ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಕಾರು ಅಪಘಾತ
ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಕಾರು ಅಪಘಾತಕ್ಕೀಡಾಗಿದೆ. ಬೆಂಗಳೂರಿನ ಶಾಸಕರ ಭವನ-2ರ ಬಳಿ ಈ ಘಟನೆ ಸಂಭವಿಸಿದೆ. ಪೊಲೀಸ್ ವಾಹನವೇ ಬಂದು ಶಾಸಕರ ಕಾರಿಗೆ ಏಕಾಏಕಿ ಡಿಕ್ಕಿ ಹೊಡೆದಿದೆ. ಪೊಲೀಸ್ ವಾಹನ ಗುದ್ದಿದ ರಭಸಕ್ಕೆ ಶಿವಲಿಂಗೇಗೌಡರ ಕಾರು ಜಖಂ ಆಗಿದೆ.
ಶಿವಲಿಂಗೇಗೌಡರ ಸರ್ಕಾರಿ ಇನ್ನೋವಾ ಕಾರು ಶಾಸಕರ ಭವನದ ಮುಂದೆ ನಿಂತಿತ್ತು. ಈ ವೇಳೆ ಮತ್ತೊಂದು ಬದಿಯಿಂದ ಬಂದ ಪೊಲೀಸ್ ಜೀಪ್ ಶಾಸಕರ ಕಾರಿಗೆ ಡಿಕ್ಕಿ ಹೊಡೆದಿದೆ. ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಶಾಸಕರ ಕಾರು ಜಖಂ ಆಗಿದೆ. ಕಾರಿನ ಚಾಲಕ ಕೂರುವ ಸೀಟ್ ಡೋರ್ಗೆ ಡ್ಯಾಮೇಜ್ ಕೂಡ ಆಗಿದೆ.

ಶಾಸಕ ಶಿವಲಿಂಗೇಗೌಡ ಅವರು ಶಾಸಕರ ಭವನದಿಂದ ವಿಧಾನಸೌಧದ ಕಡೆಗೆ ತೆರಳುವವರಿದ್ದರು. ಇದೇ ವೇಳೆ ಪೊಲೀಸ್ ಜೀಪ್ ಚಲಾಯಿಸುತ್ತಿದ್ದ ಸಿಬ್ಬಂದಿ ನಿಯಂತ್ರಣ ತಪ್ಪಿ ನೇರವಾಗಿ ಶಾಸಕರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅದೃಷ್ಟವಶಾತ್ ಶಾಸಕರ ಕಾರ್ನಲ್ಲಿದ್ದ ಏರ್ಬ್ಯಾಗ್ ಕೂಡಲೇ ಓಪನ್ ಆಗಿದೆ. ಘಟನೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರ ಕೈಗೆ ಚೂರು ಗಾಯಗಳಾಗಿವೆ ಎಂದು ವರದಿಯಾಗಿದೆ.
ಪೊಲೀಸ್ ಕಾನ್ಸ್ಟೆಬಲ್ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ. ಶಾಸಕರಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಸಣ್ಣ ಗಾಯಗಳಾಗಿವೆ. ಈ ಘಟನೆ ಬಗ್ಗೆ ಗರಂ ಆಗಿರುವ ಶಿವಲಿಂಗೇಗೌಡರು ಪೊಲೀಸ್ ಜೀಪ್ ಚಲಾಯಿಸಿದ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಜನ ಜಮಾಯಿಸಿದ್ದಾರೆ. ಕೂಡಲೇ ಡಿಕ್ಕಿ ಹೊಡೆದ ಪೊಲೀಸ್ ವಾಹನವನ್ನು ತೆರವು ಮಾಡಿದ್ದಾರೆ.

ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಶಾಸಕ ಶಿವಲಿಂಗೇಗೌಡ ಅವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಕಾರಿನ ಮುಂದಿನ ಡೋರ್ ಜಖಂ ಆಗಿದೆ. ಕಾರಿನ ಹಿಂಬದಿಗೂ ಹಾನಿಯಾಗಿದೆ. ಶಾಸಕರು ಕಾರನ್ನು ಹತ್ತುವ ಸಂದರ್ಭದಲ್ಲೇ ಈ ದುರ್ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮಂತ್ರಿಯಾಗುತ್ತೇನೆ ಎಂದ ಶಿವಲಿಂಗೇಗೌಡ: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದ ಶಾಸಕ ಶಿವಲಿಂಗೇಗೌಡ ಅವರು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ನಿನ್ನೆಯೂ ಈ ಬಗ್ಗೆ ಮಾತನಾಡಿದ್ದ ಅವರು ನಾನು ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವುದರಿಂದ ಸಚಿವನಾಗುವ ಆಸೆ ಖಂಡಿತವಾಯವಾಗಿಯೂ ಇದೆ ಎಂದಿದ್ದಾರೆ.
ಹೈಕಮಾಂಡ್ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರು ಎರಡನೇ ಅವಧಿಗೆ ನನನ್ನು ಸಚಿವನಾಗಿ ಮಾಡುವ ಭರವಸೆ ನೀಡಿದ್ದಾರೆ. ಹಾಗಾಗಿ ನನಗೆ ಈ ವಿಚಾರದಲ್ಲಿ ಅವಸರವೇನೂ ಇಲ್ಲ. ಸಚಿವ ಸಂಪುಟ ಪುನರ್ರಚನೆಯಾಗುವುದಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಈಗಾಗಲೇ ಅವರು ಹಲವು ವೇದಿಕೆಗಳಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿ ಆಸೆ ಬಿಚ್ಚಿಟ್ಟಿದ್ದಾರೆ.












Click it and Unblock the Notifications