Bengaluru rains: ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯುವತಿ ಸಾವು: ಬಸವರಾಜ ಬೊಮ್ಮಾಯಿ
ಬೆಂಗಳೂರು, ಮೇ 22: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಸುರಿದ ಕೆಲವೇ ಗಂಟೆಗಳ ಮಳೆಗೆ ಯುವತಿಯೊಬ್ಬರು ಮೃತಪಟ್ಟಿರುವುದು ಬಹಳ ನೋವಿನ ಸಂಗತಿ ಆಗಿದೆ. ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದರೂ ಬಿಬಿಎಂಪಿಯವರು ಈ ವರ್ಷ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆಯಲು ಅವಕಾಶ ಕೊಟ್ಟಂತಾಗಿದೆ. ಘಟನೆ ನಡೆದ ಕೂಡಲೇ ಧಾವಿಸಿ ರಕ್ಷಣೆ ಮಾಡುವ ಕೆಲಸ ಬಿಬಿಎಂಪಿ ಸಿಬ್ಬಂದಿ ಮಾಡಲಿಲ್ಲ ಎಂದು ಬೊಮ್ಮಾಯಿ ಆಪಾದಿಸಿದರು.

ನಾವು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ತಂಡಗಳನ್ನು ರಚಿಸಿದ್ದೇವೆ. ಈ ತಂಡಗಳಿಗೆ ಚಾಲನೆ ಕೊಟ್ಟು ಕೆಲಸಕ್ಕೆ ಹಚ್ಚುವ ಕೆಲಸ ಆಗಬೇಕು. ಇನ್ನೂ ಐದು ದಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಇದೆ. ವ್ಯವಸ್ಥಿತವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ನಗರದಲ್ಲಿ ಎಲ್ಲೆಂದರಲ್ಲಿ ಸಣ್ಣ ರಸ್ತೆ, ಪ್ರಮುಖ ರಸ್ತೆಗಳಲ್ಲಿ ಮರಗಳು, ಮರದ ಕೊಂಬೆಗಳು ಬಿದ್ದಿವೆ. ಈ ಬಗ್ಗೆ ಕೂಡಲೇ ಕ್ರಮಹಿಸುವ ಕೆಲಸವಾಗಬೇಕು ಎಂದರು.
ಮಳೆ ಪರಿಹಾರ ಕ್ರಮಕ್ಕೆ ಆದ್ಯತೆ ವಹಿಸಿ
ರಸ್ತೆಗಳಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸ ಬಿಬಿಎಂಪಿಯಿಂದ ತ್ವರಿತಗಿಯಲ್ಲಿ ಆಗಿಲ್ಲ. ಮುಂದಿನ ಐದು ದಿನ ಹೀಗೇ ಬಿಟ್ಟರೆ ಬೆಂಗಳೂರಿನ ಜನಜೀವನ, ವಾಹನ ಸಂಚಾರ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಆಗಲಿದೆ. ಪರಿಹಾರ ಕ್ರಮಗಳನ್ನು ಆದ್ಯೆತೆಯಿಂದ ಮುಖ್ಯಮಂತ್ರಿಗಳು ಮಾಡಬೇಕಿದೆ.
ಬಿಬಿಎಂಪಿ ಅಧಿಕಾರಿಗಳು ಕೆಲಸ ಮಾಡುವವರು ಮಾಡುತ್ತಾರೆ, ಉಳಿದವರು ಹಾಗೆಯೇ ಇರುತ್ತಾರೆ. ಮಳೆಗಾಲ ಆರಂಭದ ಹಂತದಲ್ಲಿ ನಾವಿದ್ದೇವೆ. ಪ್ಲಾನ್ ಪ್ರಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಭಾನುವಾರ ಮಧ್ಯಾಹ್ನ ಸುರಿದ ಮಳೆಗೆ ನಗರದಲ್ಲಿ ಸಾಕಷ್ಟು ಆವಾಂತರಗಳು ಆಗಿವೆ. ಎರಡು ಪ್ರತ್ಯೇಕಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ತಗ್ಗು ಪ್ರದೇಶ ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಅಂಡರ್ಪಾಸ್ಗಳು, ಪ್ರಮುಖ ರಸ್ತೆಗಳು ಗಂಟೆಗಳ ಕಾಲ ಹೊಳೆಯಂತಾಗಿವೆ. ಕೆ. ಆರ್ ವೃತ್ತದ ಅಂಡರ್ಪಾಸ್ನಲ್ಲಿ ಕಾರಿನಲ್ಲಿ ಬಂದ ಯುವತಿ ಸಾವನ್ನಪ್ಪಿದ್ದಾರೆ. ಇತ್ತ ಬ್ಯಾಟರಾಯಪುರದಲ್ಲಿ ರಾಜುಕಾಲುವೆಯಲ್ಲಿ ಭಾನುವಾರ ಕೊಚ್ಚಿ ಹೋದ ವ್ಯಕ್ತಿಯ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.












Click it and Unblock the Notifications