ಉಪ ಚುನಾವಣೆ; ಆರ್. ಆರ್. ನಗರದಲ್ಲಿ ಕಾಂಗ್ರೆಸ್ ಪಾಬಲ್ಯ ಕುಸಿತ!
ಬೆಂಗಳೂರು, ಅಕ್ಟೋಬರ್ 02: ಬೆಂಗಳೂರಿನಲ್ಲಿ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ರಾಜರಾಜೇಶ್ವರಿ ನಗರ. ನವೆಂಬರ್ 3ರಂದು ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಪಕ್ಷದ ಬಲ ಕುಸಿದಿದೆ.
2013 ಮತ್ತು 2018ರಲ್ಲಿ ಕಾಂಗ್ರೆಸ್ನ ಮುನಿರತ್ನ ಅವರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಅದರಲ್ಲಿಯೂ 2018ರಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಆರೋಪ ಕೇಳಿ ಬಂದಾಗಲೇ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗಿದ್ದರು.
ರಾಜಕೀಯ ಚಿತ್ರಣ ಬದಲಾಗಿದ್ದು, ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಬಿಜೆಪಿಯಿಂದ ಉಪ ಚುನಾವಣೆಯಲ್ಲಿ ಅವರು ಅಭ್ಯರ್ಥಿಯಾಗಬಹುದು. ಮುನಿರತ್ನಗೆ ಎದುರಾಳಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ.
ಆರ್. ಆರ್. ನಗರ ಕ್ಷೇತ್ರದಲ್ಲಿ ಜೆಡಿಎಸ್ ಸಹ ಪ್ರಾಬಲ್ಯ ಹೊಂದಿದೆ. ಅದಕ್ಕೆ ಕಾರಣ ಸುಮಾರು 1.10 ಲಕ್ಷದಷ್ಟಿರುವ ಒಕ್ಕಲಿಗರ ಮತಗಳು. 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪಡೆದ ಮತ 60 ಸಾವಿರಕ್ಕೂ ಅಧಿಕ.

ಬಿಜೆಪಿ ಹಿಡಿತದಲ್ಲಿದ್ದ ಕ್ಷೇತ್ರ
ಬಿಜೆಪಿ ಹಿಡಿತದಲ್ಲಿದ್ದ ಕ್ಷೇತ್ರವನ್ನು ಮುನಿರತ್ನ 2013ರಲ್ಲಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದರು. 2018ರ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ಮೂಲಕ ಆರ್. ಆರ್. ನಗರವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದರು. ಆದರೆ, ಈಗ ಚಿತ್ರಣ ಬದಲಾಗಿದೆ.

5ರಲ್ಲಿ ಕಾಂಗ್ರೆಸ್ ಸದಸ್ಯರು ಇದ್ದರು
ಆರ್. ಆರ್. ನಗರ ಕ್ಷೇತ್ರದಲ್ಲಿ ಹಿಂದೆ ಕಾಂಗ್ರೆಸ್ ಪ್ರಾಬಲ್ಯವಿತ್ತು. 9 ವಾರ್ಡ್ಗಳ ಪೈಕಿ 5 ಕಾಂಗ್ರೆಸ್, 3 ಬಿಜೆಪಿ ಮತ್ತು 1 ಜೆಡಿಎಸ್ ವಶದಲ್ಲಿತ್ತು. ಮುನಿರತ್ನ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಬಳಿಕ ಕಾಂಗ್ರೆಸ್ನಲ್ಲಿದ್ದವರೂ ಬಿಜೆಪಿಗೆ ಬಂದಿದ್ದಾರೆ. ಜೆಡಿಎಸ್ ಸದಸ್ಯರು ಬಿಜೆಪಿಗೆ ಬಂದಿದ್ದಾರೆ.

ಡಿ. ಕೆ. ಸುರೇಶ್ ಪ್ರತಿಷ್ಠೆಯ ಪ್ರಶ್ನೆ
ಸುಮಾರು 4.60 ಲಕ್ಷ ಮತದಾರರು ಇರುವ ಆರ್. ಆರ್. ನಗರ ವಿಧಾನಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕ್ಷೇತ್ರದ ಸಂಸದರು ಕಾಂಗ್ರೆಸ್ನ ಡಿ. ಕೆ. ಸುರೇಶ್. ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು. ಆದ್ದರಿಂದ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರತಿಷ್ಠೆ ಅಡಗಿದೆ.
Recommended Video

ಯಾರಾಗಲಿದ್ದಾರೆ ಅಭ್ಯರ್ಥಿ?
ಆರ್. ಆರ್. ನಗರದಲ್ಲಿ ಉಪ ಚುನವಣೆಗೆ ಅಭ್ಯರ್ಥಿ ಯಾರು? ಎಂಬುದು ಪ್ರಶ್ನೆ. ಡಿ. ಕೆ. ರವಿ ಪತ್ನಿ ಕುಸುಮಾ, ಮಾವ ಹನುಮಂತರಾಯಪ್ಪ, ಐಡಿಯಲ್ ರಾಜ್ಕುಮಾರ್, ಪ್ರಿಯಾ ಕೃಷ್ಣ ಸೇರಿದಂತೆ ಹಲವಾರು ಹೆಸರುಗಳು ಕೇಳಿ ಬರುತ್ತಿವೆ.












Click it and Unblock the Notifications