಿ ಇಲ್ಲದೆ ಮುನ್ನುಗಿದೆ. ನಮ್ಮ ನಗರವು ಬೆಳೆದು ಗಡಿಗಳನ್ನು ದಾಟಿದಂತೆ, ನಮ್ಮ ಮೂಲಸೌಕರ್ಯ ಮತ್ತು ಆಡಳಿತವು ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನನ್ನ ಬದ್ಧತೆಯಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ದೊಂದಿಗೆ, ಈ ದೃಷ್ಟಿಕೋನವನ್ನು ವಾಸ್ತವಕ್ಕೆ ಪರಿವರ್ತಿಸಲು ನಮಗೆ ಈಗ ಒಂದು ಅನನ್ಯ ಅವಕಾಶವಿದೆ. ನಾವು ಅದನ್ನು ಸಾಧಿಸಲಿದ್ದೇವೆ. ನಮ್ಮ ಬೆಂಗಳೂರಿಗೆ ಎಲ್ಲರೂ ಒಟ್ಟಾಗಿ ಹೊಸ ಅಧ್ಯಾಯವನ್ನು ರೂಪಿಸುವ ಸಮಯ ಇದು. ಭವಿಷ್ಯವನ್ನು ನಾವು ಒಟ್ಟಾಗಿ ನಿರ್ಮಿಸಬೇಕು ಎಂದು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ರಿಯಾಕ್ಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಹತ್ವದ ಬೆಳವಣಿಗೆ ಆಗುತ್ತಿರುವ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಹತ್ವದ ಅಪ್ಡೇಟ್ಸ್ ಕೊಟ್ಟಿದ್ದಾರೆ. ಹೌದು ಮುಂದಿನ ತಿಂಗಳಿನಿಂದ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಿಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ
ರಚನೆ ಆಗಲಿದೆ. ಈ ಬಗ್ಗೆ ಡಿ.ಕೆ ಶಿವಕುಮಾರ್ ಅವರು ಹೊಸದೊಂದು ಅಪ್ಡೇಟ್ಸ್ ಕೊಟ್ಟಿದ್ದಾರೆ.
1. ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚನೆ ಮಾಡಿ ನಗರಾಭಿವೃದ್ಧಿ ಇಲಾಖೆಯಿಂದ ಅಧಿಸೂಚನೆ, ತಕ್ಷಣದಿಂದ ಗ್ರೇಟರ್ ಬೆಂಗಳೂರು ಜಾರಿ.
2. ಬಿಬಿಎಂಪಿ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಿ, ಜುಲೈ 19ರಂದು ಕರಡು ಅಧಿಸೂಚನೆ ಹೊರಡಿಸಿದ್ದು, ಸೆಪ್ಟೆಂಬರ್ 2ರಂದು ನಗರ ಪಾಲಿಕೆಗಳ ಗಡಿಯ ಅಂತಿಮ ಅಧಿಸೂಚನೆ ಹೊರಬೀಳಲಿದೆ ಎಂದು ಹೇಳಿದ್ದಾರೆ.
3. ಬಿಬಿಎಂಪಿ ಅಸ್ತಿತ್ವ ಕಳೆದಕೊಂಡ ನಂತರ ವಾರ್ಡ್ ಪುನರ್ ವಿಂಗಡಣೆ ಕಾರ್ಯ ಆರಂಭವಾಗಲಿದೆ.
4. ಬಿಬಿಎಂಪಿಯ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರಿಗೆ ಜಿಬಿಎ ಮುಖ್ಯ ಆಯುಕ್ತರ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.
5. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024ರ ಅಡಿ ಪ್ರಾಧಿಕಾರದ ಸಮಿತಿ ರಚನೆ ಮಾಡಿದ್ದು, ಮುಖ್ಯಮಂತ್ರಿ ಸೇರಿದಂತೆ ಒಟ್ಟು 75 ಮಂದಿ ಸದಸ್ಯರನ್ನು ಒಳಗೊಂಡಿದೆ.
6. ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿಯ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು ಜಿಬಿಎಗೆ ಪದನಿಮಿತ್ತ ಸದಸ್ಯರಾಗಿರುತ್ತಾರೆ.
7. ಬಿಡಿಎ, ಬೆಸ್ಕಾಂ, ಜಲಮಂಡಳಿ, ನಗರ ಪೊಲೀಸ್, ಬಿಎಂಟಿಸಿ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಜಿಬಿಎಗೆ ಪದನಿಮಿತ್ತ ಸದಸ್ಯರನ್ನಾಗಿ ನೇಮಿಸಿ, ಆದೇಶ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅಪ್ಡೇಟ್ಸ್ ಕೊಟ್ಟಿದ್ದಾರೆ.












Click it and Unblock the Notifications