ಪಾದರಾಯನಪುರ ಗಲಭೆ; 25 ಪೊಲೀಸರಿಗೆ ಕ್ವಾರಂಟೈನ್
ಬೆಂಗಳೂರು, ಏಪ್ರಿಲ್ 27 : ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಭೆ ಪೊಲೀಸರಿಗೂ ಕಂಟಕವಾಗಿದೆ. ಪುನಃ 25 ಪೊಲೀಸರನ್ನು ಕ್ವಾರಂಟೈನ್ಗೆ ಹಾಕಲಾಗಿದ್ದು, ಇದುವರೆಗೂ ಒಟ್ಟು 48 ಸಿಬ್ಭಂದಿಗಳು ಕ್ವಾರಂಟೈನ್ಗೆ ತೆರಳಿದ್ದಾರೆ.
ಭಾನುವಾರ 25 ಪೊಲೀಸ್ ಸಿಬ್ಭಂದಿಗಳನ್ನು ಕ್ವಾರಂಟೈನ್ಗೆ ಕಳುಹಿಸಲಾಗಿದೆ. ಇವರು ಗಲಭೆ ನಡೆದ ಪ್ರದೇಶ, ಪುಂಡರ ಬಂಧನ, ವಿಚಾರಣೆಯಲ್ಲಿ ತೊಡಗಿದ್ದರು. ಮೊದಲು 23 ಜನರನ್ನು ಕ್ವಾರಂಟೈನ್ಗೆ ಕಳುಹಿಸಲಾಗಿತ್ತು.
ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 160 ಪೊಲೀಸರಿಗೆ ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ಕೋವಿಡ್ -19 ಪರೀಕ್ಷೆ ನಡೆಸಲಾಗಿದೆ. ಬಳಿಕ ಗಾಂಧಿನಗರದ ಹೋಟೆಲ್ನಲ್ಲಿ 23 ಜನರಿಗೆ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ.

ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಈ ಕುರಿತು ಹೇಳಿಕೆ ನೀಡಿದ್ದು, "ಪಾದರಾಯನಪುರ ಗಲಭೆ ಬಗ್ಗೆ ತನಿಖೆ ನಡೆಯುತ್ತಿದೆ. ಮೊದಲ ದಿನದಿಂದ ಆ ಪ್ರದೇಶದಲ್ಲಿದ್ದ ಪೊಲೀಸರಿಗೆ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.
ಗಾಂಧಿನಗರದಲ್ಲಿರುವ ಒಟ್ಟು 48 ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದವರಿಗೆ ಹೋಂ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ. ಯಾವುದೇ ಸಿಬ್ಭಂದಿಗೆ ಸೋಂಕು ಪತ್ತೆಯಾಗಿಲ್ಲ. ಎಲ್ಲರ ಪರೀಕ್ಷೆಯ ವರದಿಗಳು ಇನ್ನೂ ಬರಬೇಕಿದೆ.
ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 126ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ಇವರಲ್ಲಿ 5 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆದ್ದರಿಂದ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ.
ಕಳೆದ ಭಾನುವಾರ ಕೊರೊನಾ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ಗೆ ಕರೆದುಕೊಂಡು ಹೋಗಲು ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹೋದಾಗ ಪಾದರಾಯನಪುರದಲ್ಲಿ ಗಲಭೆ ನಡೆದಿತ್ತು.












Click it and Unblock the Notifications