ಎಸಿಬಿ ರದ್ದುಗೊಳಿಸಲು ಆಗ್ರಹಿಸಿ, ಎಎಪಿ ಕೇಶಮುಂಡನ ಪ್ರತಿಭಟನೆ
ಬೆಂಗಳೂರು, ಮಾರ್ಚ್ 29: ಲೋಕಾಯುಕ್ತ ಸಂಸ್ಥೆಯನ್ನು ಸಶಕ್ತಗೊಳಿಸುತ್ತೇವೆ ಮತ್ತು ಮತ್ತಷ್ಟು ಸ್ವಾಯತ್ತತೆ ಮತ್ತು ಅಧಿಕಾರಗಳನ್ನು ನೀಡುತ್ತೇವೆ ಎಂದು ಕೊಟ್ಟಿದ್ದ ಆಶ್ವಾಸನೆಗೆ ವ್ಯತಿರಿಕ್ತವಾಗಿ ಲೋಕಾಯುಕ್ತ ಸಂಸ್ಥೆಯನ್ನೇ ನಾಶ ಮಾಡಿ ಜನದ್ರೋಹ ಎಸಗಿದ್ದಾರೆ.
ಕಳೆದ ಸರಿಸುಮಾರು ಮೂರು ವರ್ಷದಿಂದ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ, "ಭ್ರಷ್ಟಾಚಾರ ರಹಿತ ಆಡಳಿತ" ನೀಡುತ್ತೇವೆ ಎಂದು 2013ರ ಚುನಾವಣಾ ಸಮಯದಲ್ಲಿ ನೀಡಿದ್ದ ಆಶ್ವಾಸನೆಗೆ ಸಂಪೂರ್ಣವಾಗಿ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
ಲೋಕಾಯುಕ್ತ ಸಂಸ್ಥೆಯನ್ನು ಸಶಕ್ತಗೊಳಿಸುತ್ತೇವೆ ಮತ್ತು ಮತ್ತಷ್ಟು ಸ್ವಾಯತ್ತತೆ ಮತ್ತು ಅಧಿಕಾರಗಳನ್ನು ನೀಡುತ್ತೇವೆ ಎಂದು ಕೊಟ್ಟಿದ್ದ ಆಶ್ವಾಸನೆಗೆ ವ್ಯತಿರಿಕ್ತವಾಗಿ ಲೋಕಾಯುಕ್ತ ಸಂಸ್ಥೆಯನ್ನೇ ನಾಶ ಮಾಡಿ ಜನದ್ರೋಹ ಎಸಗಿದ್ದಾರೆ.

ಮುಖ್ಯ ಲೋಕಾಯುಕ್ತ ಇಲ್ಲದ ಈ ಸಂದರ್ಭದಲ್ಲಿ ಈಗ "ಭ್ರಷ್ಟಾಚಾರ ನಿಗ್ರಹ ದಳ"ವನ್ನು ಸ್ಥಾಪಿಸಿ,ಲೋಕಾಯುಕ್ತದಲ್ಲಿಇಡೀ ಪೊಲೀಸ್ ಅಂಗವನ್ನೇ ನಿಷ್ಕ್ರಿಯ ಮಾಡಿಬಿಟ್ಟಿದ್ದಾರೆ. ಇನ್ನು ಉಳಿದಿರುವುದು ಕೇವಲ ಅಂತಿಮ ಸಂಸ್ಕಾರ ಮಾತ್ರ; ಸದನದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಹಿಂಪಡೆಯುವ ಕಾಯ್ದೆ ತಿದ್ದುಪಡಿ ಮಾತ್ರ.
ಕಳೆದ ಎರಡು ವಾರಗಳಿಂದ ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕ ಹಲವಾರು ಹೋರಾಟಗಳನ್ನು ಮಾಡುತ್ತ ಬಂದಿದೆ. 23-03-2016 ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್,ಎಸ್,ದೊರೆಸ್ವಾಮಿ, ಮಾಜಿ ಲೋಕಾಯುಕ್ತ ಜಸ್ಟೀಸ್ ಸಂತೋಷ್ ಹೆಗ್ಡೆ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್, ನಿವೃತ್ತ ನ್ಯಾಯಮೂರ್ತಿ ಎಂ,ಎಫ಼್. ಸಲ್ಡಾನ, ನಿವೃತ್ತ ಐಎಎಸ್/ಐಪಿಎಸ್ ಅಧಿಕಾರಿಗಳಾದ ವಿ.ಬಾಲಸುಬ್ರಮಣ್ಯನ್, ಶ್ರೀಕುಮಾರ್, ಟಿ ರಘುನಂದನ್, ಪತ್ರಕರ್ತ ರವೀಂದ್ರ ಭಟ್, ರಾಜಕಾರಣಿಗಳಾದ ಎ.ಟಿ. ರಾಮಸ್ವಾಮಿ, ಎಂ,ಪಿ.ನಾಡಗೌಡ, ಅಶ್ವಿನ್ ಮಹೇಶ್ ಮುಂತಾದವರನ್ನೊಳಗೊಂಡ ಚಿಂತನಸಭೆ ನಡೆಸಿ, ಸರ್ಕಾರದ ನಡೆಯ ವಿರುದ್ಧ ಜನರ ಗಮನ ಸೆಳೆಯಲಾಯಿತು.
26-03-2016 ರಂದು ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಂಡು ಹತ್ತಾರು ಜಿಲ್ಲಾಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಬೆಂಗಳೂರಿನಲ್ಲಿ ಆನಂದರಾವ್ ವೃತ್ತದಲ್ಲಿಯ ಗಾಂಧಿ ಪ್ರತಿಮೆ ಬಳಿ ಹತ್ತಾರು ಸಂಘಟನೆಗಳ ಜೊತೆಗೂಡಿ ಧರಣಿ ಸಹ ಮಾಡಿ, ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲು ಹೋಗುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರನ್ನು ಪೊಲೀಸರು ತಡೆದು ಬಂಧಿಸಲೂ ಮುಂದಾಗಿದ್ದರು.
"ಕರ್ನಾಟಕದ ಮಹಾಮನೆಯಲ್ಲಿ ಸೂತಕ" ಇರುವ ಕಾರಣದಿಂದಾಗಿ ಬುಧವಾರ(ಮಾರ್ಚ್ 30) ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಗಾಂಧಿ ಪ್ರತಿಮೆಯ ಬಳಿ "ತಲೆ ಬೋಳಿಸಿಕೊಂಡು", ಶೋಕಾಚರಣೆ ಮಾಡುತ್ತ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭವಾಗುತ್ತಿದೆ. ಲೋಕಾಯುಕ್ತವನ್ನು ನಾಶಮಾಡಿ ತಮ್ಮ ಮನೆಯ ಬೊಕ್ಕಸ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಮತ್ತು ಮಾಡಿದ ಅಕ್ರಮಗಳಿಗೆ ಶಿಕ್ಷೆಯಾಗದಂತೆ ತಪ್ಪಿಸಿಕೊಳ್ಳುತ್ತಿರುವ ರಾಜಕಾರಣಿಗಳ ಮನೆಗಳಿಗೆ ತಲೆಬೋಳಿಸಿಕೊಂಡಾಗ ಸಿಗುವ ಕೂದಲನ್ನು ಕೊರಿಯರ್ ಮಾಡಲಾಗುತ್ತದೆ.












Click it and Unblock the Notifications