ಕೊಯಮತ್ತೂರು ಅಗ್ನಿ ದುರಂತಕ್ಕೆ 4 ಮಹಿಳೆ ಬಲಿ
ಕೊಯಮತ್ತೂರು, ಏ. 25 : ಬೆಂಗಳೂರಿನ ಕಾರ್ಲಟನ್ ಸೆಂಟರ್ನಲ್ಲಿ 2010ರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತವನ್ನು ನೆನಪಿಸುವಂತೆ ಅಗ್ನಿ ಅನಾಹುತ ಕೊಯಮತ್ತೂರಿನಲ್ಲಿ ಗುರುವಾರ ಬೆಳಗ್ಗೆ ಜರುಗಿದೆ. ಈ ಅನಾಹುತದಲ್ಲಿ ನಾಲ್ವರು ಮಹಿಳೆಯರು ಸಜೀವವಾಗಿ ದಹನವಾಗಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾರೆ.
ಅವನಾಶಿ ರಸ್ತೆಯಲ್ಲಿರುವ ಲಕ್ಷ್ಮಿ ಮಿಲ್ಸ್ ಜಂಕ್ಷನ್ ಬಳಿಯಿರುವ ವಿಘ್ನೇಶ್ವರ ಕ್ರೆಸ್ಟಾ ವಾಣಿಜ್ಯ ಕಟ್ಟಡದ ಮೂರನೇ ಮಹಡಿಯಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಸ್ವಾಗತಕಾರ್ತಿ ಆಗಿರುವ ಕೀರ್ತನಾ (22), ವಿಜಯಲಕ್ಷ್ಮಿ (50), ಮಾರ್ಗರೆಟ್ ಮೇರಿ (55) - (ಇವರಿಬ್ಬರೂ ಹೌಸ್ ಕೀಪಿಂಗ್ ಸ್ಟಾಫ್ ಆಗಿದ್ದಾರೆ) ಎಂದು ಗುರುತಿಸಲಾಗಿದ್ದು, ನಾಲ್ಕನೆ ಮಹಿಳೆಯ ಗುರುತು ಸಿಕ್ಕಿಲ್ಲ. ಎಲ್ಲರೂ ಬ್ಯಾಂಕ್ ಉದ್ಯೋಗಿಗಳಾಗಿದ್ದಾರೆ.

ತಪ್ಪಿಸಿಕೊಳ್ಳಲೆಂದು ಮೂರನೇ ಮಹಡಿಯ ಮೇಲಿಂದ ಜಿಗಿದ ಇಬ್ಬರು ಮಹಿಳೆಯರು ಮೂಳೆ ಮುರಿತಕ್ಕೆ ಒಳಗಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆಯಲ್ಲಿ ಇವರಿಬ್ಬರು ಮಹಿಳೆಯರು ಸೇರಿದಂತೆ ಒಂಬತ್ತು ಜನರು ಗಾಯಗೊಂಡಿದ್ದಾರೆ. ಅವರಿಗೆ ಹೊರರೋಗಿಗಳೆಂದು ಪರಿಗಣಿಸಿ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳನ್ನು ರಕ್ಷಿಸುವಾಗ ಇಬ್ಬರು ರಕ್ಷಣಾ ಸಿಬ್ಬಂದಿಗಳು ಕೂಡ ಗಾಯಗೊಂಡಿದ್ದಾರೆ.
ಬೆಳಿಗ್ಗೆ 9.25ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅನಾಹುತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಕಟ್ಟಡದಲ್ಲಿ ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಲೊಂಬಾರ್ಡ್, ಶೇರ್ ಖಾನ್ ಮುಂತಾದ ಕಚೇರಿಗಳಿದ್ದು, ಫಾಲ್ಸ್ ಸೀಲಿಂಗಿಗೆ ಬಳಸಲಾದ ಥರ್ಮೋಕಾಲ್ನಿಂದಾಗಿ ಬೆಂಕಿ ಶೀಘ್ರವಾಗಿ ವ್ಯಾಪಿಸಿಕೊಂಡಿದೆ ಮತ್ತು ರಕ್ಷಣಾಕಾರ್ಯಕ್ಕೆ ಅಡ್ಡಿಯಾಯಿತು ಎಂದು ಅಗ್ನಿಶಾಮಕ ಸಿಬ್ಬಂದಿಗಳು ಹೇಳಿದ್ದಾರೆ. ಕಟ್ಟಡದಿಂದ ಹೊರಹೋಗಲು ಸುರಕ್ಷಿತ ಮಾರ್ಗ ಇರಲಿಲ್ಲ ಎಂದು ಹೇಳಲಾಗಿದೆ.
ಬೆಂಗಳೂರಿನ ಹಳೆ ಏರ್ಪೋರ್ಟ್ ರಸ್ತೆಯಲ್ಲಿರುವ ಕಾರ್ಲಟನ್ ಸೆಂಟರ್ನಲ್ಲಿ ಫೆಬ್ರವರಿ 23, 2010ರಂದು ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ 9 ಜನರು ಅಸುನೀಗಿದ್ದರು. ಅಲ್ಲಿ ಕೂಡ ಅಗ್ನಿ ಅನಾಹುತದಂಥ ದುರ್ಘಟನೆಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ತೆಗೆದುಕೊಳ್ಳದಿದ್ದರಿಂದ ಅನಾಹುತ ಸಂಭವಿಸಿತ್ತು. ಅಂಥದೇ ಘಟನೆಗೆ ಕೊಯಮತ್ತೂರು ಇಂದು ಸಾಕ್ಷಿಯಾಗಿದೆ.












Click it and Unblock the Notifications