ಬೆಂಗಳೂರು ದಕ್ಷಿಣದಲ್ಲಿ ಜಯ ದಾಖಲಿಸಿದ ತೇಜಸ್ವಿ ಸೂರ್ಯ
ಬೆಂಗಳೂರು, ಮೇ 23 : ಕರ್ನಾಟಕದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರವೂ ಒಂದಾಗಿತ್ತು. ಬಿಜೆಪಿಯ ತೇಜಸ್ವಿ ಸೂರ್ಯ ಅವರು 3,31,192 ಮತಗಳ ಭಾರಿ ಅಂತರದಿಂದ ಜಯಗಳಿಸಿದರು.
ಜಯನಗರದ ಎಸ್.ಎಸ್.ಎಂ.ಆರ್.ವಿ ಕಾಲೇಜಿನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಮತ ಎಣಿಕೆ ಕಾರ್ಯ ಗುರುವಾರ ನಡೆಯಿತು. ತೇಜಸ್ವಿಸೂರ್ಯ ಅವರು ಬಿ.ಕೆ.ಹರಿಪ್ರಸಾದ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು.

ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. 28 ವರ್ಷದ ಯುವ ವಕೀಲರಿಗೆ ಟಿಕೆಟ್ ನೀಡಿ, ಪಕ್ಷ ಚುನಾವಣಾ ಕಣಕ್ಕಿಳಿಸಿತ್ತು. ಪಕ್ಷದ ನಿರೀಕ್ಷೆ ಹುಸಿಗೊಳಿಸದೇ ಅವರು ಜಯಗಳಿಸಿದ್ದಾರೆ.
ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ನ ಪ್ರಭಾವಿ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು 3,31,192 ಮತಗಳ ಅಂತರದಿಂದ ಸೋಲಿಸುವ ಮೂಲಕ ಸಂಸತ್ ಪ್ರವೇಶ ಮಾಡಿದರು. ಸ್ಪರ್ಧೆ ಮಾಡಿದ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದರು.
1996 ರಿಂದ 2014ರ ತನಕ ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿತ್ತು. ದಿ.ಅನಂತ್ ಕುಮಾರ್ ಅವರು ಕ್ಷೇತ್ರದಿಂದ ಆರಿಸಿ ಬರುತ್ತಿದ್ದರು. ಅವರ ನಿಧನದ ಬಳಿಕವೂ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ.
ಪಡೆದ ಮತಗಳು
* ತೇಜಸ್ವಿ ಸೂರ್ಯ : 7,39,229 ಮತ
* ಬಿ.ಕೆ.ಹರಿಪ್ರಸಾದ್ : 408037 ಮತಗಳು












Click it and Unblock the Notifications