ಬೆಂಗಳೂರು : ದ್ವಿತೀಯ ಪಿಯು ವಿದ್ಯಾರ್ಥಿನಿ ಗುಂಡಿಗೆ ಬಲಿ
ಬೆಂಗಳೂರು, ಏ.1 : ಗೌತಮಿ ಮೇಲೆ ನಡೆದ ಗುಂಡಿನ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಗತಿ ಪಿಯು ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥ ಪ್ರಶಾಂತ್ ಅವರು, ಹಾಸ್ಟೆಲ್ಗೆ ಪುರುಷರು ಪ್ರವೇಶಿಸದಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಮಂಗಳವಾರ ರಾತ್ರಿ ಮಹೇಶ್ ಅಕ್ರಮವಾಗಿ ಪ್ರವೇಶ ಮಾಡಿದ್ದಾನೆ. ಏಕಾಏಕಿ ಆತ ಪ್ರವೇಶಿಸಿದ್ದರಿಂದ ಅದನ್ನು ತಡೆಯಲು ಸಾಧ್ಯವಾಗಿಲ್ಲ.
ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ಸಿಸಿಟಿವಿ ಆಳವಡಿಸಲಾಗಿದ್ದು ಅದರಲ್ಲಿ ಮಹೇಶ್ ಚಲನವಲನಗಳು ಸೆರೆಯಾಗಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲಾಗಿದೆ ಎಂದು ವರದಿಗಾರರಿಗೆ ತಿಳಿಸಿದರು.
ಸಮಯ 5.15 : ಗೌತಮಿ ಮೇಲೆ ಗುಂಡಿನ ದಾಳಿ ನಡೆಸಿ ಅಕ್ಕನ ಮನೆಯಲ್ಲಿ ಅಡಗಿದ್ದ ಮಹೇಶ್ ಬಗ್ಗೆ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದ. ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಆತನನ್ನು ಪೊಲೀಸರು ಬಂಧಿಸಿದರು.
ಮಂಗಳವಾರ ರಾತ್ರಿ ಗುಂಡಿನ ದಾಳಿ ನಡೆಸಿದ ಮಹೇಶ್ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಿ.ನಾರಾಯಣಪುರದಲ್ಲಿರುವ ಅಕ್ಕನ ಮನೆಗೆ ಬಂದಿದ್ದ. ಆ ಸಮಯದಲ್ಲಿ ಅಕ್ಕ ಬಾಡಿಗೆಗೆ ಇರುವ ಮನೆಯ ಮಾಲೀರು ಮಹೇಶ್ನನ್ನು ಗುರುತು ಹಿಡಿದಿದ್ದಾರೆ. ಆತನನ್ನು ವಿಚಾರಿಸಿದಾಗ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಮಹೇಶ್ನನ್ನು ಹಿಡಿದ ಸ್ಥಳೀಯರು ಆತನನ್ನು ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಮಯ 4.30 : ಗುರುವಾರ ಬೆಳಗ್ಗೆ 11 ಗಂಟೆಗೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಗೌತಮಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಗೌತಮಿ ತಂದೆ ಟಿ.ರಮೇಶ್ ವರದಿಗಾರರಿಗೆ ತಿಳಿಸಿದರು. ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕೊಡದ ಕಾರಣ ಮೃತದೇಹವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ.
ಸಮಯ 4 ಗಂಟೆ : ಗೌತಮಿ ಮೇಲೆ ಗುಂಡಿನ ದಾಳಿ ನಡೆಸಿದ ಮಹೇಶ್ ಒಂದು ತಿಂಗಳ ಹಿಂದೆ ಗೌತಮಿಯ ಕೋಣೆಗೆ ನುಗ್ಗಲು ಪ್ರಯತ್ನಿಸಿದ್ದ. ಈ ಸಂದರ್ಭದಲ್ಲಿ ಗೌತಮಿ ಅಡ್ಡಿಪಡಿಸಿ ಕೂಗಿಕೊಂಡಿದ್ದಳು, ಆಗ ಅಲ್ಲಿಂದ ಆತ ಪರಾರಿಯಾಗಿದ್ದ. ಈ ಬಗ್ಗೆ ಹಾಸ್ಟೆಲ್ ಆಡಳಿತ ಮಂಡಳಿಗೂ ದೂರು ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಸಮಯ 3 ಗಂಟೆ : ಗುಂಡೇಟಿನಿಂದ ಮೃತಪಟ್ಟ ಗೌತಮಿ ಮರಣೋತ್ತರ ಪರೀಕ್ಷೆಯನ್ನು ವೈದೇಹಿ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಪ್ರಗತಿ ಕಾಲೇಜಿನಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
2 ಗಂಟೆ : ವಿದ್ಯಾರ್ಥಿನಿ ಗೌತಮಿ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಗತಿ ಪಿಯು ಕಾಲೇಜಿನ ಅಟೆಂಡರ್ ಮಹೇಶ್ನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಮನೆಯ ಮಾಲೀಕ ನೀಡಿದ ಮಾಹಿತಿ ಅನ್ವಯ ಅವರನ್ನು ಬಂಧಿಸಲಾಗಿದೆ. [ಮಹೇಶ್ ಬಂಧನ]
ಸಮಯ 12. 30 : 'ತಾಂತ್ರಿಕ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಗೌತಮಿ ಸಿಇಟಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು ಆದ್ದರಿಂದ ಹಾಸ್ಟೆಲ್ನಲ್ಲಿದ್ದುಕೊಂಡು ಓದಿಕೊಳ್ಳುತ್ತಿದ್ದಳು. ಅವಳಿಗೆ ಯಾವುದೇ ಲವ್ ಅಫೇರ್ ಇರಲಿಲ್ಲ, ಇಂತಹ ಸುದ್ದಿಯನ್ನು ಹಬ್ಬಿಸುವ ಮೂಲಕ ಮಗಳ ಹೆಸರಿಗೆ ಕಳಂಕ ಹಚ್ಚಬೇಡಿ' ಎಂದು ಗೌತಮಿ ತಂದೆ ಟಿ.ರಮೇಶ್ ಮನವಿ ಮಾಡಿದ್ದಾರೆ.
ಸಮಯ 11.30 : ಪ್ರಗತಿ ಕಾಲೇಜಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಅವರು ಗೌತಮಿ ಸ್ನೇಹಿತೆ ಶಿರಿಷಾ ಮೇಲೆಯೂ ಮಹೇಶ್ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಿದರು. ಶಿರಿಷಾ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸಮಯ 10.30 : ಕಾಡುಗೋಡಿ ಸಮೀಪದ ಪ್ರಗತಿ ಕಾಲೇಜಿಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಾರಿಯಾಗಿರುವ ಮಹೇಶ್ ಬಂಧನಕ್ಕಾಗಿ ಮೂರು ತಂಡಗಳನ್ನು ರಚನೆ ಮಾಡಲಾಗಿದೆ.
ಹಿಂದಿನ ಸುದ್ದಿ : ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಕಾಡುಗೋಡಿಯಲ್ಲಿ ನಡೆದಿದೆ. ಗುಂಡಿನ ದಾಳಿ ನಡೆಸಿದ ಆರೋಪಿ ಪರಾರಿಯಾಗಿದ್ದು ಕಾಡುಗೋಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಗುಂಡಿನ ದಾಳಿಯಿಂದ ಮೃತಪಟ್ಟ ವಿದ್ಯಾರ್ಥಿನಿಯನ್ನು ಗೌತಮಿ (18) ಎಂದು ಗುರುತಿಸಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗೌತಮಿ ಕಾಡುಗೋಡಿ ಸಮೀಪದ ಪ್ರಗತಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.

ಕಾಲೇಜಿನ ಹಾಸ್ಟೆಲ್ನಲ್ಲಿ ಇರುತ್ತಿದ್ದ ಆಕೆಯ ಮೇಲೆ ಮಂಗಳವಾರ ರಾತ್ರಿ ಕಾಲೇಜಿನ ಆಫೀಸ್ ಬಾಯ್ ಮಹೇಶ್ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ರಾತ್ರಿ 10 ಗಂಟೆ ಸುಮಾರಿಗೆ ಹಾಸ್ಟೆಲ್ಗೆ ಬಂದ ಮಹೇಶ್ ಗೌತಮಿ ಮತ್ತು ಆಕೆಯ ಸ್ನೇಹಿತೆ ಶಿರಿಷಾ ಮೇಲೆ ಹಲ್ಲೆ ನಡೆಸಿದ್ದಾನೆ.
ನಂತರ ಗೌತಮಿ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ತಲೆಗೆ ಗುಂಡು ತಗುಲಿದ್ದ ಗೌತಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮಹೇಶ್ ಸ್ಥಳದಿಂದ ಪರಾರಿಯಾಗಿದ್ದು, ಕಾಡುಗೋಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಗುಂಡಿನ ದಾಳಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೂಲತಃ ಆಗುಂಬೆಯವರಾದ ಮಹೇಶ್ 2012ರಿಂದ ಕಾಲೇಜಿನಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಶಾಲೆಗೆ ಪೊಲೀಸರ ಭೇಟಿ ವಿಡಿಯೋ ನೋಡಿ












Click it and Unblock the Notifications