ಬಿಎಸ್ವೈ ಇಂದು ಬಿಜೆಪಿಗೆ? ಅಡ್ವಾಣಿಗೆ ಮತ್ತೊಂದು ಹಿನ್ನಡೆ
ಬೆಂಗಳೂರು, ಜುಲೈ9: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಬಿಡುವಾಗ ಇಗೋ ಬಿಟ್ಟೆ, ಅಗೋ ಬಿಟ್ಟೆ ಎನ್ನುತ್ತಾ ಸುಮಾರು ಸಮಯವನ್ನು ತಳ್ಳಿದ್ದರು. ಈಗಲೂ ಅಷ್ಟೆ ಅವರು ಬಿಜೆಪಿ ಮರು ಎಂಟ್ರಿ ಕೊಡಬೇಕು. ಆದರೆ ಇಂದು ಅಥವಾ ನಾಳೆ ಬಿಎಸ್ವೈ ಪಕ್ಷ ಸೇರ್ಪಡೆಯಾಗುವುದು ನಿಶ್ಚಿತ ಎಂಬ ಮಾತುಗಳೇ ಕೇಳಿ ಬರುತ್ತಿವೆ.
ಆದರೆ ಇಂದು ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಮಹತ್ವದ ಸಭೆ ನಡೆಯಲಿದ್ದು, ಬಹುತೇಕ ಇಂದೇ ಬಿಜೆಪಿ ಮರು ಎಂಟ್ರಿ ವಿಷಯ ಇತ್ಯರ್ಥವಾಗುವ ಲಕ್ಷಣಗಳಿವೆ. ಮತ್ತು ಬಲ್ಲ ಮೂಲಗಳ ಪ್ರಕಾರ ಅಡ್ವಾಣಿ ವಿರೋಧದ ನಡುವೆಯೂ ಯಡಿಯೂರಪ್ಪ ಬಿಜೆಪಿಗೆ ಮರಳುವುದು ಖಚಿತವಾಗಿದೆ.
ಈ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಗೆ ತುರ್ತು ಬುಲಾವ್ ನೀಡಿದ್ದು, ಸೋಮವಾರ ರಾತ್ರಿಯೇ ಜೋಶಿ ದೆಹಲಿ ತಲುಪಿಕೊಂಡಿದ್ದಾರೆ.
ಯಡಿಯೂರಪ್ಪ ಎಲ್ಲಿ?: ಈ ಮಧ್ಯೆ, ಗೋವಾದಲ್ಲಿ ತಂಗಿದ್ದ ಯಡಿಯೂರಪ್ಪ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದು, ಸೋಮವಾರ ಬೆಂಗಳೂರಿಗೆ ವಾಪಸಾಗಿದ್ದಾರೆ.

ಇಂದು Final Call:
ಇಂದು ಮೊದಲು ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ನಾಯಕರ ಸಭೆ ನಡೆಯಲಿದೆ. ಅದರಲ್ಲಿ ಬಿಎಸ್ವೈ ವಿಷಯಕ್ಕೆ ಅಂತಿಮ ರೂಪುನೀಡಿದ ಮೇಲೆ ಹಿರಿಯ ನಾಯಕ ಅಡ್ವಾಣಿ ಅವರನ್ನು ರಾಜ್ಯ ಮತ್ತು ರಾಷ್ಟ್ರಾಧ್ಯಕ್ಷರುಗಳು ಖುದ್ದಾಗಿ ಭೇಟಿ ಮಾಡಿ, ವಸ್ತು ಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು, ಫೈನಲ್ ಕಾಲ್ ತೆಗೆದುಕೊಳ್ಳುವ ಅಂದಾಜಿದೆ.

ಯಡಿಯೂರಪ್ಪ ಎಲ್ಲಿ ?
ಈ ಪೂರಕ ಬೆಳವಣಿಗೆಗಳ ಫಲವಾಗಿ, ವಿಶ್ರಾಂತಿಗೆಂದು ನಾಲ್ಕು ದಿನಗಳ ಕಾಲ ಶನಿವಾರ ಗೋವಾಕ್ಕೆ ತೆರಳಿದ್ದ ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಸಂಜೆ ಬೆಂಗಳೂರಿಗೆ ವಾಪಸಾಗಿದ್ದಾರೆ.

ಗೋವಾದಲ್ಲಿ ಶೋಭಾ ಜತೆ ಯಡಿಯೂರಪ್ಪ
ಗೋವಾದಲ್ಲಿ ತಂಗಿದ್ದ ಯಡಿಯೂರಪ್ಪ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಸೇರಿದಂತೆ ಕೆಲ ಕೆಜೆಪಿ ನಾಯುಕರು, ಬಿಜೆಪಿ ಸೇರ್ಪಡೆಯ ಕುರಿತು ಮಾತುಕತೆ ನಡೆಸಲು ಗೋವಾಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಅವರು ಮಡಗಾಂವ್ ಸಮೀಪದ 'ಲೀಲಾ ಸ್ಟಾರ್ ಹೊಟೇಲ್'ನಲ್ಲಿ ತಂಗಿದ್ದರು. ಭಾನುವಾರ ಇಲ್ಲಿಯ ಮಾರ್ದೋಳದಲ್ಲಿನ ಮಹಾಲಸಾ ನಾರಾಯುಣಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂಪ್ಪನವರೊಂದಿಗೆ ಗೋವಾ ರಾಜ್ಯದ ಸ್ಥಳೀಯ ಬಿಜೆಪಿ ಧುರೀಣರಾದ ಉದಯ್ ದನಗೈ, ಶರ್ಮದ ರಾಮತೂರಕರ, ದುರ್ಗಾದಾಸ ಕಾಮತ ಸೇರಿದಂತೆ ಹಲವರು ಮಾತುಕತೆ ನಡೆಸಿದ್ದಾರೆ ಎಂದೂ ತಿಳಿದುಬಂದಿದೆ.

ದೆಹಲಿಯಲ್ಲಿ ಇಂದಿನ ಕಾರ್ಯಕ್ರಮಗಳು ಹೀಗಿವೆ:
ಬೆಳಗ್ಗೆ 10ಕ್ಕೆ ಚಂದ್ರೇಗೌಡರ ಮನೆಯಲ್ಲಿ ಯಡಿಯೂರಪ್ಪ ಆಪ್ತರ ಸಭೆ. ಸಂಜೆ ಅರುಣ್ ಜೇಟ್ಲಿ ಜತೆ ರಾಜ್ಯ ನಾಯಕರ ಸಭೆ. ಆನಂತರ ಅನಂತ ಕುಮಾರ್ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆ. ಗಮನಾರ್ಹವೆಂದರೆ ಯಡಿಯೂರಪ್ಪ ಮರುಸೇರ್ಪಡೆಗೆ ಒಲವು ತೋರಿರುವ ಸದಾನಂದ ಗೌಡ ಮತ್ತು ಚಂದ್ರೇಗೌಡರ ಅನುಪಸ್ಥಿತಿಯಲ್ಲಿ ಈ ಸಭೆ ನಡೆಯಲಿದೆ.

ದೆಹಲಿಯಲ್ಲಿರುವ ಯಡಿಯೂರಪ್ಪ ಆಪ್ತರು ಯಾರು?
ದೆಹಲಿಯಲ್ಲಿ ಪ್ರಸ್ತುತ ಯಡಿಯೂರಪ್ಪ ಆಪ್ತರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ನಾಯಕರು: ಚಂದ್ರೇಗೌಡ, ಸದಾನಂದ ಗೌಡ, ಜನಾರ್ದನ ಸ್ವಾಮಿ, ಬಸವರಾಜ ಬೊಮ್ಮಾಯಿ, ಬೋಪಯ್ಯ, ಅರವಿಂದ ಲಿಂಬಾವಳಿ, ನಿರಾಣಿ, ಶಿವರಾಮನ ಗೌಡ, ಸಿದ್ದೇಶ್, ರಮೇಶ್ ಕತ್ತಿ.

ಅಡ್ವಾಣಿಗೆ ಮತ್ತೊಂದು ಹಿನ್ನಡೆ
ಬಿಜೆಪಿ ಭೀಷ್ಮ ಪಿತಾಮಹ ಎಲ್ ಕೆ ಅಡ್ವಾಣಿ ತೀರಾ ಇತ್ತೀಚೆಗೆ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ವಿಚಾರದಲ್ಲಿ ಅಪಸ್ವರವೆತ್ತಿದ್ದರು. ಆದರೂ ಮೋದಿ ನೇಮಕ ಅಂತಿಮವಾಯ್ತು. ಈಗ ಅದೇ ಮೋದಿ ಸೂಚನೆಯ ಮೇರೆಗೆ ಅಡ್ವಾಣಿ ಅವರ ವಿರೋಧಿ ಯಡಿಯೂರಪ್ಪ ಬಿಜೆಪಿಗೆ ಮರಳುವುದಕ್ಕೆ ವೇದಿಕೆ ಸಿದ್ಧವಾಗಿದ್ದು, ಇಂದೋ/ ನಾಳೆಯೋ ಎಂಬಂತೆ ಅವರು ಪಕ್ಷಕ್ಕೆ ವಾಪಸಾಗುವುದು ಖಚಿತವಾಗಿದೆ. ಹಾಗಾದಲ್ಲಿ ಅಡ್ವಾಣಿಗೆ ಇದರಿಂದ ಮತ್ತೊಂದು ಹಿನ್ನಡೆ ಎಂದೇ ರಾಜಕೀಯವಾಗಿ ವಿಶ್ಲೇಷಿಸಬಹುದು.












Click it and Unblock the Notifications