ಭಾವನೆಗಳಿಂದ ಕೇಸು ಗೆಲ್ಲಲು ಸಾಧ್ಯವಿಲ್ಲ: ಕಾನೂನು ತಜ್ಞ

ನಿರೀಕ್ಷೆಯಂತೆ, ನೀರು ಬಿಡುವ ವಿಷಯವನ್ನು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕಾವೇರಿ ನದಿ ಪ್ರಾಧಿಕಾರದ ಮುಂದೆ ಇತ್ಯರ್ಥಮಾಡಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಕಾವೇರಿ ಪ್ರಾಧಿಕಾರ ಕಳುಹಿಸಿರುವ ಅಧ್ಯಯನ ತಂಡ ಇನ್ನೂ ತನ್ನ ವರದಿಯನ್ನು ನೀಡಬೇಕಿದೆ. ಹೀಗಾಗಿ ವರದಿಯನ್ನು ಪರಿಶೀಲಿಸಿ CRA ಮುಂದಿನ ತೀರ್ಮಾನ ನೀಡುವ ಸಾಧ್ಯತೆ ಇದೆ ಎಂದು ಅಶೋಕ್ ಹಾರ್ನಹಳ್ಳಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಭಾವೋದ್ವೇಗ, ಜನರ ಕಷ್ಟ ನಷ್ಟದ ಕತೆ ಹೇಳಿಕೊಂಡು ಈ ಪ್ರಕರಣವನ್ನು ಗೆಲ್ಲಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸರಿಯಾದ ದಾಖಲೆ ಮತ್ತು ಅಂಕಿ ಅಂಶಗಳೇ ನಮ್ಮ ಪರ ತೀರ್ಪು ತಂದು ಕೊಡಬಲ್ಲದು. ಅಧ್ಯಯನ ತಂಡ ತನ್ನ ವರದಿಯನ್ನು ಅಕ್ಟೋಬರ್ 11 ರಂದು CRAಗೆ ಸಲ್ಲಿಸುವ ಸಾಧ್ಯತೆಯಿದೆ. ಹೀಗಾಗಿ ಈಗ CRA ತೆಗೆದುಕೊಳ್ಳುವ ನಿರ್ಣಯವೇ ಪ್ರಮುಖವಾಗಲಿದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಹೇಳಿದ್ದಾರೆ.
ತಮಿಳುನಾಡಿಗೆ ಇದೇ ರೀತಿ ನೀರು ಬಿಡುತ್ತಿದ್ದರೆ ಸುಮಾರು 2 ಕೋಟಿ ಜನರು ನೀರಿಲ್ಲದೆ ಸಾಯಬೇಕಾಗುತ್ತದೆ. ಕರ್ನಾಟಕದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸುವ ಸಾಧ್ಯತೆಯೂ ಇದೆ. ಆದರೆ, 'ತಮಿಳುನಾಡಿಗೆ ನೀರು ಬಿಡುವುದಿಲ್ಲ' ಎಂಬ ಜಗದೀಶ್ ಶೆಟ್ಟರ್ ಸರ್ಕಾರದ ದೃಢ ನಿರ್ಧಾರ ಎಲ್ಲಿಯವರೆಗೂ ಪಾಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸುಮಾರು 15 ಲಕ್ಷ ಎಕರೆ ಭೂಮಿಯಲ್ಲಿನ ಸಾಂಬಾ ಭತ್ತದ ಬೆಳೆ ಉಳಿಸಲು ತಮಿಳುನಾಡಿಗೆ ಅಕ್ಟೋಬರ್ 1, 2012 ರಿಂದ ಜನವರಿ 31, 2013ರ ತನಕ ಸುಮಾರು 123 ಟಿಎಂಸಿ ಅಡಿ ಅಥವಾ ಪ್ರತಿದಿನ ಸರಾಸರಿ 1 ಟಿಎಂಸಿ ಪೂರೈಕೆ ಮಾಡಬೇಕಿದೆ. ತಮಿಳ್ಯುನಾಡು ಒಟ್ಟಾರೆ 38 ಟಿಎಂಸಿ ಅಡಿ ನೀರಿಗೆ ಬೇಡಿಕೆ ಸಲ್ಲಿಸಿದೆ.
ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾದರೆ ಉಗ್ರ ಹೋರಾಟ ನಡೆಸಲಾಗುತ್ತದೆ.ಮುಂದಿನ ಹೋರಾಟದ ರೂಪು ರೇಷೆಗಳ ಬಗ್ಗೆ ಕಾವೇರಿ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ರೈತ ಮುಖಂಡರ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ಮಾದೇಗೌಡರು ಹೇಳಿದ್ದಾರೆ.
ನೀರು ಬಿಡಲ್ಲ ಎಂದು ನೀರು ಬಿಟ್ಟಿದ್ದಾರೆ. ಸರ್ಕಾರದ ಮೇಲೆ ಜನರಿಗೆ ನಂಬಿಕೆ ಇಲ್ಲ. ಹೀಗಾಗಿ ಜನಾಂದೋಲನ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಕಾವೇರಿ ಕೊಳ್ಳ ಪ್ರಾಂತ್ಯ ಶಾಸಕರು, ಸಂಸದರು ರಾಜೀನಾಮೆ ನೀಡಲಿ. ತಮಿಳುನಾಡಿಗೆ ನೀಡು ಬಿಡುವುದನ್ನು ನಿಲ್ಲಿಸುವವರೆಗೂ ನನ್ನ ಹೋರಾಟ ಮುಂದುವರೆಯಲಿದೆ. ಉಪವಾಸ ಸತ್ಯಾಗ್ರಹ ನಿಲ್ಲಿಸಲು ಸಾಧ್ಯವಿಲ್ಲ' ಎಂದು ಕಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ ಮಾದೇಗೌಡ ಅವರು ಮತ್ತೊಮ್ಮೆ ಆಗ್ರಹ ಪಡಿಸಿದ್ದಾರೆ.












Click it and Unblock the Notifications