Bengaluru Property: ಬೆಂಗಳೂರಿನ ಈ ಆಸ್ತಿದಾರರಿಗೆ ಬಿಗ್ ಡೆಡ್ಲೈನ್: ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ ಆಸ್ತಿ ಹರಾಜು
Bengaluru Property: ಬೆಂಗಳೂರಿನ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳು ಬಿಗ್ಡೈಡ್ ಲೈನ್ ನಿಗದಿ ಮಾಡಿವೆ. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರು ಇದೀಗ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಲಯ-1 ರಲ್ಲಿ 66 ಆಸ್ತಿಗಳಿಂದ 1,65,30717 ರೂ. ಹಾಗೂ ವಲಯ-2 ರಲ್ಲಿ 41 ಆಸ್ತಿಗಳಿಂದ 8,46,9037 ರೂಪಾಯಿ ಒಟ್ಟಾರೆಯಾಗಿ ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 107 ಆಸ್ತಿಗಳಿಂದ 2,49,99,754 ರೂ. ಗಳ ಕಂದಾಯ ಬಾಕಿ ಇರುವುದರಿಂದ, ಫೆಬ್ರವರಿ 21 ರಂದು ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಸ್ವತ್ತುಗಳಿಂದ ವಸೂಲಿಯಾಗುವ ಆಸ್ತಿ ತೆರಿಗೆಯನ್ನು ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಬಳಸಲಾಗುತ್ತದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2025 ಅನ್ವಯ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸ್ವತ್ತುಗಳ ಮಾಲೀಕರು ಪ್ರತಿ ಆರ್ಥಿಕ ಸಾಲಿನಲ್ಲಿ ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ. ಆಸ್ತಿ ತೆರಿಗೆ ಪಾವತಿಸದ ಪ್ರಕರಣಗಳಲ್ಲಿ, ಆಸ್ತಿ ತೆರಿಗೆ ನಿರ್ಧಾರ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು-2024ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.
ಸಂಬಂಧಿತ ಕಾಯ್ದೆ ಹಾಗೂ ನಿಯಮಗಳಂತೆ, ಆಸ್ತಿ ತೆರಿಗೆ ಸುಸ್ತಿದಾರರಿಗೆ ಕಾರಣ ಕೇಳುವ ನೋಟಿಸ್ ಹಾಗೂ ಬೇಡಿಕೆ ಪತ್ರಗಳನ್ನು ಜಾರಿಗೊಳಿಸಲಾಗಿದೆ. ಆಸ್ತಿ ಬಾಕಿ ಉಳಿಸಿಕೊಂಡಿರುವವ ವಿವರಗಳನ್ನು ಪಾಲಿಕೆಯ ಅಧಿಕೃತ ಜಾಲತಾಣ [https://bbmp.gov.in](https://bbmp.gov.in) ನಲ್ಲಿ ವೀಕ್ಷಿಸಬಹುದಾಗಿದೆ ಹಾಗೂ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ. ಸಾಕಷ್ಟು ಅವಕಾಶಗಳನ್ನು ನೀಡಿದ ಬಳಿಕವೂ ಬಾಕಿ ಉಳಿಸಿಕೊಂಡಿರುವ ಸ್ವತ್ತಿನ ಮಾಲೀಕರಿಗೆ ನಿಯಮಾನುಸಾರ ಮೊಬೈಲ್ ಮೆಸೇಜ್ಗಳ ಮೂಲಕ, ಖುದ್ದಾಗಿ ಹಾಗೂ ಸ್ವತ್ತಿನ ಸ್ಥಳದಲ್ಲಿಯೇ ಪಟ್ಟಿ ಅಂಟಿಸುವ ಮೂಲಕ ನೋಟಿಸ್ ಜಾರಿಗೊಳಿಸಲಾಗಿದೆ.
ಸಾಕಷ್ಟು ಅವಕಾಶಗಳಿದ್ದರೂ ಆಸ್ತಿ ತೆರಿಗೆ ಪಾವತಿಸದ ಸ್ವತ್ತುಗಳನ್ನು ಕಾಯ್ದೆ ಮತ್ತು ನಿಯಮಗಳ ಅನ್ವಯ ಹರಾಜು ಪ್ರಕ್ರಿಯೆಗೆ (Distress Sale) ಒಳಪಡಿಸಲು ತೀರ್ಮಾನಿಸಲಾಗಿದೆ. ಹರಾಜು ಮಾಡಲು ಉದ್ದೇಶಿಸಿರುವ ಸ್ವತ್ತುಗಳನ್ನು ಫೆಬ್ರವರಿ 21ರಂದು ಮಧ್ಯಾಹ್ನ 3ಗಂಟೆಗೆ ಬೆಂಗಳೂರು 560064, ಎನ್.ಇ.ಎಸ್. ಬಳಿ ಇರುವ ಯಲಹಂಕ ಮಿನಿ ವಿಧಾನಸೌಧದ 3ನೇ ಮಹಡಿಯ ಸಭಾಂಗಣದಲ್ಲಿ ವಲಯ-1 ಮತ್ತು ವಲಯ-2ರ ಜಂಟಿ ಆಯುಕ್ತರುಗಳ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಸಾರ್ವಜನಿಕರು/ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಹರಾಜು ಪ್ರಕ್ರಿಯೆಗೆ ಮುನ್ನ ಪಟ್ಟಿಯಲ್ಲಿನ ಸ್ವತ್ತಿನ ಆಸ್ತಿ ತೆರಿಗೆಯನ್ನು ಪಾವತಿಸಿದಲ್ಲಿ ಆ ಸ್ವತ್ತನ್ನು ಹರಾಜಿನಿಂದ ಕೈ ಬಿಡಲಾಗುತ್ತದೆ. ಅಲ್ಲದೇ ಸ್ವತ್ತಿನ ಮಾಲೀಕರು ಹರಾಜು ಪ್ರಕ್ರಿಯೆಗೆ ಮುನ್ನ ತಮ್ಮ ಆಕ್ಷೇಪಣೆಗಳನ್ನು ಆಯುಕ್ತರ ಕಚೇರಿಗೆ ಸಲ್ಲಿಸಲು ಅವಕಾಶವಿರುತ್ತದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.













Click it and Unblock the Notifications