ಬೆಂಗಳೂರಿಗೆ ದೊರೆಯಲಿದೆ ವೈಮಾನಿಕ ಭದ್ರತೆ!
ಸುರಕ್ಷಿತ ನಗರ ಯೋಜನೆಯಡಿ ನಗರದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಉತ್ಕೃಷ್ಟ ದರ್ಜೆಯ ಕ್ಯಾಮೆರಾ, ಸೆನ್ಸರ್ ಹಾಗೂ ಸರ್ವೇಕ್ಷಣಾ ಉಪಕರಣಗಳನ್ನು ಹೊಂದಿರುವ ಹೆಲಿಕಾಪ್ಟರ್, ಮಾನವರಹಿತ ವೈಮಾನಿಕ ನೌಕೆಗಳನ್ನು ನಗರದ ಭದ್ರತೆಗಾಗಿ ನಿಯೋಜಿಸಲಾಗುತ್ತದೆ.
ಈ ಕುರಿತು ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿ ಸಿದ್ಧಪಡಿಸಿದೆ ಮತ್ತು ಕಾನೂನು - ಸುವ್ಯವಸ್ಥೆ ಮತ್ತು ಅಪರಾಧ ಸಂಬಂಧಿ ಚಟುವಟಿಕೆಗಳನ್ನು ತಡೆಯಲು ಇದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದೆ. ಭದ್ರತೆಗೆ ಮಾನವರಹಿತ ವೈಮಾನಿಕ ನೌಕೆ, ಹೆಲಿಕಾಪ್ಟರ್ ಮುಂತಾದವುಗಳನ್ನು ಬಳಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಯಾವ ನಗರಗಳು : ದೇಶದ ಏಳು ಪ್ರಮುಖ ನಗರಗಳಲ್ಲಿ ವೈಮಾನಿಕ ಭದ್ರತೆ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಕೇಂದ್ರ ಚಿಂತನೆ ನಡೆಸಿದೆ. ಅದರಂತೆ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಹೈದರಾಬಾದ್ ಹಾಗೂ ಅಹಮದಾಬಾದ್ ನಗರಗಳನ್ನು ಆಯ್ಕೆ ಮಾಡಿದೆ.
ಆಧುನಿಕ ಉಪಕರಣಗಳು : ವೈಮಾನಿಕವಾಗಿ ಸಂಗ್ರಹಿಸಲಾಗುವ ವೀಡಿಯೋ, ಆಡಿಯೋ, ಅಕ್ಷರಗಳ ಮಾಹಿತಿಯನ್ನು ಕಮಾಂಡ್ ಕಂಟ್ರೋಲ್ ಕೇಂದ್ರಕ್ಕೆ ಕಳುಹಿಸಿ, ಮುನ್ನೆಚ್ಚರಿಕೆಯಾಗಿ ಅಥವಾ ಅಪರಾಧ ಕೃತ್ಯಗಳು ನಡೆದ ಬಳಿಕ ಸಾಕ್ಷಿಯಾಗಿ ಬಳಸಿಕೊಳ್ಳಬಹುದು.(ಮಹಾನಗರಗಳಿಗೆ ಬರಲಿದ್ದಾರೆ ಮುನ್ಸಿಪಲ್ ಪೊಲೀಸ್)
ಇದಕ್ಕಾಗಿ ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಳ್ಳಬೇಕು ಎಂದು ಕೇಂದ್ರ ಹೇಳಿದೆ. ಇಷ್ಟು ಮಾತ್ರವಲ್ಲದೇ, ನಗರ ಪ್ರದೇಶಗಳಲ್ಲಿ ಸಿಸಿ ಟಿವಿಗಳ ಜಾಲವನ್ನು ಸೃಷ್ಟಿಸುವುದು ಕಡ್ಡಾಯ ಎಂದು ಕೇಂದ್ರ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.