Bengaluru-Mysuru Expressway: 30 ವರ್ಷದ ನಂತರ ಎಕ್ಸ್ಪ್ರೆಸ್ವೇ ಪರಿಶೀಲನೆಗೆ ಸರ್ಕಾರ ಸಮಿತಿ ರಚನೆ
ಬೆಂಗಳೂರು, ಏಪ್ರಿಲ್ 20: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಎಕ್ಸ್ಪ್ರೆಸ್ ವೇ ನಿರ್ಮಿಸಲಾಗಿದೆ. ಮಂಡ್ಯ, ರಾಮನಗರ ಸೇರಿದಂತೆ ನಾಲ್ಕಾರು ಜಿಲ್ಲೆಗಳ ಹಾಗೂ ನಿತ್ಯ ಓಡಾಡುವ ಲಕ್ಷಾಂತರ ಜನರಿಗೆ ಸಹಾಯವಾಗಿದೆ. ಈ Bengaluru-Mysuru Expressway ಸಲುವಾಗಿ ಗೃಹ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ 07 ಸದಸ್ಯರ ಸಂಪುಟ ಉಪ ಸಮಿತಿ ರಚಿಸಲಾಗಿದೆ.
ಈ ಎಕ್ಸ್ಪ್ರೆಸ್ವೇ ನಿರ್ಮಾಣ ಯೋಜನೆ ಅನುಮೋದನೆ ದೊರೆತು ಮೂರು ದಶಕಗಳ (30 ವರ್ಷ) ನಂತರ ಕರ್ನಾಟಕ ಸರ್ಕಾರ ಸಂಪುಟ ಉಪಸಮಿತಿ ರಚಿಸಿದೆ. ಈವರೆಗೆ ನಡೆದ ಕೆಲಸ ಹಾಗೂ ಇತರ ಸಲಹೆ, ಸೂಚನೆ, ಮುಂದಿನ ಕ್ರಮಗಳ ಬಗ್ಗೆ ಈ ಸಮಿತಿ ಸೂಚನೆ ನೀಡಲಿದೆ ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.

ಗೃಹ ಸಚಿವರ ಡಾ.ಜಿ.ಪರಮೇಶ್ವರ ಅವರ ನೇತೃತ್ವದ ಈ ಉಪ ಸಮಿತಿಯಲ್ಲಿ ಇತರ ಸದಸ್ಯರಾಗಿ ಕಾನೂನು ಸಚಿವ ಎಚ್.ಕೆ. ಪಾಟೀಲ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ಕೈಗಾರಿಕೆ ಸಚಿವ ಎಂಬಿ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ, ಲೋಕೋಪಯೋಗಿ ಖಾತೆ ಸತೀಶ್ ಜಾರಕಿಹೊಳಿ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ನೇಮಕಗೊಂಡಿದ್ದಾರೆ. ಇದುವರೆಗೆ ನಿರ್ಮಾಣವಾಗಿರುವ ಎಕ್ಸ್ಪ್ರೆಸ್ವೇ ಅವನ್ನು ಈ ಸಮಿತಿ ಸದಸ್ಯರು ಪರಿಶೀಲಿಸಲಿದ್ದಾರೆ.
ಹೆದ್ದಾರಿ ರಸ್ತೆ ಖುದ್ದು ಪರಿಶೀಲಿಸಿ ಬಳಿಕ ಕಾನೂನು ತಜ್ಞರ ಜೊತೆಗೂಡಿ ನಂತರ ಕೈಗೊಳ್ಳಬಹುದಾದ ಕಾನೂನಾತ್ಮಕ ಕ್ರಮಗಳ ಕುರಿತು ಎರಡು ತಿಂಗಳಲ್ಲಿ ವರದಿ ನೀಡಲಿದೆ. ಈ ಸಮಿತಿಗೆ ರಾಜ್ಯ ಲೋಕೋಪಯೋಗಿ ಇಲಾಖೆಯು ಪೂರಕ ಸಹಾಯ ನೀಡಲಿದೆ ಎಂದು ಸರ್ಕಾರದ ಟಿಪ್ಪಣಿಯಲ್ಲಿ ಮಾಹಿತಿ ನೀಡಲಾಗಿದೆ.
ಭೂಸ್ವಾಧಿನ ಸಂಬಂಧಿಸಿದ ಕೋರ್ಟ್ ಪ್ರಕರಣ ಬಾಕಿ
ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಎಕ್ಸ್ಪ್ರೆಸ್ ವೇ ಕಾಮಗಾರಿ ಕುರಿತು ಮಹತ್ವದ ಚರ್ಚೆಗಳು ನಡೆದಿವೆ. ವರ್ಷಗಳಿಂದ ಕೆಲಸ ಸ್ಥಗಿತಗೊಂಡಿವೆ. 2019 ಮಾರ್ಚ್ನಲ್ಲಿ ಎಕ್ಸ್ಪ್ರೆಸ್ವೇ 4 ಕಿ.ಮೀ ಉದ್ದ, ಪೆರಿಫೆರಲ್ ರಸ್ತೆಯ 41 ಕಿ.ಮೀ ಉದ್ದ ಮತ್ತು ಲಿಂಕ್ ರಸ್ತೆಯ 8.5 ಕಿ.ಮೀ ಉದ್ದದ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಬಾಕಿ ಉಳಿದ ಸಮಸ್ಯೆಗಳಿಗೆ ರೈತರಿಗೆ ಪರಿಹಾರ ಪಾವತಿ ವಿಳಂಬ ಎಂದು ಹೇಳಲಾಗುತ್ತಿದೆ. ಇದೇ ವಿಚಾರವಾಗಿ ನ್ಯಾಯಾಲಯದಲ್ಲಿ ಒಟ್ಟು 370ಕ್ಕೂ ಹೆಚ್ಚು ಪ್ರಕರಣ ಇತ್ಯರ್ಥವಾಗದೇ ಹಾಗೇ ಉಳಿದಿವೆ.

30 ವರ್ಷಗಳ ಹಿಂದೆ ಯೋಜನೆಗೆ ಅನುಮೋದನೆ
ಅವಿಭಜಿತ ಜನತಾದಳ ಸರ್ಕಾರವು 1995 ರಲ್ಲಿ ಬೆಂಗಳೂರು-ಮೈಸೂರು ಸಂಪರ್ಕಿಸಲು ಎಕ್ಸ್ಪ್ರೆಸ್ವೇ ಯೋಜನೆಗೆ ಅನುಮೋದನೆ ನೀಡಿತ್ತು. ಅಂದಿನಿಂದ ಈವರೆಗೆ ಅಂದರೆ 30 ವರ್ಷಗಳಲ್ಲಿ ಏನೆಲ್ಲ ರಸ್ತೆ ನಿರ್ಮಾಣವಾಗಿದೆ ಎಂಬುದು ಪರಿಶೀಲನೆಗೆ ಒಳಪಡಲಿದೆ. ಅಂದು ಪೆರಿಫೆರಲ್ ಲಿಂಕ್ ರಸ್ತೆ ಮತ್ತು ಸ್ಯಾಟಲೈಟ್ ಟೌನ್ಶಿಪ್ಗಳ ಅಭಿವೃದ್ಧಿಗೂ ಅನುಮೋದನೆ ನೀಡಿ, ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆ ಎಂದು ಹೆಸರಿಡಲಾಗಿತ್ತು. ನೈಸ್) NICE ಜೊತೆಗೆ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿತ್ತು.
ನಂತರ ನೈಸ್ ಕಂಪನಿ ಹಾಗೂ ರಾಜ್ಯ ಸರ್ಕಾರದ ನಡುವೆ 1997ರ ಏಪ್ರಿಲ್ 3ರಂದು ಫ್ರೇಮ್ವರ್ಕ್ ಒಪ್ಪಂದ (FWA) ನಡೆಯಿತು. ಅದರ ಪ್ರಕಾರ, 20,193 ಎಕರೆ ಭೂಮಿಯನ್ನು NICE ಗೆ ಹಸ್ತಾಂತರಿಬೇಕಿತ್ತು. ಅದರಲ್ಲಿ 6,999 ಎಕರೆ ಭೂಮಿ ಟೋಲ್ ರಸ್ತೆಗೆ ಮತ್ತು 13,194 ಎಕರೆಗಳನ್ನು ಟೌನ್ಶಿಪ್ ನಿರ್ಮಾಣಕ್ಕೆ ಮೀಸಲಿರಿಸಲಾಯಿತು. ನಂತರ ಒಂದಷ್ಟು ಖಾಸಗಿ ವ್ಯಕ್ತಿಗಳಿಗೆ ಸೇರಿ ಜಾಗವು ಇತ್ತು. ಸದ್ಯ ಅಂದಿನ ಫ್ರೇಮ್ ವರ್ಕ್ ಒಪ್ಪಂದ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಉಪಸಮಿತಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳಲಿದೆ.












Click it and Unblock the Notifications