ಬನವಾಸಿ ಬಳಗದ ಅರಿಮೆ ಕನ್ನಡ ವಿಜ್ಞಾನ ಉತ್ಸವ ಯಶಸ್ಸು
ಬೆಂಗಳೂರು,ಫೆಬ್ರವರಿ 2: ಬನವಾಸಿ ಬಳಗದ ಅರಿಮೆ ಕನ್ನಡ ವಿಜ್ಞಾನ ಉತ್ಸವ ಯಶಸ್ಸು ಕಂಡಿದೆ.
ಏಳು ಶಾಲೆಗಳಿಂದ ಬಂದಿದ್ದ ಮಕ್ಕಳು ಅರಿವಿನ ಅಂಗಳದಲ್ಲಿ ಆಡಿ ನಲಿದು ತಮ್ಮಲ್ಲಿದ್ದ ಕುತೂಹಲವನ್ನು ಹೆಚ್ಚಿಸಿಕೊಳ್ಳಲು ಈ ಕಾರ್ಯಕ್ರಮ ಸಹಾಯ ಮಾಡಿತು.
ವಿಜ್ಞಾನ ಉತ್ಸವ ತಂಡದ ಕಿರಣ್ ಆನೆ ಟೂತ್ ಪೇಸ್ಟ್, ಕೆಮಿಕಲ್ ಊಸರವಳ್ಳಿ, ಬೆಳಕು ಮತ್ತು ಬಣ್ಣದ ಆಟದ ಮೂಲಕ ಫಿಸಿಕ್ಸ್ ಮತ್ತು ಕೆಮಿಸ್ಟ್ರಿಯ ಪ್ರಯೋಗಗಳನ್ನು ಮಾಡಿ ತೋರಿಸಿದರು. ಅವರು ಮಕ್ಕಳನ್ನು ಮೋಡಿ ಮಾಡಿದಂತೆ ಈ ಕಾರ್ಯಕ್ರಮ ನಡೆಸಿಕೊಟ್ಟರು.
ಆನಂತರ ಎರಡು ತಂಡದಲ್ಲಿ ರಾಮನ್ ಮ್ಯೂಸಿಯಂನೊಳಗೆ ಸುತ್ತು ಹಾಕಿದ ಮಕ್ಕಳು ನೊಬೆಲ್ ಪ್ರಶಸ್ತಿ ವಿಜೇತ ಸೈಂಟಿಸ್ಟ್ ಸಿ.ವಿ.ರಾಮನ್ ಅವರು ಫಿಸಿಕ್ಸ್ ಪ್ರಪಂಚಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಕನ್ನಡದಲ್ಲೇ ತಿಳಿವಳಿಕೆ ಪಡೆದರು.

ಆನಂತರ ಮತ್ತೆ ಜೀವಶಾಸ್ತ್ರದ ಕುರಿತ ಪ್ರಯೋಗಗಳಲ್ಲಿ ಹಿಟ್ಟು ಹುದುಗು ಬರುವ ಪ್ರಕ್ರಿಯೆಯನ್ನು ಪ್ರಯೋಗ ಸಮೇತ ತೋರಿಸಿಕೊಟ್ಟ ವಿಜ್ನಾನಿ ಸುಷ್ಮಾ ಪ್ರಭಾಕರ ಅವರು ಮಕ್ಕಳನ್ನಷ್ಟೇ ಅಲ್ಲ ಶಾಲೆಗಳಿಂದ ಬಂದಿದ್ದ ಶಿಕ್ಷಕರು ತಲೆದೂಗುವಂತೆ ಮಾಡಿದರು.
ಕೊನೆಯಲ್ಲಿ ತಂತ್ರಜ್ಞಾನ ವಿಷಯದ ಸುತ್ತ ಮಾತನಾಡಿದ ಪವಮಾನ್ ಪ್ರಸಾದ್ ಅವರು ಕನ್ನಡದಲ್ಲೇ ಸಾಫ್ಟವೇರ್ ಅಂದರೇನು, ಅದು ಹೇಗೆ ಕೆಲಸ ಮಾಡುತ್ತೆ, ಅದರತ್ತ ಕೆಲಸ ಮಾಡಲು ಬೇಕಿರುವ ಯೋಚನೆಯ ಕ್ರಮವೇನು ಅನ್ನುವ ಬಗ್ಗೆ ಮಕ್ಕಳ ಮನಸ್ಸಿಗೆ ನಾಟುವಂತೆ ವಿವರಿಸಿದರು.
ಸಾಫ್ಟವೇರ್ ಅಂದರೆ ಅದೇನೋ ಕನ್ನಡದಲ್ಲಿ ವಿವರಿಸಲಾಗದ್ದು ಅನ್ನುವ ಅನಿಸಿಕೆ ಹಲವರಲ್ಲಿ ಇರುವಾಗ ಮನಸ್ಸು ಮಾಡಿದರೆ ಕನ್ನಡದಲ್ಲೂ ಇದನ್ನೆಲ್ಲ ಸಾಧ್ಯವಾಗಿಸುವುದು ಯಾವ ದೊಡ್ಡ ಕೆಲಸವೂ ಅಲ್ಲ ಅನ್ನುವಂತೆ ಅದನ್ನು ಮನವರಿಕೆ ಮಾಡಿಕೊಟ್ಟರು.

ಪ್ರಶಾಂತ್, ಸುಷ್ಮಾ, ಪವಮಾನ್, ಅಮರ್ ಹೊಳೆಗದ್ದೆ ಇವರೆಲ್ಲ ಕನ್ನಡಕ್ಕೆ ದಕ್ಕಿರುವ ಆಸ್ತಿಯೆಂದೇ ನಾನು ಲೆಕ್ಕಿಸುವೆ. ಅವರು ಒಂದು ವಿಷಯವನ್ನು ಕನ್ನಡದಲ್ಲಿ ವಿವರಿಸುವ ರೀತಿ ಕಂಡಾಗಲೆಲ್ಲ ನನಗೆ ಒಂದು ಹೊಸ ಭರವಸೆ ಕಾಣಿಸುತ್ತದೆ.
ಮಕ್ಕಳು ಊಟ ಮಾಡಿದ ಮೇಲೆ, ಈ ನಾಲ್ಕು ವಿಷಯಗಳಲ್ಲಿ ಈಗಾಗಲೇ ಕಲಿತ ವಿಷಯಗಳ ಮೇಲೆಯೇ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜಯನಗರದ ವಿಜಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಮೊದಲ ಬಹುಮಾನವನ್ನೂ, ಜಯನಗರದ ಎಂ.ಇ.ಎಸ್ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಎರಡನೆಯ ಬಹುಮಾನವನ್ನು ಪಡೆದರು. ಕಾರ್ಮೆಲ್, ಅಂಬಿಕಾ, ಮಹಿಳಾಮಂಡಳಿ, ಸ್ಟೆಲ್ಲಾ ಮೇರಿಸ್, ಸಂತ ಜೇಮ್ಸ್ ಶಾಲೆಗಳು ಪಾಲ್ಗೊಂಡಿದ್ದ ಉಳಿದ ಶಾಲೆಗಳು.
ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಟ್ರಸ್ಟಿನ ಶುಭಾಂಕರ ಬಹಳ ಆಸಕ್ತಿಯಿಂದ ಮಕ್ಕಳಿಗಾಗಿ ಎಲ್ಲ ಏರ್ಪಾಡು ಮಾಡಿದ್ದರಲ್ಲದೇ ಒಳ್ಳೆಯ ಊಟದ ಏರ್ಪಾಡನ್ನು ಮಾಡಿದ್ದರು. ಚಿತ್ರ ಬರೆಯುವ ಕಲಾವಿದರಾದ ಅವರು ತಾವೇ ಬಿಡಿಸಿದ ಮೂವರು ವಿಜ್ನಾನಿಗಳ ಚಿತ್ರವನ್ನು ಎಲ್ಲ ಶಾಲೆಗಳಿಗೂ ನೆನಪಿನ ಕಾಣಿಕೆಯಾಗಿ ನೀಡಿದರು.
ಬೆಂಗಳೂರಿನ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳನ್ನು ಉದ್ದೇಶಿಸಿ ಇಂತಹದೊಂದು ಕಾರ್ಯಕ್ರಮ ಇತ್ತೀಚಿನ ವರ್ಷಗಳಲ್ಲೇ ನಡೆದಿರಲಿಲ್ಲ, ಮಕ್ಕಳು ನಿಜಕ್ಕೂ ಬಹಳ ನಲಿದರು ಎಂದು ಎಲ್ಲ ಶಾಲೆಗಳ ಶಿಕ್ಷಕರು ಹೇಳಿದ್ದು ನಮ್ಮ ಪ್ರಯತ್ನಕ್ಕೆ ಒಂದು ಸಾರ್ಥಕತೆ ಕೊಟ್ಟಿತು.












Click it and Unblock the Notifications