ಆನೆ ಹಾವಳಿ : ಹುಸ್ಕೂರಿಗೆ ಬಂದಿದೆ ಗಜಪಡೆ
ಭಾನುವಾರ ರಾತ್ರಿ ಆನೇಕಲ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಆನೆಗಳು ಸೋಮವಾರ ಬೆಳಗ್ಗೆ ಹುಸ್ಕೂರು ಬಳಿ ಪ್ರತ್ಯಕ್ಷವಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಜನರನ್ನು ಚದುರಿಸಿ ಆನೆಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಸೋಮವಾರ ಸಂಜೆಯವರೆಗೂ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ.
ಸೋಮವಾರ ಶ್ಯಾಮ್ ಎನ್ನುವ ವ್ಯಕ್ತಿಯ ಮೇಲೆ ಗಜಪಡೆಗಳು ದಾಳಿ ನಡೆಸಿದ್ದು, ಗಾಯಗೊಂಡಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜನರಿಗೆ ಮನೆಗಳಿಗೆ ತೆರಳಿ, ಆನೆಗಳು ಇರುವ ಕಡೆ ಬರಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ. ಆನೆಗಳನ್ನು ಬನ್ನೇರುಘಟ್ಟ ಕಾಡಿಗೆ ಕಳುಹಿಸಲು ಇಲಾಖೆ ಆಲೋಚಿಸುತ್ತಿದೆ.
ಸಚಿವರ ಮನವಿ : ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪೋಲೀಸ್ ಇಲಾಖೆಯವರು ಸಹಕಾರ ನೀಡುತ್ತಿದ್ದು, ಆನೆಗಳನ್ನು ಕಾಡಿಗೆ ಮರಳಿ ಕಳುಹಿಸಲು ಕಾರ್ಯಾಚರಣೆ ಮುಂದುವರೆಸಿದ್ದಾರೆ. ಸಾರ್ವಜನಿಕರು ಗುಂಪು ಗುಂಪಾಗಿ ಆನೆಗಳ ಹಿಂಡಿನ ಹತ್ತಿರ ಹೋಗದಂತೆ ಹಾಗೂ ಅವುಗಳನ್ನು ಕೆಣಕದಂತೆ ಅರಣ್ಯ ಸಚಿವ ರಮಾನಾಥ್ ರೈ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.
ಮಡಿಕೇರಿಯಿಂದ ಹೊರಟ ಅರ್ಜುನ : ಕಾಡು ಆನೆಗಳನ್ನು ಪಳಗಿಸಲು ಮಡಿಕೇರಿ ಆನೆ ಶಿಬಿರದಿಂದ ದಸರಾ ಆನೆಗಳಾದ ಅರ್ಜುನ ಮತ್ತು ಅಭಿಮನ್ಯುವನ್ನು ಕರೆಸಲಾಗುತ್ತಿದೆ. ಮಡಿಕೇರಿಯಿಂದ ಆನೆಗಳು ಹೊರಟಿದ್ದು, ಮಧ್ಯಾಹ್ನದ ವೇಳೆಗೆ ಹೊಸಕೋಟೆಗೆ ಆಗಮಿಸುವ ನಿರೀಕ್ಷೆ ಇದೆ.
ಆನೆಗಳಿಗೆ ಗಡಿ ಇಲ್ಲ : ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವನ್ಯಜೀವಿ ತಜ್ಞರಾದ ನಿಶಾಂತ್ ಆನೆಗಳಿಗೆ ಗಡಿ ಎಂಬುದು ಇಲ್ಲ. ಆಹಾರ ಮತ್ತು ನೀರು ಅರಸಿ ಅವುಗಳು ಗುಂಪು ಗುಂಪುಗಳಾಗಿ ಸಂಚರಿಸುತ್ತವೆ. ಜನರು ಹತ್ತಿರ ಹೋದರೆ ಗಾಬರಿಯಿಂದ ಅವರ ಮೇಲೆ ದಾಳಿ ನಡೆಸುತ್ತವೆ ಎಂದು ಹೇಳಿದ್ದಾರೆ.
ಆನೆಗಳಿಗೆ ಬಂದ ಸ್ಥಳದಿಂದ ಹಿಂದಿರುಗುತ್ತವೆ. ಆದರೆ, ಜನರು ಗುಂಪುಗೂಡಿ ಅವುಗಳನ್ನು ಗಾಬರಿ ಪಡಿಸಿದರೆ ಎತ್ತ ಹೋಗಲು ತಿಳಿಯದೆ ಜಾಗ ಸಿಕ್ಕ ಸ್ಥಳಗಳಿಗೆ ನುಗ್ಗುತ್ತವೆ. ಜನರು ಅವುಗಳಿಗೆ ಮರಳಲು ಸ್ಥಳವಕಾಶ ಮಾಡಿಕೊಡಬೇಕು ಎಂದು ನಿಶಾಂತ್ ಮನವಿ ಮಾಡಿದ್ದಾರೆ.