BREAKING: ಸೋಮವಾರ ಮಧ್ಯಾಹ್ನ ಕೆಲವೇ ನಿಮಿಷಗಳಲ್ಲಿ 30 ಮಿ.ಮೀ. ಮಳೆ ದಾಖಲು, ಮುನ್ಸೂಚನೆ?
ಬೆಂಗಳೂರು, ಆಗಸ್ಟ್ 19: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಜೋರಾಗಿಯೇ ಇದ್ದು, ಸೋಮವಾರ ಮಧ್ಯಾಹ್ನವೇ ನಗರದ ಒಂದಷ್ಟು ಭಾಗಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ದಾಖಲಾಗಿದೆ. ವಿಶ್ವನಾಥ್ ನಾಗೇನಹಳ್ಳಿಯಲ್ಲಿ ಕೆಲವೇ ನಿಮಿಷಗಳಲ್ಲಿ ಬರೋಬ್ಬರಿ 30 ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಗರದಲ್ಲಿ ಆಗಾಗ ಮಳೆ ಬಂದು ಹೋಗುತ್ತಿದೆ. ಆದರೆ ಇಂದು ಮಧ್ಯಾಹ್ನ ಸುರಿದ ಮಳೆ ಹೆಚ್ಚು ತೀವ್ರತೆಯಿಂದ ಕೂಡಿದೆ. ಅಂದರೆ ಏಕಾಎಕಿ ವಿದ್ಯಾರಣ್ಯಪುರ, ಬಿಇಎಲ್ ರಸ್ತೆ, ಪೀಣ್ಯ, ಜಾಲಹಳ್ಳಿ, ದಾಸರಹಳ್ಳಿ, ಯಶವಂತಪುರ, ನಾಗಸಂದ್ರ, ಮಾದಾವರ, ಹೆಬ್ಬಾಳ, ಕೆ.ಆರ್ ಪುರಂ ಸೇರಿದಂತೆ ಅನೇಕ ಕಡೆಗಳಲ್ಲಿ ಮುಂಗಾರು ಅಬ್ಬರ ಶುರುವಾಗಿದೆ.

ನಗರಾದ್ಯಂತ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಮಧ್ಯಾಹ್ನ 03ಗಂಟೆ ಹೊತ್ತಿಗೆ ನೋಡ ನೋಡುತ್ತಿದ್ದಂತೆ ಭೀಕರ ಮಳೆ ಅಬ್ಬರಿಸಲು ಶುರುವಿಟ್ಟುಕೊಂಡಿತು. ಈ ವ್ಯಾಪಕ ಮಳೆಯ ಕುರಿತು ಒಂದಷ್ಟು ಫೋಟೋ, ವಿಡಿಯೋಗಳು ಆನ್ಲೈನ್ನಲ್ಲಿ ಹರಿದಾಡುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುತ್ತಿರುವುದು, ವಾಟರ್ಲಾಗಿಂಗ್ ಸಮಸ್ಯೆ ಆಗಿ ವಾಹನ ಸವಾರರಿಗೆ ತೊಂದರೆ ಉಂಟಾಗುವ ಬಗ್ಗೆ ನಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ಎಲ್ಲೆಲ್ಲಿ ಜೋರು ಮಳೆ ಆಯಿತು?
ನಗರದಲ್ಲಿ ಕೊಡುಗಡೆಹಳ್ಳಿಯಲ್ಲಿ 28 ಮಿಲಿ ಮೀಟರ್, ಬಾನಸವಾಡಿ 18 ಮಿಮೀ, ಕುಶಾಲನಗರ 17 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ 12.50 ಮಿಲಿ ಮೀಟರ್ ಮಳೆ ದಾಖಲಾಗಿದೆ. ಈ ಭಾಗದಲ್ಲಿ ಅತ್ಯಧಿಕ ಮಳೆ ಆಗಿದ್ದು, ಉಳಿದ ಕಡೆಗಳಲ್ಲಿ ಸಾಧಾರಣವಾಗಿ, ಜಿಟಿ ಜಿಟಿ ಮಳೆ ಆಯಿತು.
ಈ ಮಳೆಯಿಂದ ಹೆಬ್ಬಾಳ, ಕೆ.ಆರ್.ಮಾರುಕಟ್ಟೆ, ರಾಜಾಜಿನಗರ ಪ್ರಮುಖ ರಸ್ತೆ, ಜಂಕ್ಷನ್ಗಳಲ್ಲಿ, ಕೆಲವು ರಸ್ತೆ ಅಂಡರ್ಪಾಸ್ಗಳಲ್ಲಿ ಒಳಚರಂಡಿ ನೀರು ಮಳೆ ನೀರಿನ ಜೊತೆಗೆ ಉಕ್ಕಿ ಹರಿಯಿತು. ರಸ್ತೆಗಳ ಮೇಲೆಲ್ಲ ನೀರು ನಿಂತ ಪರಿಣಾಮ ಬಾಣಸವಾಡಿ, ವಿದ್ಯಾರಣ್ಯಪುರ, ಬಿಇಎಲ್ ರಸ್ತೆ, ಕೊಡುಗೇಹಳ್ಳಿ, ಹೊರ ವರ್ತುಲ ರಸ್ತೆ ಕೆಲವು ಕಡೆಗಳಲ್ಲಿ ಸಂಚಾರ ದಟ್ಟಣೆ ಕಂಡು ಬಂತು. ವ್ಯಾಪಾರಿಗಳು ಸಂಜೆ ವ್ಯಾಪಾರ ಇಲ್ಲದೇ ಕಿರಿ ಕಿರಿ ಅನುಭವಿಸಬೇಕಾಯಿತು.
#bengalururains pic.twitter.com/FmF6FrGLWp
— mystore gmail (@gmystore13) August 19, 2024
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಎರಡು ಮೂರು ದಿನಗಳಿಂದ ಚಳಿ ವಾತಾವರಣ ಕಂಡು ಬಂದಿದೆ. ನಿತ್ಯ ನಂತರ ಮಳೆಯ ಆಗಮನವಾಗುತ್ತಿದೆ. ಇಂದು ತಡರಾತ್ರಿವರೆಗೂ ಮಳೆ ಮುಂದುವರಿಯಲಿದೆ. ಮುಂದಿನ ಆಗಸ್ಟ್ 25ರವರೆಗೆ ಅತ್ಯಧಿಕ ಮಳೆ ಆಗಲಿದೆ. ನಿತ್ಯ ಮಬ್ಬು ವಾತಾವರಣ, ತೇವಭರಿತ ಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ರಸ್ತೆ ಮೇಲೆ ಎರಡು ಅಡಿ ಉಕ್ಕಿ ಹರಿದ ಕೊಳಚೆ ನೀರು
ನಗರದಲ್ಲಿ ಸುರಿದ ಮಳೆಗೆ ವೀರಣ್ಣಪಾಳ್ಯ-ಹೆಬ್ಬಾಳ ನಡುವಿನ ಸರ್ವೀಸ್ ರಸ್ತೆಯಲ್ಲಿ 2 ಅಡಿ ಚರಂಡಿ ನೀರು ರಸ್ತೆ ಮೇಲೆಲ್ಲ ಕಡೆ ಹರಿಯುತ್ತಿದೆ. ಚರಂಡಿ ಒಳಗಿನ ಪ್ಲಾಸ್ಟಿಕ್ ಮುಂತಾದ ಕಸ, ವಸ್ತುಗಳು ನೀರಿನೊಟ್ಟಿಗೆ ರಸ್ತೆ ಮೇಲೆ ತೇಲುತ್ತಿರುವೆ. ಅನಿವಾರ್ಯವಾಗಿ ಸವಾರರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರು. ಸಂಜೆ ಪೀಕ್ ಹವರ್ ಆಗಿದ್ದರಿಂದ ಹೆಚ್ಚು ಜನ ಕಂಡು ಬಂದಿದ್ದು, ನಿಧಾನಗತಿಯ ಸಂಚಾರ ಕಂಡು ಬಂತು.












Click it and Unblock the Notifications