ನಾಳೆಯಿಂದಲೇ ನಮ್ಮ ಮನೆ ಮುಂದೆ ಮಲಗಲಿ : ಪ್ರತಾಪ್ ಸಿಂಹ ಹೇಳಿಕೆಗೆ ಡಿಕೆಶಿ ವ್ಯಂಗ್ಯ
ಬೆಂಗಳೂರು, ಮೇ 26: ಜೂನ್ 1ರಿಂದ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿ ಮಾಡದೇ ಇದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಪ್ರತಿಭಟನೆ ಮಾಡೋಕೆ ಜೂನ್ವರೆಗೆ ಕಾಯೋದ್ಯಾಕೆ? ನಾಳೆಯೇ ನಮ್ಮ ಮನೆ ಮುಂದೆ ಬಂದು ಮಲಗಲು ಹೇಳಿ ಎಂದು ವ್ಯಂಗ್ಯವಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ನವರ ಮುಖ ನೋಡಿ ಯಾರೂ ಮತ ಹಾಕಿಲ್ಲ, ಅವರು ಘೋಷಣೆ ಮಾಡಿದ್ದ ಗ್ಯಾರಂಟಿಗಳಿಗೆ ಮತ ಹಾಕಿದ್ದಾರೆ. ಅದನ್ನು ಕಾಂಗ್ರೆಸ್ ನಾಯಕರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೊಟ್ಟ ಭರವಸೆಗಳನ್ನು ಈಡೇರಿಸಬೇಕು. ಜೂನ್ 1ರ ವೇಳೆಗೆ ಗ್ಯಾರಂಟಿಗಳನ್ನು ಈಡೇರಿಸಲಿ, ಷರತ್ತುಗಳನ್ನು ವಿಧಿಸದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ದೆಹಲಿಯಿಂದ ಬೆಂಗಳೂರಿಗೆ ಬಂದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಇಲ್ಲೇ ನಮ್ಮ ಮನೆ ಹತ್ತಿರ ಬಂದ ಮಲಗಲಿ, ಜೂನ್ ವರೆಗೆ ಯಾಕೆ ಕಾಯಬೇಕು? ನಾಳೆಯಿಂದಲೇ ಬಂದು ಮನೆ ಮುಂದೆ ಮಲಗಲು ಹೇಳಿ ಎಂದು ಉತ್ತರ ನೀಡಿದರು.
ನಾಳೆ ವೇಳೆಗೆ ಎಲ್ಲವೂ ಸ್ಪಷ್ಟ
ಸಂಪುಟ ವಿಸ್ತರಣೆಗಾಗಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಡಿಕೆ ಶಿವಕುಮಾರ್ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿರುವುದಾಗಿ ತಿಳಿಸಿದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ದೆಹಲಿಗೆ ತೆರಳುವುದಾಗಿ ಮಾಹಿತಿ ನೀಡಿದರು.
ಸಚಿವ ಸಂಪುಟ ರಚನೆ ಬಗ್ಗೆ ಮಾತನಾಡಿದ ಅವರು, ನಾಳೆ ಒಂದು ದಿನ ಮಾತ್ರ ಎಲ್ಲ ಮಾಹಿತಿ ನಾನೇ ನೀಡುತ್ತೇನೆ. ಎಲ್ಲವೂ ನಿಮಗೆ ತಿಳಿಯಲಿದೆ ಎಂದು ಹೇಳಿದರು. ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಮುಗಿದ ತಕ್ಷಣ ಮತ್ತೆ ದೆಹಲಿಗೆ ಹೋಗುವುದಾಗಿ ಹೇಳಿದರು.
ಕಾಂಗ್ರೆಸ್ಗೆ ಸಂಕಷ್ಟ ತಂದಿಟ್ಟ ಘೋಷಣೆಗಳು
ಕಾಂಗ್ರೆಸ್ ಘೋಷಣೆ ಮಾಡಿರುವ ಉಚಿತ ಘೋಷಣೆಗಳು ಸದ್ಯ ಸರ್ಕಾರಕ್ಕೆ ಪಜೀತಿ ತಂದಿಟ್ಟಿವೆ. ಸಾಕಷ್ಟು ಜನ ತಾವು ವಿದ್ಯುತ್ ಬಿಲ್ ಕಟ್ಟಲ್ಲ ಎಂದು ಹೇಳುತ್ತಿರುವುದು ವಿದ್ಯುತ್ ಇಲಾಖೆ ನೌಕರರಿಗೆ ತಲೆನೋವು ತಂದಿದೆ. ಈ ಬಗ್ಗೆ ಸರ್ಕಾರ ಆದಷ್ಟು ಬೇಗ ಸ್ಪಷ್ಟನೆ ಕೊಡಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.
ಇನ್ನು ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಟಿಕೆಟ್ ಖರೀದಿ ಮಾಡಲು ಕೂಡ ಕಿರಿಕ್ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಇದೆ, ನಾವೇಕೆ ಟಿಕೆಟ್ ಖರೀದಿ ಮಾಡಬೇಕು ಎಂದು ಜಗಳ ಮಾಡುತ್ತಿದ್ದಾರೆ ಇದರಿಂದ ಹೈರಾಣಾಗಿರುವ ಸಾರಿಗೆ ಇಲಾಖೆ ಸಿಬ್ಬಂದಿ ಆದಷ್ಟು ಬೇಗ ಯೋಜನೆ ಮಾಡುವಂತೆ ಒತ್ತಾಯಿಸಿದ್ದಾರೆ.












Click it and Unblock the Notifications