ಕೂಡ್ಲಿಗಿ ಬಳಿ ಬತ್ತಿ ಹೋದ ಪಾಳು ಬಾವಿಯಲ್ಲಿ ಇದ್ದಕ್ಕಿದ್ದಂತೆ ಜಿನುಗಿದ ನೀರು!
ಬಳ್ಳಾರಿ, ಮಾರ್ಚ್ 09:ಕೂಡ್ಲಿಗಿ ತಾಲೂಕಿನ ಅರ್ಜುನ ಚಿನ್ನನಹಳ್ಳಿ ಗ್ರಾಮದಲ್ಲಿನ ಹಳೆ ಬಾವಿಯಲ್ಲಿ ನೀರು ಬಂದಿದ್ದು, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಅನೇಕ ವರ್ಷಗಳಿಂದ ಜನರ ಕುಡಿಯುವ ನೀರಿಗೆ ಆಸರೆಯಾಗಿದ್ದ, ಸುಮಾರು 60 ಆಡಿ ಆಳದ ಬಾವಿ ಕಳೆದ 20 ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಬಾವಿಯಲ್ಲಿ ನೀರು ಜಿನುಗುತ್ತಿದ್ದು, ಶುಕ್ರವಾರ ಬಾವಿಯಲ್ಲಿ 5 ಅಡಿಗಿಂತಲು ಹೆಚ್ಚು ನೀರು ಸಂಗ್ರವಾಗಿದೆ.

ಬಿರು ಬಿಸಿಲಿನಲ್ಲಿಯೂ ಬತ್ತಿ ಹೋಗಿ, ಹಾಳು ಬಿದ್ದಿದ ಬಾವಿಯಲ್ಲಿ ನೀರು ಬಂದಿರುವುದು ಜನರ ಕೂತಹಲಕ್ಕೆ ಕಾರಣವಾಗಿದ್ದು, ಈ ವಿಸ್ಮಯ ನೋಡಲು ಗ್ರಾಮದ ಜನರು ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಜನರು ತಂಡೋಪತಂಡವಾಗಿ ಬಂದು ಬಾವಿಯ ಸುತ್ತ ಮುಗಿ ಬಿದ್ದಿದ್ದಾರೆ.

ಶುಕ್ರವಾರ ಬಾವಿಯಲ್ಲಿನ ನೀರು ನೋಡಿದ ಗ್ರಾಮದ ಯುವಕರಾದ ರಾಮಚಂದ್ರ, ಪಾಲಯ್ಯ ಬಾವಿಗಿಳಿದು ಪರೀಕ್ಷಿಸಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸರಿಯಾಗಿ ಮಳೆ ಬಂದಿಲ್ಲ. ಸುತ್ತಲು ಎಲ್ಲಿಯೂ ಹಳ್ಳಗಳು ಹರಿದಿಲ್ಲ. ಆದರೂ ಈ ರೀತಿ ನೀರು ಬಂದಿರುವುದು ಅಚ್ಚರಿಯಾಗಿದ್ದು, ನೀರು ಕುಡಿಯಲು ಯೋಗ್ಯವಾಗಿದೆಯೇ ಎಂಬುದನ್ನು ತಿಳಿಯಬೇಕು ಎಂದು ಗ್ರಾಮ ಮುಖಂಡರಾದ ಬೊಗ್ಗಯ್ಯ ಹಾಗೂ ಮಡಿವಾಳ ಗಂಗಣ್ಣ ಸೇರಿದಂತೆ ಅನೇಕರು ಹೇಳಿದ್ದಾರೆ.












Click it and Unblock the Notifications