ಸಿಐಡಿ ತನಿಖೆಗೆ ಆದೇಶಿಸಿದ್ದು ಸದಾನಂದ ಗೌಡರು: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 22: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತನ್ನೇ ಉದಾಹರಿಸಿ ಹೇಳುವುದಾದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಣ್ಣು ಚುಚ್ಚುತ್ತಿರುವುದು ಅವರದೇ ಬೆರಳು. ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ನ ಕುರಿತು ಸಿಐಡಿ ತನಿಖೆಗೆ ಆದೇಶಿಸಿದ್ದು ಡಿ.ವಿ.ಸದಾನಂದ ಗೌಡ ಎಂದು ಸಿಎಂ ಹೇಳಿದ್ದಾರೆ.
ಈ ಬಗ್ಗೆ ಪತ್ರಕರ್ತರ ಜತೆ ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿಯ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಡಿ.ವಿ. ಸದಾನಂದ ಗೌಡ ಆಗ ಮಾಡಿದ್ದ ಆದೇಶವನ್ನು ಮುಚ್ಚಿಟ್ಟಿದ್ದರು. ಈಗ ದೂರು ಬಂದಿದ್ದರಿಂದ ಮತ್ತೊಂದು ಸಲ ಎಫ್ ಐಆರ್ ಆಗಿದೆ. ಯಡಿಯೂರಪ್ಪ ತಪ್ಪು ಮಾಡಿಲ್ಲ ಅಂದರೆ ಏಕೆ ಹೆದರಬೇಕು ಎಂದು ಪ್ರಶ್ನಿಸಿದ್ದಾರೆ.

ದೂರು ಬಂದ ಮೇಲೂ ತನಿಖೆ ನಡೆಸದೆ ಸುಮ್ಮನಿರಬೇಕಾ? ಎಸಿಬಿ ತನಿಖೆಯಲ್ಲಿ ಸರಕಾರ ಮೂಗು ತೂರಿಸುವುದಿಲ್ಲ. ಈ ಪ್ರಕರಣದಲ್ಲಿ ಅಧಿಕಾರಿ ತಪ್ಪು ಮಾಡಿದ್ದರೆ ಅವರ ವಿಚಾರಣೆಯೂ ನಡೆಯಲಿ ಎಂದಿದ್ದಾರೆ.
ಇನ್ನು ಡಿನೋಟಿಫಿಕೇಷನ್ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳು ಒತ್ತಡ ಹಾಕಿದ್ದಾರೆ ಎಂದು ಕೆಎಎಸ್ ಅಧಿಕಾರಿ ಬಸವರಾಜೇಂದ್ರ ದೂರು ನೀಡಿದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ.
ಎಸಿಬಿ ವಿರುದ್ಧ ಬಿಜೆಪಿಯ ಆರೋಪ ಸತ್ಯಕ್ಕೆ ದೂರವಾದದ್ದು. ಇನ್ನು ಬಸವರಾಜೇಂದ್ರ ಅವರ ದೂರಿನಲ್ಲಿ ರಾಜಕೀಯ ಇದ್ದಂತಿದೆ. ಬಿಜೆಪಿಯವರ ಮೇಲೆ ಈಗಾಗಲೇ ಬೇಕಾದಷ್ಟು ಪ್ರಕರಣಗಳಿವೆ. ಅವು ಮತ್ತೆ ಜೀವ ಪಡೆದರೆ ರಾಜಕೀಯ ದ್ವೇಷ ಹೇಗಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications