Bengaluru: ಶಂಕಿತ ಉಗ್ರನ ಮನೆಯಲ್ಲಿ 4 ಹ್ಯಾಂಡ್ ಗ್ರೆನೇಡ್ ಪತ್ತೆ- ಸ್ಫೋಟಕ ಮಾಹಿತಿ ಹಂಚಿಕೊಂಡ ಸಿಸಿಬಿ
ಬೆಂಗಳೂರು, ಜುಲೈ 20: ಬೆಂಗಳೂರಿನಲ್ಲಿ ಬಂಧಿತನಾಗಿರುವ ಶಂಕಿತ ಉಗ್ರನೊಬ್ಬನ ಮನೆಯಲ್ಲಿ ನಾಲ್ಕು ಹ್ಯಾಂಡ್ ಗ್ರೆನೇಡ್ಗಳು ಪತ್ತೆಯಾಗಿರುವ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ. ಉಗ್ರನ ಮನೆಯಲ್ಲಿ ನಾಲ್ಕು ಹ್ಯಾಂಡ್ ಗ್ರೆನೇಡ್ಗಳನ್ನು ಕೇಂದ್ರ ಅಪರಾಧ ವಿಭಾಗದ ಶೋಧಕರು ಪತ್ತೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಜಾಹಿದ್ ತಬ್ರೇಜ್ (25) ತನ್ನ ಕೊಡಿಗೇಹಳ್ಳಿಯ ನಿವಾಸದಲ್ಲಿ ಈ ಗ್ರೆನೇಡ್ಗಳನ್ನು ಇಟ್ಟುಕೊಂಡಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಡಾ.ಶರಣಪ್ಪ ಎಸ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ತಲೆಮರೆಸಿಕೊಂಡಿರುವ ಮತ್ತು ವಿದೇಶದಲ್ಲಿ ನೆಲೆಸಿರುವ ಜುನೆದ್ನಿಂದ ಈ ಗ್ರೇನೆಡ್ಗಳನ್ನು ಜಾಹಿದ್ ತಬ್ರೇಜ್ ಪಡೆದುಕೊಂಡಿದ್ದನೆಂದು ತಿಳಿದುಬಂದಿದೆ. ಆರೋಪಿಯು ತನ್ನ ಮನೆಯಲ್ಲಿನ ಮರಳಿನ ಚೀಲದಲ್ಲಿ ಈ ಗ್ರೆನೇಡ್ಗಳನ್ನು ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ಗ್ರೆನೇಡ್ಗಳು ಜೀವಂತವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳವಾರ ಬಂಧಿಸಲಾಗಿರುವ ಐವರು ಭಯೋತ್ಪಾದಕ ಶಂಕಿತರಲ್ಲಿ ಜಾಹಿದ್ ಸೇರಿದ್ದಾರೆ. 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಲಷ್ಕರ್-ಎ-ತೊಯ್ಬಾ ಕಾರ್ಯಕರ್ತ ಟಿ ನಾಸಿರ್ ಜತೆ ಇವರೆಲ್ಲರೂ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
ಇವರಿಂದ ಏಳು ಪಿಸ್ತೂಲ್ಗಳು, 45 ಲೈವ್ ಕಾರ್ಟ್ರಿಡ್ಜ್ಗಳು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿಬಿ ತಂಡಕ್ಕೆ ಸಿಕ್ಕಿಬಿದ್ದಾಗ ಅವರು ದೊಡ್ಡ ಸಂಚು ರೂಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಶಂಕಿತರನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಸಿಸಿಬಿ ಪೊಲೀಸರು ಈ ಉಗ್ರರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಸಿಸಿಬಿ ವಿಭಾಗವು ಸೈಯದ್ ಸುಹೇಲ್ ಖಾನ್, ಮೊಹಮ್ಮದ್ ಫೈಝಲ್ ರಬ್ಬಾನಿ, ಮೊಹಮ್ಮದ್ ಉಮರ್, ಮುದ್ದಸ್ಸಿರ್ ಪಾಷಾ ಮತ್ತು ಜಾಹಿದ್ ತಬ್ರೇಜ್ ಅವರನ್ನು ಬುಧವಾರ ಬಂಧಿಸಿದೆ.
ಮನೆ ಮಾಲೀಕರು ಹೇಳಿದ್ದೇನು?
ಆರ್ ಟಿ ನಗರಕ್ಕೆ ಹೊಂದಿಕೊಂಡಿರುವ ಕನಕನಗರದ ಬಹುಮಹಡಿ ಕಟ್ಟಡದ ಎರಡನೇ ಮಹಡಿಯಲ್ಲಿನ ವಿಲಕ್ಷಣವಾದ ಪುಟ್ಟ ಮನೆಯಿಂದ ಐವರು ಭಯೋತ್ಪಾದಕ ಶಂಕಿತರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕುಟುಂಬ ಆರ್ಥಿಕವಾಗಿ ಸ್ಥಿರವಾಗಿಲ್ಲ ಎಂಬ ಕಾರಣಕ್ಕೆ ಬಂಧಿತ ಉಗ್ರರಿಗೆ ಮನೆ ಬಾಡಿಗೆ ಕೊಡಲು ಮಾಲೀಕರಾದ ಪದ್ಮಾವತಿ ಒಪ್ಪಿಕೊಂಡಿದ್ದಾರೆ. 5000 ರೂಪಾಯಿ ಮುಂಗಡ ಹಣವನ್ನು ಶಂಕಿತರು ನೀಡಬೇಕಿತ್ತು. ಆದರೆ, ಅವರು ಕೇವಲ 5,000 ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿದ್ದಾರೆ ಎಂದು ಮಾಲೀಕರು ಹೇಳಿದ್ದಾರೆ.
'ಅವರು ಕೇವಲ 5,000 ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿದ್ದಾರೆ. ಮಗು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸಾ ವೆಚ್ಚ ಹೆಚ್ಚಿರುವ ಕಾರಣ ಉಳಿದ ಮುಂಗಡ 45,000 ರೂ. ಪಾವತಿಸಲು ಸ್ವಲ್ಪ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಆದರೆ, ಮೊದಲ ತಿಂಗಳ ಬಾಡಿಗೆ ರೂ 6,000 ಪಾವತಿಸಲು ಅವರಿಗೆ ಸಾಧ್ಯವಾಗದಿದ್ದಾಗ, ನಾನು ಅವರನ್ನು ಖಾಲಿ ಮಾಡಲು ಹೇಳಿದೆ' ಎಂದು ಮನೆ ಮಾಲೀಕರು ಹೇಳಿದ್ದಾರೆ.
ಇತರ ಅನೇಕ ನೆರೆಹೊರೆಯವರು ಈ ಪ್ರದೇಶದಲ್ಲಿ ಸುಹೇಲ್ನನ್ನು ಅಷ್ಟೇನೂ ನೋಡಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications