ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಇಲ್ಲ: ಉಮೇಶ್ ಕತ್ತಿ
ಬೆಳಗಾವಿ, ಸೆಪ್ಟೆಂಬರ್ 29: ಅನರ್ಹ ಶಾಸಕರ ವಿರುದ್ಧ ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚಾಗಿದ್ದು, ಡಿಸಿಎಂ ಲಕ್ಷ್ಮಣ ಸವದಿ ನಂತರ ಈಗ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಅವರು ಅನರ್ಹರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
'ಉಪಚುನಾವಣೆಯಲ್ಲಿ ಅನರ್ಹ ಶಾಸಕರ ದಾರಿ ಬೇರೆ ನಮ್ಮ ದಾರಿ ಬೇರಿ, ಅವರ ದಾರಿ ಅವರು ನೋಡಿಕೊಳ್ಳಲಿ, ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ' ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ಅಥಣಿಯಲ್ಲಿ ಲಕ್ಷ್ಮಣ ಸವದಿಗೆ, ಕಾಗವಾಡದಲ್ಲಿ ರಾಜು ಕಾಗೆ ಗೆ, ಗೋಕಾಕದಲ್ಲಿ ಅಶೋಕ್ ಪೂಜಾರಿಗೆ ಬಿಜೆಪಿ ಟಿಕೆಟ್ ಸಿಗುವುದು ಖಾಯಂ ಎಂದು ಉಮೇಶ್ ಕತ್ತಿ ಹೇಳಿದ್ದಾರೆ. ಆ ಮೂಲಕ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಇಲ್ಲವೆಂದು ಹೇಳಿದ್ದಾರೆ.
'ಈ ಸರ್ಕಾರದಲ್ಲಿ ಸಚಿವನಾಗುವ ಅವಕಾಶ ನನಗೆ ಇದೆ, ಈಗ ಸಚಿವ ಸ್ಥಾನ ಸಿಕ್ಕಿಲ್ಲ ಮುಂದೆ ಏನಾಗುತ್ತದೆಯೋ ಕಾದು ನೋಡೋಣ' ಎಂದು ಕತ್ತಿ ಹೇಳಿದ್ದಾರೆ.
ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರದ ಮೊರೆ ಹೋಗುವಂತಿಲ್ಲ ಎಂದ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ, 'ಆತ ಇನ್ನೂ ಸಣ್ಣವನು ಹೆಚ್ಚಿಗೆ ತಿಳಿಯುವುದಿಲ್ಲ, ಕೇಂದ್ರದ ನೊಟುಗಳು, ರಾಜ್ಯದ ನೋಟುಗಳ ಬಣ್ಣ ಒಂದೇ ಇರುತ್ತದೆ' ಎಂದು ವ್ಯಂಗ್ಯ ಮಾಡಿದ್ದಾರೆ.