ಹೆಲಿಕಾಪ್ಟರ್ ಹಗರಣ: ತ್ಯಾಗಿ ಬ್ಯಾಂಕ್ ಖಾತೆ ಜಪ್ತಿ
ಸುಮಾರು 3600 ಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ ಭಾರತೀಯ ವಾಯುಸೇನೆ ನಿವೃತ್ತ ಮುಖ್ಯಸ್ಥ ಎಸ್.ಪಿ.ತ್ಯಾಗಿ ಹಾಗೂ ಕೇಂದ್ರ ಮಾಜಿ ಸಚಿವ ಸಂತೋಷ್ ಬಗ್ರೊಡಿಯಾ ಅವರ ಸಹೋದರ ಸತೀಶ್ ಬಗ್ರೊಡಿಯಾ ಸೇರಿದಂತೆ 12 ಜನರ ವಿರುದ್ಧ ಸಿಬಿಐ ಬುಧವಾರ(ಮಾ.13) ಎಫ್ಐಆರ್ ದಾಖಲಿಸಲಾಗಿತ್ತು.
ಎಫ್ಐಆರ್ನಲ್ಲಿರುವ ಎಲ್ಲ ಆರೋಪಿಗಳ ಬ್ಯಾಂಕ್ ಖಾತೆಯನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ವಿವಿಐಪಿ ಕಾಪ್ಟರ್ ಖರೀದಿಯಲ್ಲಿ 3,600 ಕೋಟಿ ರುಪಾಯಿ ಕಿಕ್ಬ್ಯಾಕ್ ಪಡೆದಿರುವ ಆರೋಪ ಎದುರಿಸುತ್ತಿರುವ ತ್ಯಾಗಿ ಹಾಗೂ ಅವರ ಸಹೋದರ ಸಂಜೀವ್ ಅಲಿಯಾಸ್ ಜುಲೀ, ರಾಜೀವ್ ಮತ್ತು ಸಂದೀಪ್ ಅವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇತರೆ ಆರೋಪಿಗಳಾದ ಮಾಜಿ ಕೇಂದ್ರ ಸಚಿವ ಸಂತೋಷ್ ಬಗ್ರೋಡಿಯಾ ಅವರ ಸಹೋದರ ಹಾಗೂ ಐಡಿಎಸ್ ಇನ್ಫೊಟೆಕ್ ಅಧ್ಯಕ್ಷ ಸತೀಶ್ ಬಗ್ರೋಡಿಯಾ, ಐಡಿಎಸ್ ಇನ್ಫೊಟೆಕ್ನ ಎಂಡಿ ಪ್ರತಾಪ್ ಅಗರವಾಲ್, ಏರೋಮ್ಯಾಟ್ರಿಕ್ಸ್ ಸಿಇಒ ಪ್ರವೀನ್ ಬಕ್ಸಿ ಮತ್ತು ಕಾನೂನು ಸಲಹೆಗಾರ ಗೌತಮ್ ಖೈತಾನ್ ಅವರ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಸ್ ಪಿ ತ್ಯಾಗಿ ಅವರ ನವದೆಹಲಿ ಹಾಗೂ ಚಂಡೀಗಢದ ನಿವಾಸದ ಮೇಲೆ ಸಿಬಿಐ ತಂಡ ದಾಳಿ ನಡೆಸಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ನಿಮ್ಮ ಪಾತ್ರವೇನು? ಎಂದು ಪ್ರಶ್ನಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ಯಾಗಿ ಹಾಗೂ ಅವರ ಸಹೋದರರಾದ ಜೂಲಿ, ಡೋಸ್ಕಾ ತ್ಯಾಗಿ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಯುರೋಪ್ನ ಮಧ್ಯವರ್ತಿಗಳಾದ ಕಾರ್ಲೋ ಗೆರೋಸಾ ಮತ್ತು ಗಿಡೋ ಹಷ್ಕೆ ಜತೆಗಿನ ಸಂಬಂಧದ ಕುರಿತು ಸಿಬಿಐ ಅಧಿಕಾರಿಗಳು ಪ್ರಶ್ನೆ ಮಾಡಿದ್ದರು.
ಲಂಚದ ಹಣವನ್ನು ವರ್ಗಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು ಎನ್ನಲಾದ ಭಾರತೀಯ ಕಂಪನಿಗಳಾದ ಏರೋಮ್ಯಾಟ್ರಿಕ್ಸ್, ಐಡಿಎಸ್ ಇನ್ಫೋಟೆಕ್ ಕಂಪನಿಗಳ ಅಧಿಕಾರಿಗಳ ವಿಚಾರಣೆಯನ್ನು ಈಗಾಗಲೇ ನಡೆಸಲಾಗಿದೆ. ಇಟಲಿಯ ಡಿಫೆನ್ಸ್ ಕಂಪನಿ ಫಿನ್ ಮೆಕ್ಯಾನಿಕಾ(SIFI.MI) ಹಾಗೂ ಭಾರತದ ಆಂಗ್ಲೋ ಇಟಾಲಿಯನ್ ಘಟಕ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಸರು ಕೂಡಾ ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ.