'ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್': ಮೈಲಾರಲಿಂಗೇಶ್ವರ ಕಾರ್ಣಿಕದ ಒಳಾರ್ಥವೇನು..?
'ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್' ಎಂದು ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪಜ್ಜ ಭವಿಷ್ಯದ ವಾಣಿ ನುಡಿದಿದ್ದಾರೆ. ಮೈಲಾರಲಿಂಗೇಶ್ವರ ಕಾರ್ಣಿಕದ ಒಳಾರ್ಥದ ಬಗ್ಗೆ ಇಲ್ಲಿದೆ ಮಾಹಿತಿ.
ವಿಜಯನಗರ, ಫೆಬ್ರವರಿ 7: 'ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್' ಎಂದು ಕರ್ನಾಟಕದ ವಿಜಯನಗರ ಜಿಲ್ಲೆಯ ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪಜ್ಜ ಭವಿಷ್ಯದ ವಾಣಿ ನುಡಿದಿದ್ದಾರೆ.
ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವ ಮಂಗಳವಾರ ಅದ್ಧೂರಿಯಾಗಿ ಜರುಗಿದ್ದು ಗೊರವಯ್ಯ ರಾಮಪ್ಪಜ್ಜ 11 ದಿನಗಳ ಕಾಲ ಉಪವಾಸವಿದ್ದು 14 ಅಡಿ ಎತ್ತರದ ಮೈಲಾರದ ಡಂಕಣಮರಡಿಯಲ್ಲಿ ಬಿಲ್ಲನ್ನೇರಿ ಕಾರ್ಣಿಕ ನುಡಿದಿದ್ದಾರೆ.
ಡೆಂಕಣಮರಡಿಯಲ್ಲಿ ನುಡಿದ ಕಾರ್ಣಿಕವನ್ನು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡಿದ್ದಾರೆ. ಈ ಹಿಂದೆಯೂ ಈ ಕಾರ್ಣಿಕ ಆಗಿದ್ದು, ಮತ್ತೆ ಮರಳಿ ಆಗಿದೆ ಎಂದಿದ್ದಾರೆ.

ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ. ಭಗವಂತ ದೈವವಾಣಿ ಮೂಲಕ ಇದನ್ನು ತಿಳಿಸಿದ್ದಾನೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಸಾಧ್ಯತೆ ಎನ್ನುವುದು ಮೈಲಾರ ಕಾರ್ಣಿಕದ ರಾಜಕೀಯವಾಗಿ ವಿಶ್ಲೇಷಣೆಯಾಗಿದೆ. ಹೀಗಾಗಿ ಮೈಲಾರ ಕಾರ್ಣಿಕ ನುಡಿ ಎಲ್ಲಾ ಪಕ್ಷಗಳಲ್ಲಿ ತೀವ್ರ ಕೂತುಹಲ ಹಾಗೂ ಚರ್ಚೆ ಹುಟ್ಟು ಹಾಕಿದೆ.
ಇನ್ನು ಮಳೆ ಬೆಳೆ ಜಾಸ್ತಿ ಆಗಲಿದ್ದು ಸಮೃದ್ಧಿಯಾಗಿ ರೈತರಿಗೆ ಒಳ್ಳೆಯದಾಗುತ್ತದೆ. ರೈತರಿಗೆ ಬೆಳೆದ ಬೆಳೆ ಸಿಗುತ್ತದೆ, ಎನ್ನುವ ಸೂಚನೆ ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ಸಿಕ್ಕಿದೆ. ಇದರ ಜೊತೆಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ ಎನ್ನುವುದು ಮೈಲಾರ ಕಾರ್ಣಿಕ ನುಡಿಯ ರೈತಾಪಿ ವರ್ಗದ ವಿಶ್ಲೇಷಣೆಯಾಗಿದೆ.

ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪಜ್ಜ ನುಡಿದ ಭವಿಷ್ಯದ ವಾಣಿ ಬಗ್ಗೆ ಮಾಜಿ ಸಚಿವ ಬಸವರಾಜ್ ಶಿವಣ್ಣನವರ ಮಾತನಾಡಿದ್ದು, "ಅಂಬಳಿ ಹಸಿತು ಕಂಬಳಿ ಬಿಸತಲೆ ಪರಾಕ್ ಎಂದು ಹೇಳಿರುವುದು ಒಂದು ಒಳ್ಳೆಯ ಸಂದೇಶ. ಇದು ಈ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಕೊಟ್ಟಿದ್ದಾರೆ. ಅಂಬಳಿ ಹಳಿಸತು ಎಂದರೆ ರೈತರಿಗೆ ಹಾಗೂ ದೇಶಕ್ಕೆ ಅತಿವೃಷ್ಟಿ ಆಗದ ಹಾಗೆ ಮಳೆ ಬರುತ್ತದೆ. ಒಳ್ಳೆಯ ಬೆಳೆ ಈ ಬಾರಿ ಬರಲಿದೆ. ನಮ್ಮ ಜನ ಹಾಗೂ ರೈತರಿಗೆ ಊಟ ಮಾಡಿ ಹಳಸುವಷ್ಟು ಬೆಳೆ ಬರುತ್ತದೆ ಎಂದು ಭವಿಷ್ಯ ಹೇಳಿದ್ದಾರೆ. ಕಂಬಳಿ ಬಿಸಿತಲೆ ಎಂದು ಹೇಳಿದ್ದಾರೆ ವಿಶೇಷವಾಗಿ ಸಾಮಾಜಿಕ ನ್ಯಾಯ ಹಿನ್ನಲೆಯಲ್ಲಿ ಇರುವ ಉತ್ತಮ ವ್ಯಕ್ತಿ, ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಈ ಸೂಚನೆಯನ್ನು ಗೊರವಯ್ಯ ನುಡಿದಿದ್ದಾರೆ" ಎಂದು ಮಾಜಿ ಸಚಿವ ಬಸವರಾಜ್ ಶಿವಣ್ಣನವರ ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications