ಬಾಗಲಕೋಟೆ : ಪ್ರವಾಹ; ರಕ್ಷಣಾ ಕಾರ್ಯಕ್ಕೆ 400 ಪೊಲೀಸರು
ಬಾಗಲಕೋಟೆ, ಆಗಸ್ಟ್ 06 : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಲವು ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಪರಿಸ್ಥಿತಿ ನಿಯಂತ್ರಣ, ರಕ್ಷಣಾ ಕಾರ್ಯಕ್ಕೆ 400 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಮನವಿ ಮೇರೆಗೆ ಈಗಾಗಲೇ ಎನ್. ಡಿ. ಆರ್. ಆಫ್ ಸೇನಾ ತಂಡವು ಜಮಖಂಡಿಗೆ ಆಗಮಿಸಿದೆ. ಇಂಜಿನಿಯರಿಂಗ್ ಟಾಸ್ಕ್ ಪೋರ್ಸ್ ತಂಡವು ಸಹ ಶೀಘ್ರವೇ ಜಿಲ್ಲೆಗೆ ಆಗಮಿಸಲಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ಹಿರಿಯ ಅಧಿಕಾರಿಗಳಾದ ಡಿವೈಎಸ್ಪಿ ಆರ್.ಕೆ.ಪಾಟೀಲ ನೇತೃತ್ವದಲ್ಲಿ ಪೋಲಿಸ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. 6 ಸಿಪಿಐ, 12 ಪಿಎಸ್ಐ ಸೇರಿದಂತೆ 400 ಜನ ಪೋಲಿಸರು ಪ್ರವಾಹ ಪೀಡಿತ ಸ್ಥಳಗಳ ನಿಗಾವಹಿಸುತ್ತಿದ್ದಾರೆ.

ಜಮಖಂಡಿ ತಾಲೂಕಿನ ಗ್ರಾಮಗಳಾದ ಮೂತ್ತೂರು, ಹಿರೇಪಡಸಲಗಿ ಹಾಗೂ ಆಲಗೂರ ನಡುಗಡ್ಡೆಯಾಗಿವೆ. ಪ್ರವಾಹ ಪರಿಹಾರ ಕೈಗೊಳ್ಳುವಾಗ ಯಾವುದೇ ಅಪಘಾತ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ. ಜನ-ಜಾನುವಾರುಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಪೋಲಿಸರು ತೊಡಗಿದ್ದಾರೆ.
ನದಿ ದಂಡೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳಲ್ಲಿ ಯಾರು ಸಂಚರಿಸದಂತೆ ಪೋಲಿಸ್ ಬೀಟ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ರಸ್ತೆಗಳಲ್ಲಿ ಬ್ಯಾರೇಜ್ಗಳ ದ್ವಾರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.
ಪ್ರತಿ ಗ್ರಾಮಗಳಲ್ಲಿ ಕಾರ್ಯ ನಿರತ ಪೋಲಿಸ್ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡು ಮೊಬೈಲ್ ನೆಟ್ ವರ್ಕ್ ಇಲ್ಲದ ಸ್ಥಳಗಳಲ್ಲಿ ಸಿಬ್ಬಂದಿಗಳಿಗೆ ವೈರ್ ಲೆಸ್ ನೀಡಲಾಗಿದೆ.
ಬೇರೆ ಜಿಲ್ಲೆಗಳಿಂದ 100ಕ್ಕೂ ಹೆಚ್ಚು ಹೋಂ ಗಾರ್ಡ್ಗಳನ್ನು ಈ ಪ್ರವಾಹ ಕಾರ್ಯಚರಣೆಗಾಗಿ ನಿಯೋಜನೆ ಮಾಡಲಾಗಿದೆ. 150 ಹೆಚ್ಚಿನ ಹೋಂ ಗಾರ್ಡ್ಗಳನ್ನು ಕರೆತರಲು ಯೋಜನೆ ರೂಪಿಸಲಾಗಿದೆ.












Click it and Unblock the Notifications