ಸಿದ್ದರಾಮಯ್ಯ ಸರ್ಕಾರಕ್ಕೆ ಶತದಿನದ ಸಂಭ್ರಮ
ಬೆಂಗಳೂರು, ಆ.20 : ಒಂಭತ್ತು ವರ್ಷಗಳ ನಂತರ ಸಂಪೂರ್ಣ ಬಹುಮತದಿದಂದ ಅಧಿಕಾರ ಹಿಡಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮಂಗಳವಾರ ನೂರು ದಿನ ತುಂಬಿದೆ. ಆದರೆ, ಸಾಲು-ಸಾಲು ಚುನಾವಣೆ ನೀತಿ ಸಂಹಿತೆಗಳಿಂದಾಗಿ ನೂರರ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ ಮೇ 13ರ ಬಸವ ಜಯಂತಿ ದಿನದಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚಿಸಿತು. ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಿಕೊಂಡು ಆಡಳಿತಕ್ಕೆ ಚಾಲನೆ ನೀಡಿತು.

ನೂರು ದಿನಗಳ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸುವ ಕಾಂಗ್ರೆಸಿಗರ ಆಸೆಗೆ ಲೋಕಸಭೆ, ರಾಜ್ಯಸಭೆ ಮತ್ತು ವಿಧಾನಪರಿಷತ್ ಉಪ ಚುನಾವಣೆಗಳ ನೀತಿ ಸಂಹಿತೆ ಅಡ್ಡಗಾಲು ಹಾಕಿದೆ. ಈ ತಿಂಗಳ ಅಂತ್ಯದಲ್ಲಿ ಎಲ್ಲಾ ಚುನಾವಣೆಗಳು ಮುಗಿದ ಬಳಿಕ ಸಂಭ್ರಮಾಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ನೂರು ದಿನಗಳಿಗೊಮ್ಮೆ ಸರ್ಕಾರದ ಸಾಧನೆಯ ವರದಿ ಬಿಡುಗಡೆ ಮಾಡುತ್ತಿದ್ದರು. ಸಿದ್ದರಾಮಯ್ಯ ಸಹ ಇಂತಹ ವರದಿ ಬಿಡುಗಡೆ ಮಾಡುತ್ತಾರೋ? ಎಂದು ಕಾದು ನೋಡಬೇಕು.
ಟೀಕೆಗಳಿಗೆ ಗುರಿ : ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿಎಂ ಸಿದ್ದರಾಮಯ್ಯ ಅಗ್ಗದ ಮದ್ಯ, ಕೃಷ್ಣಮಠ ವಿವಾದ ಮುಂತಾದವುಗಳಿಂದ ಆರಂಭದಲ್ಲೇ ಟೀಕೆಗೆ ಗುರಿಯಾದರು. ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳನ್ನು ಜಾರಿಗೆ ತಂದರು.
ಮುಖ್ಯಮಂತ್ರಿಯಾಗಿ ಚೊಚ್ಚಲ ಬಜೆಟ್ ಮಂಡಿಸಿದರು. ಸಿಎಂ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಆರೋಪ ಕೇಳಿಬಂತು, ಸಮನ್ವಯ ಸಮಿತಿ ರಚನೆ ಮಾಡುವ ಪ್ರಸ್ತಾಪವೂ ಕೇಳಿ ಬಂದರೂ ಇದುವರೆಗೂ ಅದು ಅನುಷ್ಟಾನವಾಗಿಲ್ಲ.
ವಿಳಂಳವಾಗಿ ನಡೆದ ಒಂದು ಕ್ಷೇತ್ರದ ವಿಧಾನಸಭೆ ಚುನಾವಣೆ ಎದುರಿಸಿರುವ ಸಿದ್ದರಾಮಯ್ಯ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಸರ್ಕಾರ 101ನೇ ದಿನದಂದು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಲೋಕಸಭೆ ಉಪ ಚುನಾವಣೆ ಎದುರಿಸುತ್ತಿದ್ದಾರೆ.
ಆರಂಭ ಶೂರತ್ವ ಬಿಎಸ್ವೈ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಆರಂಭ ಶೂರತ್ವ ಅವರ ನೂರು ದಿನಗಳ ಸಾಧನೆ ಕಾಂಗ್ರೆಸ್ ಪಕ್ಷದವರಿಗೆ ತೃಪ್ತಿ ತಂದಿಲ್ಲ. ರಾಜ್ಯದ ಜನರಿಗೆ ತೃಪ್ತಿ ತಂದಿರುತ್ತದೆಯೇ? ಎಂದು ಮಾಜಿ ಸಿಎಂ ಮತ್ತು ಕೆಜೆಪಿ ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಹೊಸ-ಹೊಸ ಯೋಜನೆಗಳನ್ನು ಘೋಷಿಸಿದ ಸಿದ್ದರಾಮಯ್ಯ ಅವುಗಳನ್ನು ಜನರಿಗೆ ತಲುಪಿಸಲು ವಿಫಲರಾಗಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು. ಹಾಲಿನ ಸಬ್ಸಿಡಿ ಮೊತ್ತ ಏರಿಕೆ ಮಾಡಿರುವುದು ಅರ್ಹರಿಗೆ ತಲುಪಿಲ್ಲ ಎಂದು ಅವರು ದೂರಿದರು.
ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರ ತನ್ನ ನೂರನೇ ದಿನವನ್ನು ಪೂರೈಸಿದೆ. ಸರ್ಕಾರದ ಸಾಧನೆ ಏನು? ಎಂಬುದು ಮತ ನೀಡಿದ ಜನರಿಗೆ ಅರಿವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಎಂತಹ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ ಎಂದು ಕಾದು ನೋಡಬೇಕು.












Click it and Unblock the Notifications