ಭೂ ಹಗರಣ: ಸಿಬಿಐ ತನಿಖೆಗೆ ನಾನೇ ಆಗ್ರಹಿಸುತ್ತೇನೆ

ನಮ್ಮದೇ ಪಕ್ಷದ ಹಿರಿಯ ಧುರೀಣರು ತನ್ನ ಮೇಲೆ ಮಾಡಿದ ಆರೋಪವನ್ನು ತಾನು ಗೌರವಪೂರ್ವಕವಾಗಿ ಸ್ವೀಕರಿಸಿದ್ದೇನೆ. ಈ ಬಗ್ಗೆ ನ್ಯಾಯಾಂಗ ತನಿಖೆ, ಸಿಐಡಿ ಅಥವಾ ಅಗತ್ಯ ಬಿದ್ದರೆ ಸಿಬಿಐ ತನಿಖೆ ಮಾಡುವಂತೆ ತಾನೇ ಆಗ್ರಹಿಸುತ್ತೇನೆ ಎಂದು ರಾಮದಾಸ್ ಹೇಳಿದರು.
ತಾವು ಈ ಹಿಂದೆಯೇ ರಾಜ್ಯ ಉಪ ಮುಖ್ಯಮಂತ್ರಿ ಈಶ್ವರಪ್ಪರಿಗೆ ಸವಿವರವಾದ ಪತ್ರ ಬರೆದು ತಾನು ಆಗಸ್ಟ್ 16ರಂದು ನಡೆಸಿದ ಪತ್ರಿಕಾಗೋಷ್ಠಿ, ಆಗಸ್ಟ್ 15ರಂದು ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ತಮಗೆ ಬರೆದ ಪತ್ರ, ಡಿಸಿ ಜೂನ್ 20ರಂದು ನೀಡಿದ ಕೋರ್ಟ್ ಆದೇಶದ ಬಗ್ಗೆ ಉಲ್ಲೇಖಿಸಿ ವಿವರಣೆ ನೀಡಿದ್ದೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕೆಂದು ಗೋ.ಮಧುಸೂದನ್ ತನ್ನನ್ನು ಕೋರಿದ್ದರು.
ಇದಕ್ಕೆ ಸಂಬಂಧಿಸಿದಂತೆ ತಾನು ಆಗಸ್ಟ್ 21ರಂದು ಮತ್ತೊಂದು ಪತ್ರವನ್ನು ಡಿಸಿಎಂರಿಗೆ ಬರೆದು ಅದರಲ್ಲಿ ಕಳೆದ ಆರು ದಶಕಗಳಿಂದ ಗೊಂದಲದ ಗೂಡಾಗಿರುವ ಪ್ರಸ್ತಾವಿತ ಅಂಶಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಅರವತ್ತು ವರ್ಷಗಳಲ್ಲಿ ವಿವಿಧ ನಿರ್ಧಾರಗಳನ್ನು ಪ್ರಕಟ ಮಾಡಿರುವುದನ್ನು ಉಲ್ಲೇಖಿಸಿದ್ದೆ.
ಹಾಗೂ ಪ್ರಸ್ತುತ ಈ ಜಮೀನಿನಲ್ಲಿ ಇರುವ ಕಾರಂಜಿಕೆರೆ, ಲಲಿತಮಹಲ್ ಅರಮನೆ, ಎಸ್ಐಆರ್ಡಿ ಸಿದ್ಧಾರ್ಥನಗರ ಬಡಾವಣೆ, ಜೆಸಿ ಬಡಾವಣೆ, ಕೆಸಿ ಬಡಾವಣೆ, ಪೊಲೀಸ್ ಕ್ವಾಟ್ರಸ್, ಪೊಲೀಸ್ ಕಮಾಂಡೆಂಟ್ ಕಚೇರಿ ಇವೆಲ್ಲವೂ ಇದರಲ್ಲಿ ಒಳಗೊಂಡಿರುತ್ತದೆ.
ಇದಲ್ಲದೇ ಸುಮಾರು 213ಕ್ಕೂ ಹೆಚ್ಚು ಜಮೀನು ಕೈ ಬದಲಾವಣೆ ನಡೆದಿರುವುದರ ಬಗ್ಗೆ ಕೂಡಾ ಮಧುಸೂದನ್ ನೀಡಿರುವ ದಾಖಲೆಗಳನ್ನು ಆಧರಿಸಿ ಸವಿವರವಾಗಿ ತಮ್ಮ ಗಮನಕ್ಕೆ ತಂದು ಈ ಕುರಿತು ನ್ಯಾಯಾಂಗ ತನಿಖೆಗೆ ಎರಡು ತಿಂಗಳೊಳಗಾಗಿ ಆದೇಶಿಸಬೇಕೆಂದು ಮನವಿ ಮಾಡಿದ್ದೆ. ಆದರೆ 94 ದಿನಗಳಾದರೂ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿಲ್ಲ ಎಂದು ರಾಮದಾಸ್ ದೂರಿದರು.
ಚಾಮುಂಡಿ ಮೇಲಾಣೆ 1 ರು ಲಂಚ ಮುಟ್ಟಿಲ್ಲ. ನಾನು ಅಧಿಕಾರಕ್ಕೆ ಬಂದ ಮೇಲೆ 1 ರು ಯಾರಿಂದಲೂ ಪಡೆದಿಲ್ಲ. ಚಾಮುಂಡಿ ಬೆಟ್ಟದ ತಪ್ಪಲಿನ ಅವ್ಯವಹಾರದಲ್ಲಿ ನಾನಾಗಲಿ ನನ್ನ ಕುಟುಂಬ ವರ್ಗವಾಗಲಿ ಭಾಗಿಯಾಗಿಲ್ಲ. ಜಿಲ್ಲಾಧಿಕಾರಿ ವಸ್ತ್ರದ್ ವರ್ಗಾವಣೆಯಲ್ಲಿ ನನ್ನ ಪಾತ್ರವಿಲ್ಲ ಎಂದು ರಾಮದಾಸ್ ಸ್ಪಷ್ಟಪಡಿಸಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ 449 ಎಕರೆ ಜಮೀನು ಕಬಳಿಸಲು ಸಚಿವ ರಾಮದಾಸ್ ಸಂಚು ನಡೆಸಿದ್ದಾರೆ ಎಂಬ ಆರೋಪವಿದೆ.












Click it and Unblock the Notifications