ನಿರ್ಬಂಧ ಮೀರಿ ಖಾಸಗಿಯವರ ಜತೆ ಸರ್ಕಾರಿ ಸಂಸ್ಥೆ ಪೈಪೋಟಿ: ಬೊಮ್ಮಾಯಿ
ಬೆಂಗಳೂರು, ಜನವರಿ 05: ಒಂದು ಸರ್ಕಾರಿ ಸಂಸ್ಥೆ ವಾಣಿಜ್ಯೋದ್ಯಮ ವ್ಯವಹಾರ ಮಾಡುವುದು ದೊಡ್ಡ ಸವಾಲಿನ ಕೆಲಸ. ಸರ್ಕಾರಿ ಸಂಸ್ಥೆಗೆ ಎಷ್ಟೇ ನಿರ್ಬಂಧ ಇದ್ದರೂ ಅದನ್ನೆಲ್ಲಾ ಮೀರಿ ಖಾಸಗಿಯವರೊಂದಿಗೆ ಪೈಪೋಟಿ ನಡೆಸಿ ಮುನ್ನುಗ್ಗುತ್ತಿರುವುದು ಹೆಮ್ಮೆಯ ವಿಷಯ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ (ಎಂಸಿಎ) ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಗೆ 50 ವರ್ಷ ಆಗೋದು ಹೆಚ್ಚಲ್ಲ. ಆದ್ರೆ ಒಂದು ಸಂಸ್ಥೆಗೆ 50 ವರ್ಷ ಆಗೊದು ಮಹತ್ವದ ಘಟ್ಟ. ಕಳೆದ 50 ವರ್ಷದಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ರಾಜ್ಯದಲ್ಲೂ ಬೇರೆ ಬೇರೆ ಕ್ಷೇತ್ರದಲ್ಲಿ ಬದಲಾವಣೆಗಳನ್ನು ನೋಡಿದ್ದೀವಿ. ಇದರ ನಡುವೆಯೂ ನಿಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆದಿರುವುದು ದೊಡ್ಡ ಸಾಧನೆ ಎಂದು ಹೇಳಿದರು.
1990 ರಲ್ಲಿ ದೇಶದಲ್ಲಿ ಖಾಸಗೀಕರಣ, ಉದಾರೀಕರಣ, ಜಾಗತೀಕರದ ನಂತರ ಎಲ್ಲವು ಬದಲಾಗುತ್ತಾ ಬಂತು. ಸರ್ಕಾರದ ಕಾರ್ಯ ಸ್ವರೂಪ, ವಿಧಾನಗಳೂ ಬದಲಾದವು. ಸರ್ಕಾರಿ ಕ್ಷೇತ್ರದಲ್ಲೂ ಖಾಸಗೀ ಅವರ ಪ್ರಮಾಣ ಹೆಚ್ಚಾಗುತ್ತಿದೆ. ವ್ಯವಸ್ಥೆಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದಾಗ ಖಾಸಗಿಯವರ ಮೇಲೆ ವಿಶ್ವಾಸ ಹೆಚ್ಚುತ್ತದೆ. ಒಂದು ಸಂಸ್ಥೆ ಸರಿಯಾಗಿ ಕೆಲಸ ಮಾಡಿದರೆ ಸರ್ಕಾರಕ್ಕೂ ಅನುಕೂಲವಾಗಲಿದೆ. ಎಂಸಿಎ ಯಶಸ್ವಿಯಾದರೆ ಸರ್ಕಾರಕ್ಕೂ ಅನುಕೂಲವಾಗಲಿದೆ ಎಂದರು.

ಮಾರುಕಟ್ಟೆ ವ್ಯವಸ್ಥೆಯಲ್ಲಿ ಬದಲಾವಣೆ: ಸೃಜನಶೀಲತೆ ಹೆಚ್ಚಾಗಬೇಕು
ಇಂದು ಜಗತ್ತಿನಲ್ಲಿ ತಾಂತ್ರಿಕತೆ ಬೆಳೆದಿದೆ. ಡಿಜಿಟಲ್ ಮಾರ್ಕೆಟಿಂಗ್ ಬಂದಿದೆ. ಮಾರುಕಟ್ಟೆ ವ್ಯವಸ್ಥೆಯಲ್ಲೂ ಹತ್ತು ಹಲವು ಬದಲಾವಣೆಗಳು ಆಗಿವೆ. ಇಂದಿನ ಸನ್ನಿವೇಶದಲ್ಲಿ ಸಾಕಷ್ಟು ಸ್ಪರ್ಧೆಯೂ ಇದೆ. ಇದರ ನಡುವೆ ಎಂಸಿಎ ಕಂಪನಿ ಎದ್ದು ನಿಲ್ಲಬೇಕು. ಇದಕ್ಕೆ ನಿಮ್ಮ ಸೃಜನಶೀಲತೆ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನನಗೆ ಎಂಸಿಎ ಜೊತೆ ಸಾಕಷ್ಟು ಸಂಬಂಧ ಇದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ನೀರಾವರಿ ಸಚಿವನಾಗಿ, ಗೃಹ ಸಚಿವನಾಗಿ ಮತ್ತು ಕಾನೂನು ಸಚಿವನಾಗಿ ಎಂಸಿಎ ಮೂಲಕ ಸಾಕಷ್ಟು ಸೃಜನಶೀಲ ಜಾಹೀರಾತುಗಳನ್ನು ಮಾಡಿಸಿದ್ದೇನೆ. ನಿಮ್ಮಿಂದ ಉತ್ತಮ ಗುಣಮಟ್ಟದ ಸೃಜನಶೀಲತೆ ಬಯಸುತ್ತೇವೆ ಎಂದು ತಿಳಿಸಿದರು.

ಗುಣಮಟ್ಟದ ವ್ಯವಹಾರ ಅಗತ್ಯ
ವಿಷಯಗಳನ್ನು ಅರ್ಥಪೂರ್ಣವಾಗಿ ಸಂಕ್ಷಿಪ್ತವಾಗಿ ಹೇಳುವಂತಹ ಕಲೆ ಸಿದ್ದಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಬೆಲೆಗಳಲ್ಲಿ ಉತ್ತಮ ಗುಣಮಟ್ಟದ ವ್ಯವಹಾರ ನಿಮ್ಮಿಂದ ಆಗಬೇಕೆಂದು ಸರ್ಕಾರ ಬಯಸುತ್ತದೆ. ಯಾವುದೇ ಕಾರ್ಯಕ್ರಮದ ಬಗ್ಗೆ ಜನರ ಅಭಿಪ್ರಾಯ ಹೇಗಿದೆ. ಅದನ್ನು ಸೃಜನಶೀಲವಾಗಿ ಯಾವ ರೀತಿ ಜನರಿಗೆ ಮುಟ್ಟಿಸಬೇಕು ಅನ್ನುವುದನ್ನು ತಿಳಿಯುವ ಕೆಲಸ ಮಾಡಬೇಕು. ಐವತ್ತು ವರ್ಷದಲ್ಲಿ ನಡೆದ ಕೆಲಸದ ಬಗ್ಗೆ ಸಿಂಹಾವಲೋಕನ ಹಾಗೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಏನೇನು ಮಾಡಬಹುದು ಎಂಬುದರ ಬಗ್ಗೆ ಚಿಂತನೆ ಮಾಡಬೇಕು ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಾಜೀ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವರುಗಳಾದ ಮುರುಗೇಶ್ ನಿರಾಣಿ ಹಾಗೂ ಸಿಸಿ ಪಾಟೀಲ್, ಎಂಸಿಎ ಅಧ್ಯಕ್ಷರಾದ ಕರಿಗೌಡರು ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications