ಕಂಪ್ಲಿ ಶಾಸಕರು ದಿಢೀರ್ ಪ್ರತ್ಯಕ್ಷ, ಆಪರೇಷನ್ ಕಮಲದ ಬಗ್ಗೆ ಹೇಳಿದ್ದೇನು?
ಬಳ್ಳಾರಿ, ಜನವರಿ 17 : ಆಪರೇಷನ್ ಕಮಲದ ಸುದ್ದಿಗಳ ನಡುವೆಯೇ ನಾಪತ್ತೆಯಾಗಿದ್ದ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ನಾನು ಚಿಕ್ಕಮಗಳೂರಿನಲ್ಲಿದ್ದೆ ಎಂದು ಶಾಸಕರು ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ಹೊಸಪೇಟೆಯಲ್ಲಿ ಮಾತನಾಡಿದ ಜೆ.ಎನ್.ಗಣೇಶ್ ಅವರು, 'ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಎಲ್ಲಿಯೂ ಹೋಗಲ್ಲ. ಕಂಪ್ಲಿ ಕ್ಷೇತ್ರ ಅಭಿವೃದ್ಧಿಯಾಗಬೇಕು ಎನ್ನುವುದು ನನ್ನ ಬೇಡಿಕೆ ಅತೃಪ್ತರ ಬಣದಲ್ಲಿ ನಾನು ಕಾಣಿಸಿಕೊಂಡಿಲ್ಲ' ಎಂದರು.
ಆಪರೇಷನ್ ಕಮಲದ ಕುರಿತು ಮಾತನಾಡಿದ ಅವರು, 'ನಾನು ಮುಂಬೈಗೂ ಹೋಗಿಲ್ಲ, ಬೆಂಗಳೂರಿಗೂ ಹೋಗಿಲ್ಲ. ನನ್ನ ಇಬ್ಬರು ಮಕ್ಕಳು ಚಿಕ್ಕಮಗಳೂರಿನಲ್ಲಿ ಓದುತ್ತಿದ್ದಾರೆ. ಹೀಗಾಗಿ ಅವರನ್ನು ನೋಡಲು ಹೋಗಿದ್ದೆ. ಎರಡು ದಿನ ಅಲ್ಲಿಯೇ ಇದ್ದೆ' ಎಂದು ಹೇಳಿದರು.

'ನಾನು ಅತೃಪ್ತರ ಬಣದಲ್ಲಿ ಕಾಣಿಸಿಕೊಂಡಿಲ್ಲ. ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿವೆ. ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ ಅವರ ಮನವೊಲಿಸುವಷ್ಟು ನಾನು ದೊಡ್ಡವನಲ್ಲ' ಎಂದು ಜೆ.ಎನ್.ಗಣೇಶ್ ತಿಳಿಸಿದರು.
'ಎರಡು ದಿನ ಚಿಕ್ಕಮಗಳೂರಿನಲ್ಲಿದ್ದೆ. ಮಾಧ್ಯಮಗಳು ನಾನು ಬಿಜೆಪಿ ಸೇರಲು ಮುಂದಾಗಿದ್ದೇನೆ ಎಂದು ಬಿಂಬಿಸಿದವು. ಇದರಿಂದಾಗಿ ಕ್ಷೇತ್ರದ ಜನರು ನನ್ನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ' ಎಂದರು.
'ಈ ಹಿಂದೆ ಹಣ ಪಡೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಗ್ಗೆಯೆಲ್ಲಾ ನನಗೆ ಗೊತ್ತಿದೆ. ನನ್ನ ಉದ್ದೇಶ ಮತ್ತು ಗುರಿ ಕಂಪ್ಲಿ ಕ್ಷೇತ್ರದ ಅಭಿವೃದ್ಧಿ' ಎಂದು ಶಾಸಕರು ಸ್ಪಷ್ಟಪಡಿಸಿದರು.












Click it and Unblock the Notifications