ಜನರಿಗೆ ಮತ್ತೆ ಕರೆಂಟ್ ಶಾಕ್, ಹೆಚ್ಚಾಗಲಿದೆ ದರ
ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ.ಚಿದರಂಬರಂ ನೇತೃತ್ವದಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ, ವಿದ್ಯುತ್ ದರ ಹೆಚ್ಚಳ ಮಾಡಲು ಅನುಮತಿ ನೀಡಿದೆ. ಈ ಕುರಿತು ಪಿ.ಚಿದಂಬರಂ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನಿರ್ಧಾರ ಜುಲೈ ಮೊದಲ ವಾರದೊಳಗೆ ಜಾರಿಗೆ ಬರಲಿದೆ. ಕೇಂದ್ರದ ಆದೇಶದಂತೆ, ರಾಜ್ಯ ಸರ್ಕಾರಗಳು ವಿದ್ಯುತ್ ಪರಿಷ್ಕೃತ ದರ ಪ್ರಕಟಿಸಲಿವೆ. ನಂತರ ವಿದ್ಯುತ್ ದರ ಎಷ್ಟು ಹೆಚ್ಚಾಗಲಿದೆ ಎಂದು ತಿಳಿಯಲಿದೆ. ಪ್ರತಿ ಯೂನಿಟ್ ಗೆ 15ರಿಂದ 17 ಪೈಸೆ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.
ಹೆಚ್ಚಳ ಏಕೆ : ಕಲ್ಲಿದ್ದಿಲಿನಿಂದ ವಿದ್ಯುತ್ ತಯಾರಿಸುವ ರಾಜ್ಯಗಳು ನೇರವಾಗಿ ಕಲ್ಲಿದ್ದಲು ಆಮದು ಮಾಡಿಕೊಳ್ಳಬೇಕು. ಇಲ್ಲವೇ ಭಾರತೀಯ ಕಲ್ಲಿದ್ದಲು ಸಂಸ್ಥೆಯ ಮೂಲಕ ಆಮದು ಮಾಡಿಕೊಳ್ಳಬೇಕು. ಈ ಆಮದು ಕಲ್ಲಿದ್ದಲಿಗೆ ತಗಲುವ ಹೆಚ್ಚುವರಿ ಬೆಲೆಯನ್ನು ಗ್ರಾಹಕರ ಮೇಲೆ ಹಾಕಲು ನಿರ್ಧರಿಸಲಾಗಿದೆ.
ಪ್ರತಿ ಯೂನಿಟ್ ಗೆ ವಿದ್ಯುತ್ಗೆ ಉತ್ಪಾದನಾ ವೆಚ್ಚದ ಆಧಾರದಲ್ಲಿ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ರಾಜ್ಯ ಸರ್ಕಾರಗಳು, ವಿದ್ಯುತ್ ದರ ಎಷ್ಟಾಗಬೇಕು ಎಂದು ನಿರ್ಧರಿಸಲಿವೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ವಿದ್ಯುತ್ ಉತ್ಪಾದನೆ : ಪ್ರತಿ ರಾಜ್ಯಗಳಲ್ಲಿಯೂ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡುವುದು ಅನಿವಾರ್ಯವಾಗಿದೆ. ಹೆಚ್ಚಿನ ಕಲ್ಲಿದ್ದಲನ್ನು ರಾಜ್ಯಗಳು ಆಮದು ಮಾಡಿಕೊಂಡು, ವಿದ್ಯುತ್ ಉತ್ಪಾದಿಸಲಿವೆ. (ಹೊಸ ಸರ್ಕಾರ ಬರುವ ಮೊದಲೇ ಕರೆಂಟ್ ಶಾಕ್)
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಅಂದರೆ, ಮೇ 6ರಂದು ವಿದ್ಯುತ್ ದರ ಹೆಚ್ಚಿಸಲಾಗಿತ್ತು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ದರ ಹೆಚ್ಚಿಸಿತ್ತು. ಸದ್ಯ ಬಸ್ ಪ್ರಯಾಣದರ ಹೆಚ್ಚಿಸಿರುವ ರಾಜ್ಯ ಸರ್ಕಾರ ವಿದ್ಯುತ್ ಎಷ್ಟು ಹೆಚ್ಚಿಸಲಿದೆ ಎಂದು ಕಾದು ನೋಡಬೇಕು.