ಸಿ.ಆರ್.ಸಿಂಹ ನೆನಪಿನಲ್ಲಿ ನಾಟಕೋತ್ಸವ
ಬೆಂಗಳೂರು, ಏ. 22 : ಇತ್ತೀಚೆಗೆ ನಿಧನರಾದ ರಂಗಕರ್ಮಿ ಸಿ.ಆರ್. ಸಿಂಹ ಅವರ ನೆನಪಿನಲ್ಲಿ ಮಂಗಳವಾರ ನಮ್ಮ ಸಿಮ್ಮ- ರಂಗಭೂಮಿ ಸಿಂಹ' ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏ.29ರಿಂದ ಮೇ ಒಂದರವರೆಗೆ ಮೂರು ದಿನಗಳ ನಾಟಕೋತ್ಸವವನ್ನು ರಂಗ ನಿರಂತರ ಹಾಗೂ ಭಾರತ ಯಾತ್ರಾ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡಿದೆ.
ಏ.22ರ ಮಂಗಳವಾರ ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಟರಂಗ ಮತ್ತು ವೇದಿಕೆ ಸಂಸ್ಥೆಗಳು ಜಂಟಿಯಾಗಿ ಸಿ.ಆರ್. ಸಿಂಹ ನೆನಪಿನ ಕಾರ್ಯಕ್ರಮ ‘ನಮ್ಮ ಸಿಮ್ಮ- ರಂಗಭೂಮಿ ಸಿಂಹ' ಕಾರ್ಯಕ್ರಮ ಆಯೋಜಿಸಿವೆ. ಸ್ಪಂದನ- ನಟರಂಗ ಕಲಾವಿದರಿಂದ ಸಿಂಹ ನಿರ್ದೇಶಿಸಿದ ನಾಟಕಗಳ ರಂಗ ಗೀತೆಗಳ ಗಾಯನ ಮತ್ತು ವೇದಿಕೆಯಿಂದ ನಿರ್ದೇಶಿಸಿದ ನಾಟಕಗಳ ವಿಡಿಯೋ ತುಣುಕು ಪ್ರದರ್ಶನವಿದೆ. [ಸಿಆರ್ ಸಿಂಹ ಇನ್ನಿಲ್ಲ]

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಬಿ. ಜಯಶ್ರೀ, ಅರುಂಧತಿ ನಾಗ್, ಗಿರಿಜಾ ಲೋಕೇಶ್, ಚಿರಂಜೀವಿ ಸಿಂಗ್, ಗಿರೀಶ್ ಕಾಸರವಳ್ಳಿ, ದ್ವಾರಕೀಶ್, ಕೆ.ಎಸ್.ಎಲ್. ಸ್ವಾಮಿ, ಟಿ.ಎಸ್. ನಾಗಾಭರಣ, ವಿಶ್ವೇಶ್ವರ ಭಟ್, ಟಿ.ಎನ್. ಸೀತಾರಾಮ್, ಕೆ.ಎಂ. ಶ್ರೀನಿವಾಸ ಗೌಡ, ಡಾ. ಎಚ್.ಎಸ್. ವೆಂಕಟೇಶ್ಮೂರ್ತಿ ಮುಂತಾದವರು ಭಾಗವಹಿಸಲಿದ್ದಾರೆ. [ರಂಗ ಭೂಮಿಯ 'ಪ್ರಭಾತ' ನಮ್ಮ ಸಿಮ್ಮ]
29ರಿಂದ ನಾಟಕೋತ್ಸವ : ಸಿ.ಆರ್. ಸಿಂಹ ಅವರ ನೆನಪಿನಲ್ಲಿ ಏ.29ರಿಂದ ಮೇ 1 ಮೂರು ದಿನಗಳ ನಾಟಕೋತ್ಸವವನ್ನು ರಂಗ ನಿರಂತರ ಹಾಗೂ ಭಾರತ ಯಾತ್ರಾ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡಿವೆ. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಈ ನಾಟಕೋತ್ಸವ ನಡೆಯಲಿದ್ದು, ‘ಶಿವಸಂಚಾರ' ತಂಡದ ಕಲಾವಿದರು ಪಾಲ್ಗೊಳ್ಳಲಿದ್ದು, ಶಿವಸಂಚಾರ ನಾಟಕೋತ್ಸವ ಎಂದು ಹೆಸರಿಡಲಾಗಿದೆ.
ಏ.29ರಂದು ‘ಮಹಾಬೆಳಗು' (ರಚನೆ: ಡಾ. ರಾಜಶೇಖರ್ ಹನುಮನಿ, ನಿರ್ದೇಶನ: ವೈ.ಡಿ. ಬಾದಾಮಿ), ಏ.30 ರಂದು ‘ಶರಣಸತಿ-ಲಿಂಗಪತಿ' (ರಚನೆ: ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ನಿರ್ದೇಶನ: ಎಸ್. ಮಾಲತಿ ಸಾಗರ) ಹಾಗೂ ಮೇ 1 ರಂದು ‘ವಿಶ್ವಬಂಧು ಮರುಳಸಿದ್ಧ' (ರಚನೆ: ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ನಿರ್ದೇಶನ: ಮಾಲತೇಶ್ ಬಡಿಗೇರ) ನಾಟಕಗಳು ಪ್ರದರ್ಶನಗೊಳ್ಳಲಿವೆ.
ಈ ಎಲ್ಲಾ ನಾಟಕಗಳನ್ನು ರಂಗಾಸಕ್ತರು ಉಚಿತವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಸಂಘಟಕರು ಉಚಿತ ಪಾಸ್ ಗಳನ್ನು ವಿತರಿಸಲಿದ್ದಾರೆ. ಏ. 23ರ ಬುಧವಾರ ಸಂಜೆ 4ರಿಂದ ಪಾಸ್ ಗಳು ರವೀಂದ್ರ ಕಲಾಕ್ಷೇತ್ರದಲ್ಲಿ ದೊರೆಯಲಿವೆ. ಆಸಕ್ತರು ಅಲ್ಲಿಯೇ ತಮ್ಮ ಹೆಸರು ನೋಂದಾಯಿಸಿಕೊಂಡು ಪಾಸ್ ಗಳನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9886543697, 9008199033 ನಂಬರ್ ಗಳಿಗೆ ಕರೆ ಮಾಡಬಹುದಾಗಿದೆ.












Click it and Unblock the Notifications