ಜ.26ರ ಗಲಭೆ ಸರ್ಕಾರದ ಪ್ರಾಯೋಜಕತ್ವ; ಸತೀಶ್ ಜಾರಕಿಹೊಳಿ
ಬೆಂಗಳೂರು, ಫೆಬ್ರವರಿ 7: "ಕೇಂದ್ರ ಸರ್ಕಾರದ ಪ್ರಾಯೋಜಕತ್ವದಿಂದಲೇ ಜನವರಿ 26ರಂದು ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ. ಬಿಜೆಪಿ ಬೆಂಬಲಿಗ ನಟನೋರ್ವ ಬಾವುಟವನ್ನು ಕಟ್ಟಿ ಇಷ್ಟೆಲ್ಲಾ ಸಮಸ್ಯೆಗೆ ಕಾರಣನಾಗಿದ್ದಾನೆ" ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.
ಭಾನುವಾರ ಬೆಳಗಾವಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, "ಉದ್ದೇಶಪೂರ್ವಕವಾಗಿ ರೈತರ ಹೋರಾಟ ದಿಕ್ಕು ತಪ್ಪಿಸಲು ಪ್ರಯತ್ನ ನಡೆಸಿದರು. ಆದರೆ, ಯಶಸ್ವಿಯಾಗಿಲ್ಲ. ಜನ ಅದಕ್ಕೆ ಸ್ಪಂದನೆ ಮಾಡಿಲ್ಲ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದಲೇ ಹಿಂಸಾಚಾರ ಆಗಿದೆ" ಎಂದು ದೂರಿದರು.
ದೆಹಲಿ ಗಲಭೆ; ದೀಪ್ ಸಿಧು ಪತ್ತೆಗೆ ಲಕ್ಷ ನಗದು ಬಹುಮಾನ ಘೋಷಣೆ
"ಪ್ರಧಾನಿ ಜೊತೆ ಆರೋಪಿತ ನಟನ ಫೋಟೋ ವಾಟ್ಸಪ್ನಲ್ಲಿ ಹರಿದಾಡುತ್ತಿದೆ. ಆ ನಟ ಬಿಜೆಪಿ ಕಟ್ಟಾ ಕಾರ್ಯಕರ್ತ, ಆತನೇ ಜನ ಕರೆದುಕೊಂಡು ಹೋಗಿ ರೈತರ ಹೋರಾಟದ ದಿಕ್ಕು ತಪ್ಪಿಸಲು ಇದೆಲ್ಲಾ ಮಾಡಿದ್ದು" ಎಂದು ಹೇಳಿದರು.
ದೆಹಲಿ ಗಲಭೆ ನಂತರ ಪಂಜಾಬ್ ಮೂಲದ ನೂರು ರೈತರು ಕಾಣೆ
"ಬೇರೆ ದೇಶದಲ್ಲಿ ಅನ್ಯಾಯವಾದಾಗ ನಾವು ಧ್ವನಿ ಎತ್ತಲಿಲ್ಲವೇ?, ಶ್ರೀಲಂಕಾದಲ್ಲಿ ಅನ್ಯಾಯವಾದಾಗ ನಮ್ಮ ದೇಶದ ಸೈನಿಕರು ಹೋಗಿದ್ದರು. ಬಾಂಗ್ಲಾದೇಶದಲ್ಲಿ ಅನ್ಯಾಯ ಆದಾಗ ಇಂದಿರಾ ಗಾಂಧಿ ಬೆಂಬಲಿಸಿ ದೇಶವನ್ನು ವಿಭಜನೆ ಮಾಡಿದರು. ನಮ್ಮ ಪ್ರಧಾನಿ ಟ್ರಂಪ್ ಪರವಾಗಿ ಪ್ರಚಾರವನ್ನು ಮಾಡಿಲ್ವಾ?" ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.
ದೆಹಲಿ ಗಲಭೆ ಆರೋಪ ಕೇಳಿಬರುತ್ತಿದ್ದಂತೆ ನಾಪತ್ತೆಯಾದ ನಟ
"ನಮ್ಮ ದೇಶದ ಕೆಲವರು ಒತ್ತಡದ ಮೇಲೆ ಟ್ವೀಟ್ ಮಾಡುತ್ತಿದ್ದಾರೆ. ನೀವು ಟ್ವೀಟ್ ಮಾಡಿ ಅಂತಾ ಕೇಂದ್ರ ಸರ್ಕಾರ ಒತ್ತಡ ಹಾಕುತ್ತಿದೆ. ಸಚಿನ್ ತೆಂಡೂಲ್ಕರ್ ಕಟೌಟ್ಗೆ ಮಸಿ ಬಳಿದು ಪ್ರತಿಭಟನೆ ಮಾಡಿದರೆ ಸಮಸ್ಯೆ ಪರಿಹಾರವಾಗಲ್ಲ. ಏನಾದರೂ ಒತ್ತಡ ಬಂದರೆ ಸ್ವಯಂ ಪ್ರೇರಿತವಾಗಿ ತಮ್ಮ ಪ್ರಶಸ್ತಿಯನ್ನು ವಾಪಸ್ ಕೊಡಬೇಕು. ರೈತರು, ದೇಶಕ್ಕಿಂತ ಯಾವುದೇ ಪ್ರಶಸ್ತಿ ದೊಡ್ಡದಲ್ಲ" ಎಂದರು.
"ಕೃಷಿ ಮಸೂದೆ ವಾಪಸ್ ಪಡೆಯಲು ಆಗ್ರಹಿಸಿ ದೇಶದ ತುಂಬಾ ಹೋರಾಟ ನಡೀತಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ತಕ್ಷಣ ಸ್ಪಂದನೆ ಮಾಡಬೇಕು. ದೇಶದ ರೈತರೆಲ್ಲರೂ ನೂತನ ಕೃಷಿ ಮಸೂದೆ ವಿರೋಧಿಸುತ್ತಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಠ ಹಿಡಿಯುವುದು ಸರಿಯಲ್ಲ" ಎಂದು ಹೇಳಿದರು.
"ಕಾಂಗ್ರೆಸ್ ಪ್ರಾಯೋಜಕತ್ವ ಹೋರಾಟ ಎಂದು ಬಿಜೆಪಿಗೆ ಹೇಳುತ್ತಿದೆ. ನಾವು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ. ಹೋರಾಟದ ರೂಪರೇಷೆ ಮಾಡಿದವರು ರೈತ ಸಂಘಟನೆಗಳು. ನಮಗೂ ಅದಕ್ಕೂ ಸಂಬಂಧವಿಲ್ಲ" ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.