ಕೃಷ್ಣ ಸಂಧಾನ ಸಫಲ; ಕಾಂಗ್ರೆಸ್ನತ್ತ ಪಕ್ಷೇತರರು

ಕೃಷ್ಣ ರಾಜ್ಯಕ್ಕೆ ಆಗಮಿಸುತ್ತಿರುವಂತೆ ಕಾಂಗ್ರೆಸ್ನತ್ತ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಹೊಸ ಪಕ್ಷ ಸ್ಥಾಪಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲೆಕ್ಕಾಚಾರವಾಗಿ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುತ್ತಿರುವುದು ಬಿಜೆಪಿ ಆತಂಕ ಹೆಚ್ಚಿಸಿದೆ.
ಪಕ್ಷೇತರ ಶಾಸಕರಾದ ನರೇಂದ್ರಸ್ವಾಮಿ, ವೆಂಕಟರಮಣಪ್ಪ, ಡಿ.ಸುಧಾಕರ್, ಶಿವರಾಜ್ತಂಗಡಗಿ, ಗೂಳಿಹಟ್ಟಿ ಶೇಖರ್ ಗುರುವಾರ(ನ.8) ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಿ ಔಪಚಾರಿಕ ಚರ್ಚೆ ನಡೆಸಿದ್ದಾರೆ.
ಪಕ್ಷೇತರರ ಪೈಕಿ ಮಳವಳ್ಳಿ ಕ್ಷೇತ್ರದ ನರೇಂದ್ರ ಸ್ವಾಮಿ, ಪಾವಗಡ ಕ್ಷೇತ್ರದ ವೆಂಕಟರಮಣಪ್ಪ, ಹಿರಿಯೂರು ಕ್ಷೇತ್ರದ ಡಿ.ಸುಧಾಕರ್ ಮೂಲತಃ ಕಾಂಗ್ರೆಸ್ನವರಾಗಿದ್ದಾರೆ. ಕನಕರಿಗೆ ಕ್ಷೇತ್ರದ ಶಿವರಾಜ ತಂಗಡಗಿ ಮೂಲತಃ ಬಿಜೆಪಿ, ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ್ ಜೆಡಿಎಸ್ನವರಾಗಿದ್ದರು.
ವೆಂಕಟರವಣಪ್ಪ ಹಾಗೂ ಡಿ.ಸುಧಾಕರ್ ಎಸ್.ಎಂ.ಕೃಷ್ಣರ ಬೆಂಬಲಿಗರಾಗಿದ್ದು, ಹಲವು ಬಾರಿ ಕಾಂಗ್ರೆಸ್ ಟಿಕೆಟ್ ಪಡೆದಿದ್ದು, ಶಾಸಕರೂ ಆಗಿದ್ದರು. ಕೃಷ್ಣ ಅವರ ತವರು ಜಿಲ್ಲೆ ಮಂಡ್ಯದವರಾದ ನರೇಂದ್ರಸ್ವಾಮಿ ಆರಂಭದಿಂದಲೂ ಅವರೊಂದಿಗೆ ರಾಜಕಾರಣ ಮಾಡಿಕೊಂಡು ಬಂದಿದ್ದರು. ಎರಡು ಬಾರಿ ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಕನಕಗಿರಿಯಲ್ಲಿ ಲಿಂಗಾಯಿತರು ಹೆಚ್ಚಿರುವ ಕಾರಣ ಕೆಜೆಪಿಗೆ ಬರುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಹ್ವಾನ ನೀಡಿದ್ದರು. ಇದನ್ನು ತಂಗಡಗಿ ತಳ್ಳಿಹಾಕಿದ್ದಾರೆ ಎನ್ನಲಾಗಿದೆ.
ಪಕ್ಷೇತರರ ಪೈಕಿ ಈಗ ಸಚಿವರಾಗಿರುವ ವರ್ತೂರು ಪ್ರಕಾಶ್ ಹೊರತು ಪಡಿಸಿ ಉಳಿದ ಐವರು ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ. ಮಾಜಿ ಸಚಿವರಾಗಿದ್ದ ಈ ಐವರು ಕಳೆದ ಏಳೆಂಟು ತಿಂಗಳ ಹಿಂದೆಯೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಅದರ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಇತರ ಮುಖಂಡರ ಜೊತೆಯೂ ಚರ್ಚೆ ನಡೆಸಿದ್ದಾಗಿದೆ. ಕಾಂಗ್ರೆಸ್ನಲ್ಲಿ ಐವರಿಗೂ ಟಿಕೆಟ್ ಖಚಿತವಾದ ತಕ್ಷಣ ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ಧಗೊಳ್ಳಲಿದೆ. ಈ ನಿಟ್ಟಿನಲ್ಲಿ ಇಂದು ಎಸ್.ಎಂ.ಕೃಷ್ಣರೊಂದಿಗಿನ ಮಾತುಕತೆ ಮಹತ್ವ ಪಡೆದಿದೆ.
ಇನ್ನೂಬ್ಬ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಸಚಿವರಾಗಿದ್ದರೂ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರಾಗಿದ್ದ ವರ್ತೂರು ಆರಂಭದಲ್ಲಿ ಬಿಜೆಪಿಗೆ ಬೆಂಬಲ ನೀಡಿರಲಿಲ್ಲ. ಐವರು ಪಕ್ಷೇತರರು ಹೊರ ಹೊದ ನಂತರ ಬಿಜೆಪಿಗೆ ಬೆಂಬಲ ನೀಡಿದ್ದರು. ಆದರೆ, ಪ್ರಯೋಜನಕ್ಕೆ ಬಾರದ ಖಾತೆ ನೀಡಿದ್ದಾರೆ ಎಂದು ಬಹಿರಂಗ ಟೀಕೆ ಮಾಡಿರುವ ಅವರು ಬಿಎಸ್ಆರ್ ಕಾಂಗ್ರೆಸ್ ಸೇರುವುದಾಗಿ ಹೇಳಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಕೈ ಹಿಡಿದವರನ್ನು ದೂರಾಗಿಸಿದ ಬಿಜೆಪಿ ಈಗ ಬೆಲೆ ತೆರಬೇಕಾಗಿದೆ. ಬಿಜೆಪಿ ತಳ್ಳಿದ ಪಕ್ಷೇತರರನ್ನು ಮತ್ತೆ ಮರಳಿ ಸೆಳೆದುಕೊಳ್ಳಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಎಲ್ಲರೂ ಕಾಂಗ್ರೆಸ್ ನತ್ತ ವಾಲುವುದು ಖಚಿತವಾಗಿದೆ.












Click it and Unblock the Notifications