Tejasvi Surya: ಸಿದ್ದರಾಮಯ್ಯ ಆಶೀರ್ವಾದ ಪಡೆದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು, ಮಾರ್ಚ್ 09: ಬಿಜೆಪಿ ನಾಯಕ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರತಕ್ಷತೆ ಬೆಂಗಳೂರಿನಲ್ಲಿ ಭಾನುವಾರ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಆರತಕ್ಷತೆಗೆ ಆಗಮಿಸಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ದಂಪತಿಗಳಿಗೆ ಶುಭ ಹಾರೈಸಿ, ಆಶೀರ್ವದಿಸಿದರು.
ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ ಜೊತೆ ಕಾರ್ಯಕ್ರಮಕ್ಕೆ ಆಗಮಿಸಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ದಂಪತಿಗಳಿಗೆ ಶುಭ ಹಾರೈಸಿದರು.

ಕಾಲು ನೋವಿನ ಕಾರಣ ಹಲವು ದಿನಗಳಿಂದ ಯಾವುದೇ ಖಾಸಗಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿರಲಿಲ್ಲ. ಆದರೆ ಭಾನುವಾರ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ಆರತಕ್ಷತೆಗೆ ಆಗಮಿಸಿದರು. ದಂಪತಿಗಳಿಗೆ ಹೂ ಗುಚ್ಛ ನೀಡಿ ಶುಭ ಕೋರಿದರು. ತೇಜಸ್ವಿ ಸೂರ್ಯ ಸಿದ್ದರಾಮಯ್ಯ ಕಾಲಿಗೆ ಬಿದ್ದು ಅಶೀರ್ವಾದವನ್ನು ಪಡೆದರು.
ಸಿದ್ದರಾಮಯ್ಯ ಜೊತೆಗೆ ಆಗಮಿಸಿದ್ದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಸಹ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ದಂಪತಿಗಳಿಗೆ ಹೂಗುಚ್ಛ ನೀಡಿ ಶುಭ ಕೋರಿದರು.
ಡಿ. ಕೆ. ಶಿವಕುಮಾರ್ ಶುಭ ಹಾರೈಕೆ: ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ ಸಹ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ಆರತಕ್ಷತೆಗೆ ಆಗಮಿಸಿದ್ದರು. ದಂಪತಿಗಳಿಗೆ ಶುಭ ಹಾರೈಸಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಆರತಕ್ಷತೆಗೆ ಆಗಮಿಸಿ ದಂಪತಿಗಳನ್ನು ಹರಸಿದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರರಾದ ಬಿ. ವೈ. ವಿಜಯೇಂದ್ರ, ಬಿ. ವೈ. ರಾಘವೇಂದ್ರ ಜೊತೆ ಆರತಕ್ಷತೆಗೆ ಆಗಮಿಸಿ ದಂಪತಿಗಳಿಗೆ ಶುಭ ಕೋರಿದರು. ಯಡಿಯೂರಪ್ಪ ಕಾಲಿಗೆ ನಮಸ್ಕಾರ ಮಾಡಿ ದಂಪತಿಗಳಿ ಆಶೀರ್ವಾದವನ್ನು ಪಡೆದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಬಿಜೆಪಿಯ ಹಲವು ಶಾಸಕರು, ವಿಧಾನ ಪರಿಷತ್ ಸದಸ್ಯರು ಆರತಕ್ಷತೆಗೆ ಆಗಮಿಸಿ, ದಂಪತಿಗಳಿಗೆ ಶುಭ ಕೋರಿದರು.
ಮಾರ್ಚ್ 5 ಹಾಗೂ 6 ರಂದು ತೇಜಸ್ವಿ ಸೂರ್ಯ ವಿವಾಹ ಸಮಾರಂಭ ಕನಕಪುರದ ರೆಸಾರ್ಟ್ನಲ್ಲಿ ನಡೆದಿತ್ತು. ತೇಜಸ್ವಿ ಸೂರ್ಯ ಕುಟುಂಬದವರ ಸಮ್ಮುಖದಲ್ಲಿ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ವಿವಾಹವಾಗಿದ್ದರು. ಹಲವಾರು ಬಿಜೆಪಿ ನಾಯಕರು ವಿವಾಹಕ್ಕೆ ಆಗಮಿಸಿ, ದಂಪತಿಗಳಿಗೆ ಶುಭ ಕೋರಿದ್ದರು.
ಮಾರ್ಚ್ 6ರಂದು ನಡೆ ತೇಜಸ್ವಿ ಸೂರ್ಯ ವಿವಾಹಕ್ಕೆ ಬಿ. ಎಲ್. ಸಂತೋಷ್, ಕೇಂದ್ರ ಸಚಿವ ವಿ. ಸೋಮಣ್ಣ, ವಿಜಯ್ ಗುರೂಜಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಸಂಸದ ಪ್ರತಾಪ್ ಸಿಂಹ ಮುಂತಾದ ಗಣ್ಯರು ಸಾಕ್ಷಿಯಾಗಿದ್ದರು.
ಸಂಸದ ತೇಜಸ್ವಿ ಸೂರ್ಯ ತಮಿಳುನಾಡು ಮೂಲದ ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವಿವಾಹವಾಗಿದ್ದಾರೆ. ಮಾರ್ಚ್ 5ರಂದು ವರಪೂಜೆ ಸೇರಿದಂತೆ ವಿವಿಧ ಶಾಸ್ತ್ರಗಳು ನಡೆದಿದ್ದವು. ಮಾರ್ಚ್ 6ರಂದು ಬೆಳಗ್ಗೆ 9.30 ರಿಂದ 10.15ರ ನಡುವಿನ ತುಲಾ ಲಗ್ನದಲ್ಲಿ ವಿವಾಹ ನಡೆದಿತ್ತು.












Click it and Unblock the Notifications