ಶಿವಗಂಗೆ ಬೆಟ್ಟದಿಂದ ಹಾರಿದರೂ ಬದುಕುಳಿದ!
ಬೆಂಗಳೂರು, ಸೆ.5 : ಐತಿಹಾಸಿಕ ಶಿವಗಂಗೆ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಯುವಕನನ್ನು ಪೊಲೀಸ್ ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಬದುಕಿಸಿದ್ದಾರೆ. ಬೆಟ್ಟದ 80 ಅಡಿ ಆಳದ ಕೆಳಗೆ ಸಿಲುಕಿದ್ದ ಯುವಕನನ್ನು ಗುರುವಾರ ರಕ್ಷಿಸಲಾಗಿದೆ.
ಬೆಂಗಳೂರಿನ ಮತ್ತಿಕೆರೆ ನಿವಾಸಿ ವಿಜಯ್ ಕುಮಾರ್ (40) ಕೌಟುಂಬಿಕ ಕಲಹದಿಂದ ಬೇಸತ್ತು. ಬುಧವಾರ ಸಂಜೆ 4,30ರ ಸುಮಾರಿಗೆ ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.

ಬೆಟ್ಟದಿಂದ ಸುಮಾರು 80 ಅಡಿ ಆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡರು, ಅದೃಷ್ಟವಶಾತ್ ಬದುಕುಳಿದಿದ್ದರು. ಸ್ಥಳೀಯರು ಈತನನ್ನು ಗಮನಿಸಿ ರಕ್ಷಣೆಗೆ ಮುಂದಾಗಿದ್ದರೂ, ದುರ್ಗಮ ಪ್ರದೇಶವಾದ ಕಾರಣ ರಕ್ಷಿಸಲು ಸಾಧ್ಯವಾಗಿರಲಿಲ್ಲ.
ಈ ಕುರಿತು ದಾಬಸ್ ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸಂಜೆ 7 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ತಕ್ಷಣ ಮಳೆ ಪ್ರಾರಂಭವಾಗಿದ್ದರಿಂದ ಮತ್ತು ಕತ್ತಲಾಗಿದ್ದರಿಂದ ರಕ್ಷಣಾ ಕಾರ್ಯಚರಣೆ ನಡೆಸಲು ಸಾಧ್ಯವಿಲ್ಲ ಎಂದು ಗುರುವಾರ ಬೆಳಗ್ಗಿನವರೆಗೂ ಕಾದಿದ್ದರು.
ಗುರುವಾರ 11 ಗಂಟೆ ಸುಮಾರಿಗೆ ಅಗ್ನಿ ಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ವಿಜಯ್ ಕುಮಾರ್ ಬಿದ್ದಿದ ಸ್ಥಳಕ್ಕೆ ತೆರಳಿದ್ದಾರೆ. ಆತನಿಗೆ ನೀರು ಕುಡಿಸಿ, ಪ್ರಥಮ ಚಿಕಿತ್ಸೆ ನೀಡಿದ್ದಾರೆ. ವಿಜಯ್ ಕುಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗುತ್ತಿದೆ.
ಬೆಂಗಳೂರು ಮತ್ತು ತುಮಕೂರು ಜಿಲ್ಲೆಯ ಎರಡು ಅಗ್ನಿ ಶಾಮಕ ದಳದ ತಂಡಗಳು ಮತ್ತು ದಾಬಸ್ ಪೇಟೆ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ, ವಿಜಯ್ ಕುಮಾರ್ ಜೀವ ಉಳಿಸಿದ್ದಾರೆ. ಬುಧವಾರ ರಾತ್ರಿಯಿಂದ ಬೆಟ್ಟದ ಬಳಿ ಕಾದಿದ್ದ ಆತನ ಸಂಬಂಧಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ದುರ್ಗಮ ಪ್ರದೇಶ : ಶಾಂತಲಾ ಡ್ರಾಪ್ ದುರ್ಗಮ ಪ್ರದೇಶವಾಗಿದೆ. ಅಲ್ಲಿಗೆ ತೆರಳಲು ಸರಿಯಾದ ಮಾರ್ಗಗಳಿಲ್ಲ. ಇಲ್ಲಿಗೆ ತಲುಪಲು ಹಲವು ಗಂಟೆಗಳ ಪ್ರಯಾಣ ಮಾಡಬೇಕು. ಬೆಟ್ಟದ ಪ್ರದೇಶದಲ್ಲಿ ಕರಡಿ, ಚಿರತೆ ಸೇರಿದಂತೆ ಅನೇಕ ಕಾಡುಪ್ರಾಣಿಗಳಿವೆ ಆದ್ದರಿಂದ ಕಾರ್ಯಾಚರಣೆ ವಿಳಂಬವಾಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications