ಚೀಟರ್ ಯುವರಾಜ್ 80 ಕೋಟಿ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಅಸ್ತು !
ಬೆಂಗಳೂರು, ಜನವರಿ 22: ಆರ್ಎಸ್ಎಸ್ ನಕಲಿ ನಾಯಕನ ಸೋಗಿನಲ್ಲಿ ಸಿಕ್ಕ ಸಿಕ್ಕವರಿಗೆ ಉಂಡೆನಾಮ ಹಾಕಿದ್ದ ಯುವರಾಜ್ ಅಲಿಯಾಸ್ ಸ್ವಾಮಿ ಹಾಗೂ ಸ್ವಾಮಿ ಪತ್ನಿಯ ಸಂಪೂರ್ಣ ಅಸ್ತಿ ಮುಟ್ಟು ಗೋಲಿಗೆ ನ್ಯಾಯಾಲಯ ಅಸ್ತು ಎಂದಿದೆ.
ಉದ್ಯಮಿಯೊಬ್ಬರಿಗೆ ನಿಗಮದ ಆಧ್ಯಕ್ಷರನ್ನಾಗಿ ಮಾಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಸ್ವಾಮಿ ವಂಚಿಸಿದ್ದರು. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸ್ವಾಮಿಯನ್ನು ಬಂಧಿಸಿ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಸಾಕಷ್ಟು ಅಕ್ರಮಗಳು ಬಯಲಿಗೆ ಬಂದಿದ್ದವು. ನಿವೃತ್ತ ನ್ಯಾಯಾಧೀಶರನ್ನು ರಾಜ್ಯಪಾಲರನ್ನಾಗಿ ಮಾಡುವುದಾಗಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ. ಬಳಿಕ ನಟಿ ರಾಧಿಕಾ ಕುಮಾರಸ್ವಾಮಿ ಅವರ ಬ್ಯಾಂಕ್ ಖಾತೆಗೂ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಸ್ವಾಮಿ ಸುದ್ದಿಯಾಗಿದ್ದ.
ನಾನು ಆರ್ಎಸ್ಎಸ್ ಮುಖಂಡ. ನನಗೆ ಕೇಂದ್ರ ಹಾಗೂ ರಾಜ್ಯದ ಜನ ಪ್ರತಿನಿಧಿಗಳು ಪರಿಚಯವಿದ್ದಾರೆ ಎಂದು ನಂಬಿಸಿದ್ದ. ಮಾತ್ರವಲ್ಲ ಕೇಂದ್ರ ಗೃಹ ಸಚಿವ ಅಮಿತ್ ಶಾ , ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ತೆಗೆಸಿಕೊಂಡಿದ್ದ ಭಾವಚಿತ್ರಗಳನ್ನು ತೋರಿಸಿ ನಂಬಿದವರಿಗೆ ಮಂಕು ಬೂದಿ ಎರಚುತ್ತಿದ್ದ. ಕೋಟ್ಯಂತರ ರೂಪಾಯಿ ಹಣ ಪಡೆದು ಮೋಸ ಮಾಡಿದ್ದ. ಸ್ವಾಮಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ ಬಳಿಕ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಸ್ವಾಮಿ ಮತ್ತು ಪತ್ನಿಗೆ ಸೇರಿದ 80 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡುವಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸಿಸಿಬಿ ಪೊಲೀಸರ ಪರ ಸರ್ಕಾರಿ ಅಭಿಯೋಜಕ ಬಿ.ಎಸ್. ಪಾಟೀಲ್ ವಾದ ಮಂಡಿಸಿದ್ದರು. ಸಿಸಿಬಿ ಪೊಲೀಸರ ವಾದವನ್ನು ಮನ್ನಿಸಿದ ಸಿಟಿ ಸಿವಿಲ್ ನ್ಯಾಯಾಲಯದ 67 ನೇ ನ್ಯಾಯಾಧೀಶರಾದ ಕ್ಯಾತ್ಯಾಯಿನಿ ಸ್ವಾಮಿ ಮತ್ತು ಸ್ವಾಮಿ ಪತ್ನಿಯ 80 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮಧ್ಯಂತರ ಆದೇಶಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸರ್ಕಾರಿ ಅಭಿಯೋಜಕರಾದ ಬಿ.ಎಸ್. ಪಾಟೀಲ್, ಸಿಸಿಬಿ ಪೊಲೀಸರು ಕಲೆ ಹಾಕಿ ನೀಡಿದ್ದ ದಾಖಲೆಗಳನ್ನ ನ್ಯಾಯಾಲಯ ಮಣ್ಣಿಸಿದೆ. ಹೀಗಾಗಿ ಸ್ವಾಮಿಗೆ ಹಣ ಕೊಟ್ಟು ಮೋಸ ಹೋದವರಿಗೆ ವಾಪಸು ನೀಡಲು ನ್ಯಾಯಾಲಯದ ಆದೇಶ ಮಹತ್ವದ್ದಾಗಿದೆ. ಯುವರಾಜ್ ಅಲ್ಲದೇ ಅವರ ಪತ್ನಿಯ ಆಸ್ತಿಯ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಆದೇಶ ಮಾಡಿದೆ ಎಂದು ಹೇಳಿದರು.












Click it and Unblock the Notifications