ಬೆಂಗಳೂರು ಗಲೀಜು ಅಲ್ಲಿಗೆ ಹೋಗಬೇಡಿ, ಈ ಸಿಟಿಯೇ ಬೆಸ್ಟ್ ಎಂದ ಉದ್ಯೋಗಿ: ಪೋಸ್ಟ್ ವೈರಲ್!
ಬೆಂಗಳೂರು ಗಲೀಜು, ಯೋಜಿತ ನಗರವಲ್ಲ, ಕೆಟ್ಟ ರಸ್ತೆ ಹಾಗೂ ಅತೀ ಕೆಟ್ಟದಾಗಿರುವ ಟ್ರಾಫಿಕ್ ಜಾಮ್ ಸಮಸ್ಯೆ ಇಲ್ಲಿ ಇದೆ. ನಾನು ಉತ್ತರ ಭಾರತದ ನೋಯ್ಡಾದಿಂದ ಬೆಂಗಳೂರಿಗೆ ಕೆಲಸಕ್ಕೆ ಬಂದೆ. ಇಲ್ಲಿಗೆ ಬಂದು ತಪ್ಪು ಮಾಡಿದೆ ಎಂದು ಕಾರ್ಪೊರೇಟ್ ಉದ್ಯೋಗಿಯೊಬ್ಬರು ಪೋಸ್ಟ್ ಮಾಡಿದ್ದು. ಈ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಕೇವಲ 30,000 ಸಾವಿರ ರೂಪಾಯಿ ಜಾಸ್ತಿ ಸಿಗುತ್ತದೆ ಎಂದು ನಾನು ಬೆಂಗಳೂರಿಗೆ ಬಂದಿದ್ದೆ. ಆದರೆ ಇದೇ ನಾನು ಮಾಡಿದ ತಪ್ಪು ಎಂದು ಹೇಳಿಕೊಂಡಿದ್ದಾನೆ. ಇದೀಗ ಈ ಪೋಸ್ಟ್ ವೈರಲ್ ಆಗಿದ್ದು ಕನ್ನಡಿಗರು ಕೆಂಡವಾಗಿದ್ದಾರೆ.
ಉತ್ತರ ಭಾರತ vs ದಕ್ಷಿಣ ಭಾರತ ಚರ್ಚೆಗಳು ಈ ಹಿಂದೆಗಿಂತ ಈಗ ಭಾರೀ ಜೋರಾಗಿವೆ. ಅಲ್ಲದೇ ಬೆಂಗಳೂರಿನ ಬಗ್ಗೆಯೂ ಉತ್ತರ ಭಾರತೀಯರು ಕೆಟ್ಟದಾಗಿ ರಿಯಾಕ್ಟ್ ಮಾಡುವುದು ಹೆಚ್ಚಾಗಿದೆ. ಇದೀಗ ಇಂತಹದ್ದೇ ಒಂದು ಪೋಸ್ಟ್ "ರೆಡ್ಡಿಟ್ / Reddit "ನಲ್ಲಿ ಮಾಡಲಾಗಿದ್ದು ವೈರಲ್ ಆಗುತ್ತಿದೆ.

ಕೇವಲ 30 ಸಾವಿರ ಸಂಬಳ ಹೆಚ್ಚಾಗಿ ಸಿಗುತ್ತದೆ ಎಂದು ನಾನು ಉತ್ತರ ಪ್ರದೇಶದ ನೋಯ್ಡಾ (ದೆಹಲಿ - ಎನ್ಸಿಆರ್)ನಿಂದ ಬೆಂಗಳೂರಿಗೆ ಬಂದೆ. ಇದು ನಾನು ಮಾಡಿದ ತಪ್ಪು. ಈ ತಪ್ಪಿಗೆ ನನಗೆ ವಿಷಾದವಿದೆ ಎಂದು ಪೋಸ್ಟ್ ಮಾಡಲಾಗಿದೆ. ಬೆಂಗಳೂರಿನ ಮೂಲಸೌಕರ್ಯ, ಟ್ರಾಫಿಕ್ ಹಾಗೂ ಇಲ್ಲಿನ ಪರಿಸ್ಥಿತಿ ನಿಮಗೆ ದೊಡ್ಡ ನಿರಾಸೆಯನ್ನು ಸೃಷ್ಟಿಸುತ್ತದೆ ಎಂದು ಬರೆದುಕೊಳ್ಳಲಾಗಿದೆ.
ಬೆಂಗಳೂರು ಪೂರ್ವಯೋಜಿತ ನಗರವಲ್ಲ. ಇಲ್ಲಿ ಹಲವು ಸಮಸ್ಯೆಗಳಿವೆ. ಕೊಳಕು, ಕೆಟ್ಟ ರಸ್ತೆಗಳು ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ವಿಪರೀತವಾಗಿದೆ. ಅಲ್ಲದೇ ನೀರಿನ ಗುಣಮಟ್ಟ ಸರಿ ಇಲ್ಲ. ಸಾಂಸ್ಕೃತಿಕ ಭಿನ್ನತೆ ಇದೆ ಎಂದು ಹೇಳಲಾಗಿದೆ. ಸ್ನಾತಕೋತ್ತರ ಪದವಿ ಮುಗಿಸಿ ನೋಯ್ಡಾದಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ, ಉದ್ಯೋಗ ಆಯ್ಕೆಯನ್ನು ಎನ್ಸಿಆರ್ಗೆ ಸೀಮಿತಗೊಳಿಸಿರುವುದಾಗಿ ಹೇಳಿದ್ದು. ಮುಂದೆ ಬೆಂಗಳೂರಿನಲ್ಲಿ ಸಂಬಳ ಹೆಚ್ಚಳದ ಆಯ್ಕೆ ಸಿಕ್ಕಿದ್ದರಿಂದ ಇಲ್ಲಿಗೆ ಬಂದಿರುವುದಾಗಿ ಹೇಳಲಾಗಿದೆ.
ಬೆಂಗಳೂರಿಗೆ ಬಂದ ನಾಲ್ಕು ತಿಂಗಳ ನಂತರ ಇಲ್ಲಿಗೆ ಬಂದಿದ್ದು ಸರಿಯಾದ ಆಯ್ಕೆಯೇ ಎಂದು ಪ್ರಶ್ನೆ ಮಾಡಿಕೊಳ್ಳುವಂತೆ ಆಯಿತು. ಇದೀಗ ಬೆಂಗಳೂರಿಗೆ ಬಂದು ಈ ತಪ್ಪನ್ನು ಮಾಡಬೇಡಿ. ಟೈರ್ 1 ಸಿಟಿಗಳಲ್ಲಿ ಕೆಲಸ ಮಾಡುವುದಕ್ಕೆ ನೋಯ್ಡಾ ಬೆಸ್ಟ್ ಆಯ್ಕೆಯಾಗಿದೆ. ಇಲ್ಲಿ ವಾಯುಮಾಲಿನ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ ಎಂಬರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ಇದು ಭಾರೀ ಪರ - ವಿರೋಧಕ್ಕೆ ಕಾರಣವಾಗಿದೆ. ಬೆಂಗಳೂರಿಗಿಂತ ನೋಯ್ಡಾದಲ್ಲಿ ಹೆಚ್ಚು ಸುರಕ್ಷತಾ ಭಾವನೆ ಇದೆ ಎಂದು ಇದಕ್ಕೆ ವ್ಯಕ್ತಿಯೊಬ್ಬರು ರಿಯಾಕ್ಟ್ ಮಾಡಿದ್ದಾರೆ. ಇದಕ್ಕೆ ಕೆಲವರು ಇದನ್ನು ನೀವು ಬೆಂಗಳೂರಿನ ಥ್ರೆಡ್ನಲ್ಲಿ ಪೋಸ್ಟ್ ಮಾಡಿ ಎಂದು ಸವಾಲು ಹಾಕಿದ್ದಾರೆ.

ಇನ್ನೂ ಕೆಲವರು ಪುಣೆ ಹಾಗೂ ಬೆಂಗಳೂರು ಒಂದೇ ಪರಿಸ್ಥಿತಿಯಲ್ಲಿ ಇವೆ. ಇಲ್ಲಿಗೆ ಹೋದರೆ ನಾವು ಹೊರಗಿನವರಂತೆ ಕಾಣಲಾಗುತ್ತದೆ. ಭಾಷೆ ಸಮಸ್ಯೆ ಅಲ್ಲ. ಆದರೆ ಇಲ್ಲಿ ಗೂಂಡಾ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ಪೋಸ್ಟ್ ಮಾಡಲಾಗಿದೆ.
ಕನ್ನಡಿಗರ ಆಕ್ರೋಶ
ಕಾರ್ಪೋರೇಟ್ ಕಂಪನಿಯೊಂದರ ಉದ್ಯೋಗಿಯ ಈ ಪೋಸ್ಟ್ಗೆ ಕನ್ನಡಿಗರು ಕೆಂಡವಾಗಿದ್ದಾರೆ. "ಅವರ ಹುಟ್ಟಿದ ಊರಿನಲ್ಲಿ ಕುಡಿಯುವುದಕ್ಕೂ ನೀರು ಸಿಗುವುದಿಲ್ಲ. ಎಷ್ಟು ಉತ್ತರ ಭಾರತೀಯರು ನಮಗಿಂತ ಹೆಚ್ಚಾಗಿ ಇಲ್ಲಿ ಬಂದು ದುಡಿದು ಆಸ್ತಿಗಳನ್ನು ಸಂಪಾದನೆ ಮಾಡಿ ನಮ್ಮ ಭಾಷೆಯನ್ನು ಕಲಿಯದೆ ಬದುಕುತ್ತಿದ್ದಾರೆ. ಇವರಿಂದ ನಾವು ಕಲಿಯುವ ಅವಶ್ಯಕತೆ ಏನು ಇಲ್ಲ. ಆದರೆ ಒಂದು ಕನ್ನಡಿಗರು ಎಲ್ಲರೂ ಒಂದೇ ಎಂದು ತಿಳಿಸಬೇಕು ಯಾರಾದರೂ ಸರಿ ಬೇರೆ ಭಾಷೆಯಲ್ಲಿ ಮಾತನಾಡಿದರೆ ಮೊದಲು ನಮ್ಮ ಭಾಷೆಯಲ್ಲಿ ಮಾತನಾಡಲು ತಿಳಿಸಿ" ಅಂತ ಜನ ಕಮೆಂಟ್ ಮಾಡಿದ್ದಾರೆ.
ಇಲ್ಲಿಗೆ ಹೊರಗಿನವರು ಬಂದೇ ಗಲೀಜು ಮಾಡಿದ್ದಾರೆ. ನಮ್ಮ ಸಿಟಿ ಮೊದಲು ತುಂಬಾ ಚೆನ್ನಾಗಿತ್ತು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications