ಸಂಗೀತ ಸಾಗರ ಲಾಲ್ಗುಡಿ ಜಯರಾಮನ್ ಸ್ಮರಣೆ
ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಸಂಗೀತಾಭಿಮಾನಿಗಳನ್ನು ಲಾಲ್ಗುಡಿ ಅಗಲಿದ್ದಾರೆ. 12ನೇ ವಯಸ್ಸಿನಲ್ಲೇ ಸಂಗೀತಾಭ್ಯಾಸ ಆರಂಭಿಸಿದ ಲಾಲ್ಗುಡಿ ತೆಲುಗು, ತಮಿಳು, ಕನ್ನಡ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಅತ್ಯುತ್ತಮ ಸಂಗೀತ ಸಂಯೋಜಕರಾಗಿ ಹೆಸರು ಮಾಡಿದ್ದರು.
ಲಾಲ್ಗುಡಿ ಅವರಿಗೆ 1972ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮಭೂಷಣ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು. ಚೌಡಯ್ಯ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ, ಸಂಗೀತ ಕಲಾನಿಧಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿದೆ. ಲಾಲ್ಗುಡಿ ಅವರ ಪುತ್ರ ಲಾಲ್ಗುಡಿ ಜಿ.ಜೆ.ಆರ್. ಕೃಷ್ಣನ್ ಹಾಗೂ ಪುತ್ರಿ ಲಾಲ್ಗುಡಿ ವಿಜಯಲಕ್ಷ್ಮಿ ಕೂಡ ಪ್ರತಿಭಾವಂತ ಪಿಟೀಲು ವಾದಕರು. ಜೊತೆಗೆ ಜಯರಾಮನ್ ಅವರು ಶಿಷ್ಯ ಪಡೆಯನ್ನು ಬೆಳೆಸಿದ್ದಾರೆ.
ಸಂಗೀತ ಪ್ರಿಯರಿಂದ 'ಕರ್ನಾಟಕಿ ಸಂಗೀತ ಸಾಗರ' ಎಂದೇ ಕರೆಯಿಸಿಕೊಳ್ಳುತ್ತಿದ್ದ ಜಯರಾಮನ್, ಪಿಟೀಲು ವಾದನ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಹಾಗೂ ವಾಗ್ಗೇಯಕಾರರಾಗಿದ್ದರು. ತಮಿಳು, ತೆಲುಗು, ಕನ್ನಡ ಹಾಗೂ ಸಂಸ್ಕೃತದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಸಂಗೀತದ ಜೊತೆಗೆ ಭರತನಾಟ್ಯಕ್ಕೆ ತಮ್ಮದೇ ಆದ ಆಯಾಮ ನೀಡಿದ ಜಯರಾಮನ್, ಅಪೂರ್ವ ತಿಲ್ಲಾನಗಳು ಹಾಗೂ ವರ್ಣಗಳ ಬಹುದೊಡ್ಡ ಕೊಡುಗೆ ನೀಡಿದ್ದಾರೆ.
ವೀಣೆಗೆ ಶೇಷಣ್ಣ ಹಾಗೂ ಕೊಳಲಿಗೆ ಚೌರಾಸಿಯಾ, ನಮ್ಮಲ್ಲಿ ಪಿಟೀಲು ಚೌಡಯ್ಯ ಇದ್ದಂತೆ LGJ ಲಾಲ್ಗುಡಿ ಜಯರಾಮನ್ ಪಿಟೀಲು ವಾದನ ಎಂದರೆ ಸಂಗೀತಪ್ರಿಯರಿಗೆ ರಸದೌತಣ.
ಜಯರಾಮನ್ ಅವರು ತಿರುಚನಾಪಳ್ಳಿ ಜಿಲ್ಲೆಯ ಲಾಲ್ಗುಡಿ ಬಳಿಯ ಇದತುಮಗಲಂನಲ್ಲಿ 1930ರ ಸೆಪ್ಟೆಂಬರ್ 17ರಂದು ಜನಿಸಿದರು. ಸಂಗೀತ ಮನೆತನವಾದ್ದರಿಂದ ಚಿಕ್ಕಂದಿನಿಂದಲೇ ಸಂಗೀತದತ್ತ ಆಸಕ್ತಿ ಬೆಳೆದಿತ್ತು. ಜಯರಾಮನ್ ಅವರ ತಂದೆ ವಿ.ಆರ್. ಗೋಪಾಲ್ ಅಯ್ಯರ್ ಅವರು ಸಂಗೀತ ಸಂತ ತ್ಯಾಗರಾಜ ಅವರ ಶಿಷ್ಯ ಪರಂಪರೆಯಲ್ಲಿ ಬಂದವರು. ಮಗನಿಗೂ ಅದನ್ನು ಧಾರೆ ಎರೆದರು.
ಚೆಂಬೈ ವೈದ್ಯನಾಥ್ ಭಾಗವತರ್ ಹಾಗೂ ಶೆಮ್ಮಂಗುಡಿ ಶ್ರೀನಿವಾಸ್ ಅಯ್ಯರ್ ಅವರೊಂದಿಗೆ ಕಛೇರಿಯಲ್ಲಿ ಕಾಣಿಸಿಕೊಂಡು ಸಂಗೀತಲೋಕದಲ್ಲಿ ಹೊಸ ಪ್ರತಿಭೆಯಾಗಿ ಬೆಳೆದರು. ಜಯರಾಮನ್ ಅವರು ಯಾವತ್ತೂ ಮಹಿಳಾ ಕಲಾವಿದರಿಗಾಗಿ ವಯಲಿನ್ ನುಡಿಸಿಲ್ಲ. ಈ ವಿಚಾರದಲ್ಲಿ ಅವರು ತಂದೆ ದಿ. ವಿ.ಆರ್. ಗೋಪಾಲ ಅಯ್ಯರ್ ಅವರ ಸಿದ್ಧಾಂತವನ್ನು ಪಾಲಿಸಿಕೊಂಡು ಬಂದಿದ್ದರು.