ಲಾಲೂ ಬಂಧನ: ಕಳಂಕಿತರಿಗೆ ಕಾದಿದೆ ಗಂಡಾಂತರ

ಆದರೆ ಇದರ ಹೊಡೆತ ಬೀಳುವುದು ಹೆಚ್ಚಾಗಿ ಲಾಲು ಪ್ರಸಾದ್ ಯಾದವ್ ಗೆ. ಏಕೆಂದರೆ 65 ವರ್ಷದ ಲಾಲುಗೆ ರಾಜಕೀಯದಲ್ಲಿ ಇನ್ನೂ ಭವಿಷ್ಯವಿದೆ. ಆದರೆ ಇಂದಿನ ತೀರ್ಪು ಲಾಲೂ ರಾಜಕೀಯ ಜೀವನಕ್ಕೆ ಮುಳುಗುನೀರು ತಂದಿದೆ.
ಇಲ್ಲಿ ಹೇಳಹೊರಟಿರುವುದು ಇಂತಹುದೇ ಲಾಲೂಗಳ ಬಗ್ಗೆ. ಅಂದಹಾಗೆ ಹಾಲಿ ಸಂಸತ್ತಿನಲ್ಲಿ ಶೇ. 15 ರಷ್ಟು ಮಂದಿ ಇಂತಹುದೇ ಲಾಲೂಗಳಿದ್ದಾರೆ. ಅವರಲ್ಲಿ ಲೋಕಸಭಾ ಸದಸ್ಯ ಲಾಲೂ ಸಹ ಒಬ್ಬರು.
ಇತ್ತೀಚೆಗೆ ರಾಜಕೀಯ ಪಕ್ಷಗಳ ಜಂಘಾಬಲವನ್ನೇ ಉಡುಗಿಸಿರುವ ಕಳಂಕಿತ ಜನಪ್ರತಿನಿಧಿಗಳ ಅನರ್ಹತೆ ಕಾಯ್ದೆ ಜಾರಿಯಾದರೆ ಶೇ. 15ಕ್ಕೂ ಹೆಚ್ಚು ಹಾಲಿ ಸಂಸದರು ಮತ್ತು ಶಾಸಕರು ಶಾಶ್ವತವಾಗಿ ಮನೆ ಸೇರಬೇಕಾಗುತ್ತದೆ. ಏಕೆಂದರೆ ಕೊಲೆ, ಕೊಲೆಯತ್ನ, ಅಪಹರಣ, ಡಕಾಯಿತಿ, ದರೋಡೆ, ಅತ್ಯಾಚಾರ ಸೇರಿದಂತೆ ಹಲವು ಗಂಭೀರ ಸ್ವರೂಪದ ಪ್ರಕರಣಗಳನ್ನು ಅನೇಕ ಸಂಸದರು ಮತ್ತು ಶಾಸಕರು ಎದುರಿಸುತ್ತಿದ್ದಾರೆ.
ಯಾವುದೇ ಒಬ್ಬ ಜನಪ್ರತಿನಿಧಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವುದು ಸಾಬೀತಾದರೆ ತಕ್ಷಣವೇ ಅವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಐತಿಹಾಸಿಕ ತೀರ್ಪು ನೀಡಿತ್ತು. ಆದರೆ ಕಳಂಕಿತ ಜನಪ್ರತಿನಿಧಿಗಳನ್ನು ರಕ್ಷಿಸುವುದಕ್ಕಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತರಲು ಮುಂದಾಗಿರುವುದ ಶೋಚನೀಯ.
ಸುಪ್ರೀಂ ತೀರ್ಪಿಗೆ ತಿದ್ದುಪಡಿ ಮಾಡಿರುವ ಕೇಂದ್ರ ಸರಕಾರವು ಜನಪ್ರತಿನಿಧಿ ಕಾಯ್ದೆಗೆ ಮಾರ್ಪಾಡು ಮಾಡಲು ಹೊರಟಿದೆ. ಒಂದು ವೇಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸುಗ್ರೀವಾಜ್ಞೆಗೆ ಸಹಿ ಹಾಕದೆ ಅದನ್ನು ವಾಪಸ್ ಕಳುಹಿಸಿದರೆ ಕೇಂದ್ರ ಸರ್ಕಾರ ವಿಧಿಯಿಲ್ಲದೆ ಚಾಚೂ ತಪ್ಪದಂತೆ ಸುಪ್ರೀಂಕೋರ್ಟ್ ತೀರ್ಪನ್ನು ಅನ್ವಯಿಸಿಕೊಂಡು ಜನಪ್ರತಿನಿಧಿ ಕಾಯ್ದೆ ಅನುಷ್ಠಾನ ಮಾಡಬೇಕಾಗುತ್ತದೆ. ಅದಕ್ಕೂ ಮುನ್ನ ಕಾಂಗ್ರೆಸ್ ಯುವರಾಜ ordinanceಅನ್ನು nonsense ಎಂದಿರುವುದು ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ. ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಯನ್ನು ವಾಪಸ್ ತೆಗೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ತಿಳಿದುಬಂದಿದೆ.
ಸದ್ಯಕ್ಕೆ 2009ರ ಲೋಕಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ಸಂಸದರ ಪೈಕಿ ಪ್ರತಿ 30 ಸಂಸದರಲ್ಲಿ ಒಬ್ಬ ಸಂಸದ ಕೊಲೆ ಮತ್ತು ಇತರೆ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. 23 ಸಂಸದರಲ್ಲಿ ಒಬ್ಬ ಸಂಸದ ಕೊಲೆ ಯತ್ನ ಆರೋಪದಲ್ಲಿ ಭಾಗಿಯಾಗಿದ್ದಾನೆ. 54 ಸಂಸದರಲ್ಲಿ ಒಬ್ಬ ಸಂಸದ ಅಪಹರಣ ಮತ್ತು ನಾಪತ್ತೆ ಪ್ರಕರಣಗಳಲ್ಲಿಯೂ, 54 ಸಂಸದರಲ್ಲಿ ಒಬ್ಬ ಸಂಸದ ಡಕಾಯಿತಿ, ದರೋಡೆ ಪ್ರಕರಣಗಳಲ್ಲಿ ಹಾಗೂ 54 ಸಂಸದರಲ್ಲಿ ಒಬ್ಬ ಸಂಸದ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಹಾಗಾಗಿ ಸರಕಾರವೇನಾದರೂ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಕಾಯ್ದೆ ಜಾರಿ ಮಾಡಿಬಿಟ್ಟರೆ ಶೇ. 15ಕ್ಕೂ ಹೆಚ್ಚು ಹಾಲಿ ಸಂಸದರು ಮತ್ತು ರಾಜ್ಯಸಭೆ ಸದಸ್ಯರು ಸದಸ್ಯತ್ವ ಕಳೆದು ಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ಲೋಕಸಭೆ ಚುನಾವಣೆ ಸನಿಹದಲ್ಲೇ ಇದ್ದು, ಮುಂದಿನ ಚುನಾವಣೆಯಲ್ಲಿ ಹುರಿಯಾಳುಗಳಾಗಿ ಕಣಕ್ಕಿಳಿಯುವವರು ಇಂತಹ ಆರೋಪಗಳಿಂದ ಮುಕ್ತರಾಗಿರಬೇಕಾಗುತ್ತದೆ. ಇದನ್ನು ಮನಗಂಡೇ, ಕಳಂಕಿತರನ್ನು ರಕ್ಷಿಸಲು ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಲು ಹಾಲಿ ಸರಕಾರ ಹವಣಿಸುತ್ತಿರುವುದು.












Click it and Unblock the Notifications