ಯಡಿಯೂರಪ್ಪ 'ಡೆಡ್ ಲೈನ್' ಬರೀ 'ಹೆಡ್ ಲೈನ್' ಅಷ್ಟೇ!

ನಗರದ ಅರಮನೆ ಮೈದಾನದಲ್ಲಿ ಗುರುವಾರ(ಡಿ.27) ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸ್ಥಿರವಾಗಿದೆ, ಅವಧಿ ಪೂರೈಸುತ್ತದೆ. ಜಗದೀಶ್ ಶೆಟ್ಟರ್ ಅವರು ಉತ್ತಮ ಬಜೆಟ್ ಮಂಡಿಸುತ್ತಾರೆ ಎಂದು ಅನಂತ್ ಕುಮಾರ್ ಹೇಳಿದರು.
ಬಿಜೆಪಿಯಲ್ಲೇ ಇದ್ದು, ಬಿಜೆಪಿ ತೊರೆದ ಕೆಲ ನಾಯಕರು ಸರ್ಕಾರಕ್ಕೆ ಡೆಡ್ ಲೈನ್ ನೀಡುತ್ತಿದ್ದಾರೆ. ಆ ಡೆಡ್ ಲೈನ್ ಕೇವಲ ಪತ್ರಿಕೆಗಳ 'ಹೆಡ್ ಲೈನ್' ಗಷ್ಟೇ ಮಾತ್ರ ಸೀಮಿತ ಎಂದು ಅನಂತ್ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಜೊತೆಗೂಡಿ ಅವಿಶ್ವಾಸ ನಿರ್ಣಯ ತಂದರೂ ಈ ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಗಳು ಯಶಸ್ವಿಯಾಗದು ಎಂದರು.
ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಉತ್ತಮ ಬಜೆಟ್ ಮಂಡಿಸುವ ಸಂಕಲ್ಪ ಹೊಂದಿದ್ದಾರೆ. ಅವರು ಉತ್ತಮ ಬಜೆಟ್ ನೀಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಅನಂತ್ ಹೇಳಿದ್ದಾರೆ.
ಕೆಜೆಪಿ ಕಾಂಗ್ರೆಸ್ ಬಿ ಟೀಮ್: ಕರ್ನಾಟಕ ಜನತಾ ಪಕ್ಷ ಕಾಂಗ್ರೆಸ್ಸಿನ ಬಿ ಟೀಮ್ ಆಗಿದೆ. ಸರ್ಕಾರದ ವಿರುದ್ಧ ಎತ್ತಿಕಟ್ಟಿ ಹಿಂಬಾಗಿಲಿನಿಂದ ಯುದ್ಧ ಮಾಡುತ್ತಿರುವ ಕಾಂಗ್ರೆಸ್ಸಿನ ಕುತಂತ್ರದ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ಕಾಂಗ್ರೆಸ್ಸಿನ ಬಿ ಟೀಮ್ ಆಟ ಇಲ್ಲಿ ನಡೆಯುವುದಿಲ್ಲ ಎಂದರು.
ಬಿಜೆಪಿ ಯಾವುದೇ ಒಂದು ವ್ಯಕ್ತಿಯ ಪಕ್ಷವಲ್ಲ, ಕಾರ್ಯಕರ್ತರ ಜನರ ಪಕ್ಷ . ಬೆಂಗಳೂರಿನ ಅಭಿವೃದ್ಧಿಗೆ ಕಳೆದ ನಾಲ್ಕುವರ್ಷಗಳಲ್ಲಿ ಬಿಜೆಪಿ ಸಕ್ರಾರ ಹಲವು ಕೆಲಸಗಳನ್ನು ಮಾಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅವರ ಹೆಸರಿಡುವಂತೆ ಹೋರಾಟ ಮಾಡಲಾಗಿದೆ.
ದೆಹಲಿ ಅತ್ಯಾಚಾರ ಪ್ರಸಂಗದ ನಂತರ ಕೇಂದ್ರದ ಯುಪಿಎ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಸೋತಿರುವುದು ಸ್ಪಷ್ಟವಾಗುತ್ತದೆ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನು ಜಾರಿಗೊಳ್ಳಬೇಕು. ಈ ಎಲ್ಲಾ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ಇದೆ. ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಅಪರಾಧ ಎಸೆಗುವವರ ವಿರುದ್ಧ ಗುಂಡಾಕಾಯ್ದೆ ಬಳಸಲು ಚಿಂತನೆ ನಡೆಸಲಾಗಿದೆ ಎಂದು ಅನಂತ್ ಹೇಳಿದರು.












Click it and Unblock the Notifications